ಜೈಪುರ: ಭೂ ವಿವಾಧದ ಹಿನ್ನೆಲೆಯಲ್ಲಿ ಎರಡು ಕುಟುಂಬಗಳ ನಡುವೆ ಘರ್ಷಣೆ ನಡೆದಿದ್ದು, ನೆಲಕ್ಕೆ ಬಿದ್ದ ದಾಯಾದಿ ಮೇಲೆ ಸಹೋದರ 8 ಬಾರಿ ಟ್ರ್ಯಾಕ್ಟರ್ ಅನ್ನು ಹತ್ತಿಸಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ರಾಜಸ್ಥಾನದ ಭರತ್ಪುರದಲ್ಲಿ ನಡೆದಿದೆ. ಈ ಭೀಕರ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೀಕ್ಷಿಸುತ್ತಿರುವ ಸಹಸ್ರಾರು ಮಂದಿ ಭಯಾಂದೋಲನ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ: 2022ರಲ್ಲೇ ಹುಲಿ ಚರ್ಮ ಹಿಂದಿರುಗಿಸಲಾಗಿದೆ; ಈ ಚರ್ಮ ಎಲ್ಲಿಂದ ಬಂತು? ಎಂದು ಸ್ಪಷ್ಟನೆ ನೀಡಿದ ವಿನಯ್ ಗುರೂಜಿ
ನಿರ್ಪತ್ ಮೃತ ದುರ್ದೈವಿ. ಆರೋಪಿ ದಾಮೋದರ್ ತನ್ನ ಸಹೋದರ ನಿರ್ಪತ್ ಮೇಲೆ ಎಂಟು ಬಾರಿ ಟ್ರ್ಯಾಕ್ಟರ್ ಅನ್ನು ಹಿಂದಕ್ಕೆ ಮತ್ತು ಮುಂದಕ್ಕೆ ಓಡಿಸಿದ್ದಾನೆ. ಕಡೆಗೆ ಆತ ಮೃತಪಟ್ಟಿದ್ದನ್ನು ದೃಢಪಡಿಸಿಕೊಂಡು ಟ್ರ್ಯಾಕ್ಟರ್ ನಿಲ್ಲಿಸಿದ್ದಾನೆ. ಪ್ರಸ್ತುತ ದಾಮೋದರ್ ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಭರತ್ಪುರದ ಬಹದ್ದೂರ್ ಸಿಂಗ್ ಮತ್ತು ಅತಾರ್ ಸಿಂಗ್ ಕುಟುಂಬಗಳು ತುಂಡು ಭೂಮಿಗೆ ಸಂಬಂಧಿಸಿದಂತೆ ದೀರ್ಘಕಾಲದ ವಿವಾದದಲ್ಲಿ ಸಿಲುಕಿಕೊಂಡಿವೆ. ಬುಧವಾರ ಬೆಳಗ್ಗೆ ಬಹದ್ದೂರ್ ಸಿಂಗ್ ಕುಟುಂಬವು ವಿವಾದಿತ ಜಮೀನಿಗೆ ಟ್ರ್ಯಾಕ್ಟರ್ನಲ್ಲಿ ತಲುಪಿದೆ. ಸ್ವಲ್ಪ ಸಮಯದ ನಂತರ ಅಥರ್ ಸಿಂಗ್ ಅವರ ಕುಟುಂಬ ಬಂದಿದೆ.
ಕೂಡಲೇ ಎರಡು ಕುಟುಂಬಗಳು ಘರ್ಷಣೆಗಿಳಿದು ದೊಣ್ಣೆ, ಕಲ್ಲುಗಳಿಂದ ಹಲ್ಲೆ ನಡೆಸಿದ್ದಾರೆ. ಗುಂಡಿನ ಸದ್ದು ಸಹ ಕೇಳಿಬಂದಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ. ಘರ್ಷಣೆ ಸಮಯದಲ್ಲಿ ಅತರ್ ಸಿಂಗ್ ಅವರ ಪುತ್ರರಲ್ಲಿ ಒಬ್ಬರಾದ ನಿರ್ಪತ್ ನೆಲಕ್ಕೆ ಬಿದ್ದಾಗ, ಆತ ಸಾಯುವವರೆಗೆ ಟ್ರ್ಯಾಕ್ಟರ್ ಅನ್ನು ದಾಮೋದರ್ ಹಿಂದೆ ಮುಂದೆ ಚಲಾಯಿಸಿದ್ದಾನೆ. ತಡೆಯಲು ಬಂದವರ ಮೇಲೆಯೂ ಟ್ರ್ಯಾಕ್ಟರ್ ಹತ್ತಿಸಲು ಹೋಗಿದ್ದಾನೆ.
ಘರ್ಷಣೆಯಲ್ಲಿ 10 ಮಂದಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.