ಕುಣಿಗಲ್: ವಿಧಾನಸಭಾ ಚುನಾವಣೆಗೆ ಇನ್ನು ಒಂದೂವರೆ ವರ್ಷ ಇರುವಾಗಲೇ ಕುಣಿಗಲ್ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ವಿಚಾರ ಮುನ್ನಲೆಗೆ ಬಂದಿದೆ. ಟಿಕೆಟ್ಗಾಗಿ ಎಸ್.ಪಿ. ಮುದ್ದಹನುಮೇಗೌಡ ಮತ್ತು ಎಚ್.ಡಿ. ರಂಗನಾಥ್ ನಡುವೆ ನೇರ ಪೈಪೋಟಿ ಏರ್ಪಟಿದ್ದು, ಪಕ್ಷದ ಕಾರ್ಯಕರ್ತರಲ್ಲಿ ಗೊಂದಲ ಮೂಡಿದೆ. ಸಂಬಂಧಿಯೂ ಆದ ಹಾಲಿ ಶಾಸಕ ಡಾ.ರಂಗನಾಥ್ ಪರ ಸಂಸದ ಡಿ.ಕೆ.ಸುರೇಶ್ ಹೇಳಿದ ಆ ಎರಡು ಮಾತು ಎಸ್ಪಿಎಂ ಬೆಂಬಲಿಗರನ್ನ ಕೆರಳಿಸಿದೆ. ತಳಮಟ್ಟದಿಂದ ಪಕ್ಷವನ್ನ ಕಟ್ಟಿ ಬೆಳೆಸಿದ್ದು ನಾವು. ನಮ್ಮ ಬೆವರು ಹರಿದಿದ್ದರ ಫಲವೇ ಸಂಸದ- ಶಾಸಕರ ಆಯ್ಕೆ ಆಗಿರೋದು… ಎಂದು ಡಿ.ಕೆ. ಸುರೇಶ್ ಮತ್ತು ಡಾ.ರಂಗನಾಥ್ಗೆ ಮುದ್ದಹನುಮೇಗೌಡರು ಮಾತಿನಲ್ಲೇ ಚಾಟಿ ಬೀಸಿದ್ದಾರೆ.
ನಾನು ಇರುವವರೆಗೂ ಕ್ಷೇತ್ರದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ, ಮುಂದಿನ ವಿಧಾನಸಭೆ ಚುನಾವಣೆಯಲ್ಲೂ ಡಾ. ಎಚ್.ಡಿ. ರಂಗನಾಥ್ ಅವರೇ ಕಾಂಗ್ರೆಸ್ ಅಭ್ಯರ್ಥಿ ಎಂದು ಸಂಸದ ಡಿ.ಕೆ.ಸುರೇಶ್ ಘೋಷಣೆ ಮಾಡಿದ್ದಾರೆ. ಈ ಕುರಿತು ವಿಜಯವಾಣಿಗೆ ಪ್ರತಿಕ್ರಿಯಿಸಿದ ಎಸ್.ಪಿ.ಮುದ್ದಹನುಮೇಗೌಡ, ಅಸೆಂಬ್ಲಿ ಸೀಟ್ ಅನ್ನು ಆ ರೀತಿ ಅನೌನ್ಸ್ ಮಾಡೋಕೆ ಸುರೇಶ್ಗೆ ಯಾರು ಅಧಿಕಾರ ಕೊಟ್ಟಿದ್ದು? ಎಐಸಿಸಿ ಅಥವಾ ಕೆಪಿಸಿಸಿ ಅಧ್ಯಕ್ಷರು ಮಾತ್ರವೇ ಟಿಕೆಟ್ ಘೋಷಣೆ ಮಾಡಬಹುದು. ಕುಣಿಗಲ್ ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷ ಕಟ್ಟುವುದರಲ್ಲಿ ನಮ್ಮ ಬೆವರು ಇದೆ. ನಾವೆಲ್ಲರೂ ಬಹಳ ವರ್ಷದಿಂದ ಬೆವರು ಹರಿಸಿದ್ದೀವಿ’ ಎನ್ನುವ ಮೂಲಕ ಈಗ ಬಂದು ಕ್ಷೇತ್ರದಲ್ಲಿ ಡಿಕೆಸು-ರಂಗನಾಥ್ ಗೆದ್ದಿದ್ದಾರೆ ಅಂದ್ರು ಅದು ನಮ್ಮೆಲ್ಲರ ಶ್ರಮದ ಫಲ ಎಂದು ಪರೋಕ್ಷವಾಗಿ ಹೇಳಿದ್ದಾರೆ.
ಕೊಟ್ಟ ಮಾತು ಉಳಿಸಿಕೊಳ್ತಾರಾ ರಾಹುಲ್: ಕಳೆದ ಲೋಕಸಭಾ ಚುನಾವಣೆಯಲ್ಲಿ ತುಮಕೂರು ಕ್ಷೇತ್ರದ ಅಭ್ಯರ್ಥಿಯಾಗಿ ದೇವೇಗೌಡರ ವಿರುದ್ಧ ಕಣಕ್ಕಿಳಿಯಬೇಕಿದ್ದ ಮುದ್ದಹನುಮೇಗೌಡರಿಗೆ ಕೊನೇ ಘಳಿಗೆಯಲ್ಲಿ ಟಿಕೆಟ್ ಕೈತಪ್ಪಿತ್ತು. ಜಿಲ್ಲೆಯಾದ್ಯಂತ ಎಸ್ಪಿಎಂ ಬೆಂಬಲಿಗರು ಬಿದೀಗಿಳಿದು ಹೋರಾಡಿದ್ದರು. ಬಂಡಾಯ ಅಭ್ಯರ್ಥಿಯಾಗಿಯೇ ಅಖಾಡಕ್ಕಿಳಿಯುವಂತೆ ಎಸ್ಪಿಎಂಗೆ ಭಾರೀ ಒತ್ತಡ ಬಂದಿತ್ತು. ಟಿಕೆಟ್ ಕೈ ತಪ್ಪಿದ್ದಕ್ಕೆ ಅಸಮಾಧಾನಗೊಂಡಿದ್ದ ಎಸ್ಪಿಎಂ, ಪಕ್ಷಾಂತರ ಮಾಡುತ್ತಾರೆ ಎಂಬ ಸುದ್ದಿ ಜಿಲ್ಲೆಯ ರಾಜಕಾರಣದಲ್ಲಿ ಸಂಚಲನ ಮೂಡಿಸಿತ್ತು. ಆಗ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಅವರೇ ಖುದ್ದು ಕರೆ ಮಾಡಿ ಎಸ್ಪಿಎಂಗೆ ಸಮಾಧಾನ ಹೇಳಿದ್ದರು. ಮುಂಬರುವ ಚುನಾವಣೆಯಲ್ಲಿ ನೀವು ಬಯುಸುವ ಕ್ಷೇತ್ರದಿಂದಲೇ ಟಿಕೆಟ್ ಕೊಡುವುದಾಗಿ ಮಾತು ಕೊಟ್ಟಿದ್ದರಂತೆ. ಎಐಸಿಸಿ ಕೊಟ್ಟ ಭರವಸೆ ಮೇರೆಗೆ ಎಸ್ಪಿಎಂ ಅವರು ಮುಂದಿನ ವಿಧಾನಸಭಾ ಚುನಾವಣೆಗೆ ಕುಣಿಗಲ್ ಕ್ಷೇತ್ರದಿಂದ ಸ್ಪರ್ಧಿಸಲು ಸಜ್ಜಾಗುತ್ತಿದ್ದಾರೆ. ಎಸ್ಪಿಎಂ ಬೆಂಬಲಿಗರು ಕ್ಷೇತ್ರದಲ್ಲಿ ಆಕ್ಟೀವ್ ಆಗಿದ್ದು, ತಳಮಟ್ಟದಿಂದ ಸಂಘಟನೆ ಕಾರ್ಯದಲ್ಲಿ ಬಿಜಿಯಾಗಿದ್ದಾರೆ.
ರಂಗನಾಥ್ ಮೇಲಿದೆ ಡಿಕೆ ಬ್ರದರ್ಸ್ ಶ್ರೀರಕ್ಷೆ:ಕಳೆದ ಚುನಾವಣೆಯಲ್ಲಿ ಬಿಬಿ ರಾಮಸ್ವಾಮಿಗೌಡರಿಗೆ ಟಿಕೆಟ್ ತಪ್ಪಿಸಿ, ಕೊನೇ ಹಂತದಲ್ಲಿ ಡಿಕೆಶಿ ಸೋದರಳಿಯ ರಂಗನಾಥ್ಗೆ ಟಿಕೆಟ್ ಕೊಡಿಸುವಲ್ಲಿ ಡಿ.ಕೆ.ಸುರೇಶ್ ಯಶಸ್ವಿಯಾಗಿದ್ದರು. ಇದೀಗ ಹಾಲಿ ಶಾಸಕ ರಂಗನಾಥ್ಗೆ ಮುಂದಿನ ಚುನಾವಣೆಗೆ ಟಿಕೆಟ್ ಸಿಗಲ್ಲ. ಅದು ಎಸ್ಪಿಎಂ ಪಾಲಾಗುತ್ತೆ ಎಂಬ ಸುದ್ದಿ ಶಾಸಕರ ಬೆಂಬಲಿಗರಲ್ಲಿ ಗೊಂದಲ ಸೃಷ್ಟಿಸಿದೆ. ಇತ್ತೀಚಿಗೆ ಶಾಸಕರು ಕ್ಷೇತ್ರದಲ್ಲಿ ಕಾಣಿಸಿಕೊಳ್ಳುವುದು ಕಡಿಮೆ ಆಗಿದೆ, ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ಮತ್ತು ರಾಜಾಜಿನಗರದತ್ತ ಗಮನಹರಿಸಿದ್ದಾರೆ ಎಂದು ಕೆಲ ಮೂಲಗಳು ತಿಳಿಸಿವೆ. ಇದರ ಜತೆಗೆ ರಂಗನಾಥ್ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಸಂಸದ ಸುರೇಶ್ರ ಸಂಬಂಧಿ. ಅವರ ಮೇಲೆ ಡಿಕೆ ಸಹೋದರರ ಶ್ರೀರಕ್ಷೆ ಇದೆ. ಯಾವುದೇ ಕಾರಣಕ್ಕೂ ಕುಣಿಗಲ್ ಕ್ಷೇತ್ರದಲ್ಲಿ ರಂಗನಾಥ್ ಬದಲಾವಣೆ ಅಸಾಧ್ಯ ಎಂಬ ಮಾತೂ ಕೇಳಿಬರುತ್ತಿದೆ. ಇದನ್ನು ಪುಷ್ಟೀಕರಿಸುತ್ತಿದೆ ಸಂಸದ ಡಿ.ಕೆ.ಸುರೇಶ್ ಅವರು ಡಿ.4ರಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸಮ್ಮುಖದಲ್ಲೇ ಎಡೆಯೂರಿನಲ್ಲಿ ಆಡಿದ ಆ ಎರಡು ಮಾತು.
ವಿಧಾನ ಪರಿಷತ್ ಕಾಂಗ್ರೆಸ್ ಅಭ್ಯರ್ಥಿ ಆರ್.ರಾಜೇಂದ್ರ ಪರವಾಗಿ ಎಡೆಯೂರಿನಲ್ಲಿ ಡಿ.4ರಂದು ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ‘ನಾನು ಇರುವವರೆಗೂ ಕುಣಿಗಲ್ ಕ್ಷೇತ್ರದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ, ಮುಂದಿನ ವಿಧಾನಸಭೆ ಚುನಾವಣೆಯಲ್ಲೂ ಡಾ. ಎಚ್.ಡಿ. ರಂಗನಾಥ್ ಅವರೇ ಕಾಂಗ್ರೆಸ್ ಅಭ್ಯರ್ಥಿ’ ಎಂದು ಸುರೇಶ್ ಘೋಷಣೆ ಮಾಡಿದರು. ‘ಮುಂದಿನ ಚುನಾವಣೆಯಲ್ಲೂ ಡಾ.ಎಚ್.ಡಿ.ರಂಗನಾಥ್ ಅವರೇ ಕಾಂಗ್ರೆಸ್ ಅಭ್ಯರ್ಥಿ. ಕಾರ್ಯಕರ್ತರಲ್ಲಿ ಆತಂಕ ಬೇಡ. ಕಾಂಗ್ರೆಸ್ ಹಾಳು ಮಾಡಲು ಕೆಲ ವ್ಯಕ್ತಿಗಳು ವಿನಾಕಾರಣ ಗೊಂದಲ ಸೃಷ್ಟಿ ಮಾಡುವುದು ಒಳ್ಳೆಯ ಬೆಳವಣಿಗೆ ಅಲ್ಲ’ ಎಂದರು. ಈ ಸಮಾರಂಭದಲ್ಲಿ ಕುಣಿಗಲ್ ಕ್ಷೇತ್ರದ ಮಾಜಿ ಶಾಸಕರೂ ಆದ ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಗೈರು ಎದ್ದು ಕಾಣಿಸುತ್ತಿತ್ತು. ಕುಣಿಗಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ಗೆ ಬೇಡಿಕೆ ಇಟ್ಟಿರುವ ಮುದ್ದಹನುಮೇಗೌಡ ಅವರನ್ನು ಉದ್ದೇಶಪೂರ್ವಕವಾಗಿಯೇ ಸಮಾರಂಭಕ್ಕೆ ಆಹ್ವಾನಿಸಿಲ್ಲ ಎಂದು ಸಭೆಯಲ್ಲಿದ್ದ ಅವರ ಅಭಿಮಾನಿಗಳೇ ಮಾತನಾಡಿಕೊಂಡರು. ಡಿಕೆಸು ಹೇಳಿಕೆ ಕ್ಷೇತ್ರದಲ್ಲಿ ಎಲ್ಲವೂ ಸರಿ ಇಲ್ಲ ಎಂಬುದನ್ನು ದೃಢಪಡಿಸಿತು.
ಅಸೆಂಬ್ಲಿ ಸೀಟ್ ಅನ್ನು ಆ ರೀತಿ ಅನೌನ್ಸ್ ಮಾಡೋಕೆ ಪಕ್ಷದ ಚೌಕಟ್ಟಿನಲ್ಲಿ ಎಂಎಲ್ಎ, ಎಂಪಿ ಸೇರಿದಂತೆ ಬೇರೆ ಯಾರಿಗೂ ಅಧಿಕಾರ ಇಲ್ಲ. ಎಐಸಿಸಿ ಅಥವಾ ಕೆಪಿಸಿಸಿ ಅಧ್ಯಕ್ಷರು ಮಾತ್ರವೇ ಘೋಷಣೆ ಮಾಡಬಹುದು. ಆ ರೀತಿಯ ಹೇಳಿಕೆ ಕೊಡೋಕೆ ಸುರೇಶ್ಗೆ ಯಾರು ಅಧಿಕಾರ ಕೊಟ್ಟಿದ್ದಾರೋ ನನಗೆ ಗೊತ್ತಿಲ್ಲ. ಅದು ನನ್ನ ಪ್ರಕಾರ ಅದು ಪಕ್ಷದ ಶಿಸ್ತಿನ ಉಲ್ಲಂಘನೆ ಎಂದೇ ಭಾವಿಸುವೆ. ಪಕ್ಷವನ್ನು ಯಾರೋ ಹಾಳು ಮಾಡಲು ಬಂದಿದ್ದಾರೆ ಅಂದರೆ ಅಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಕುಣಿಗಲ್ ತಾಲೂಕಿನಲ್ಲಿ ಇವತ್ತು ಕಾಂಗ್ರೆಸ್ನ ಸಂಸದರು ಮತ್ತು ಶಾಸಕರು ಇದ್ದಾರೆ ಅಂದ್ರೆ ನಮ್ಮೆಲ್ಲರ ಬೆವರು ವಾಸನೆ ಇದೆ. ಮುಂದೆ ಜನರೇ ತೀರ್ಪು ಕೊಡ್ತಾರೆ.
|ಎಸ್.ಪಿ.ಮುದ್ದಹನುಮೇಗೌಡ ಮಾಜಿ ಶಾಸಕ
ಡಿಕೆಶಿಗೆ ಕಾದಿದ್ಯಾ ಗಂಡಾಂತರ? ಡಿ.14ರಂದು ಎಲ್ಲವನ್ನೂ ಬಿಚ್ಚಿಡ್ತಾರಂತೆ ರಮೇಶ್ ಜಾರಕಿಹೊಳಿ!
ಹಸೆಮಣೆ ಏರಿದ 65 ವರ್ಷದ ಮೈಸೂರಿನ ವೃದ್ಧಜೋಡಿ: 35 ವರ್ಷದ ಬಳಿಕ ಪ್ರಿಯಕರನ ಸೇರಿದ ಪ್ರೇಯಸಿ
ಸ್ಕೂಟಿ ನಂಬರ್ ಪ್ಲೇಟ್ ಮೇಲೆ ‘SEX’, ಮುಜುಗರಕ್ಕೀಡಾದ ಯುವತಿ ಇದರ ಸಹವಾಸವೇ ಬೇಡ ಅಂತ ಮೂಲೆಗಿಟ್ಟಳು