ತುಮಕೂರು: ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರ ಬಗ್ಗೆ ಲಘುವಾಗಿ ಮಾತನಾಡಿದ್ದ ಮಾಜಿ ಶಾಸಕ ಕೆ.ಎನ್. ರಾಜಣ್ಣ ವಿರುದ್ಧ ಎಲ್ಲೆಡೆ ಆಕ್ರೋಶ ಭುಗಿಲೆದ್ದಿದೆ. ಮಧುಗಿರಿಯಲ್ಲಿ ಶಾಸಕ ವೀರಭದ್ರಯ್ಯ ನೇತೃತ್ವದಲ್ಲಿ ಶನಿವಾರ ಬೆಳಗ್ಗೆ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿರುವ ಜೆಡಿಎಸ್ ಕಾರ್ಯಕರ್ತರು ರಾಜಣ್ಣ ವಿರುದ್ಧ ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ. ಕುಣಿಗಲ್ನಲ್ಲಿ ಮಾಜಿ ಸಚಿವ ಡಿ.ನಾಗರಾಜಯ್ಯ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಅತ್ತ ಕಾಂಗ್ರೆಸ್ ಪಕ್ಷವೂ ರಾಜಣ್ಣರ ಹೇಳಿಕೆಯನ್ನ ತೀವ್ರವಾಗಿ ಖಂಡಿಸಿದೆ. ದೇವೇಗೌಡರ ಬಳಿ ಕ್ಷಮೆ ಕೋರುವಂತೆ ಸೂಚಿಸಿದೆ.
ಮಧುಗಿರಿ ತಾಲೂಕಿನ ಕಾವಣದಾಲದಲ್ಲಿ ಗುರುವಾರ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮಾಜಿ ಶಾಸಕ ಕೆ.ಎನ್.ರಾಜಣ್ಣ, ‘ದೇವೇಗೌಡರು ಇಬ್ಬರ ಮೇಲೆ ಹಾಕ್ಕೊಂಡು ಹೋಗ್ತಾವ್ರೇ..(ಭುಜದ ಮೇಲೆ ಕೈ ಹಾಕೋ ರೀತಿ ತೋರಿಸಿ ಹೇಳಿದ ಮಾತು) ಹತ್ತಿರದಲ್ಲೇ ಇದೇ ನಾಲ್ಕರ ಮೇಲೆ ಹೋಗೋದು…’ ಎನ್ನುತ್ತಾ ನಾಲಗೆ ಹರಿಯಬಿಟ್ಟಿದ್ದರು. ಈ ಹೇಳಿಕೆ ವಿರುದ್ಧ ಎಲ್ಲೆಡೆ ಟೀಕೆ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತ ರಾಜಣ್ಣ, ಶುಕ್ರವಾರ ದಿಢೀರ್ ಸುದ್ದಿಗೋಷ್ಠಿ ನಡೆಸಿ ತಮ್ಮ ಹೇಳಿಕೆಗೆ ಬೇಸರ ವ್ಯಕ್ತಪಡಿಸಿದ್ದರು. ನಾನು ಎಂದೂ ದೇವೇಗೌಡರ ಸಾವು ಬಯಸುವವನಲ್ಲ, ಕಾರ್ಯಕ್ರಮದಲ್ಲಿ ಆ ಪದ ಬಳಕೆಯಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ. ಸಾಧ್ಯವಾದರೆ ಸ್ವತಃ ದೇವೇಗೌಡ ಅವರನ್ನು ಭೇಟಿಯಾಗಿ ಸ್ಪಷ್ಟನೆ ನೀಡುತ್ತೇನೆ ಎಂದಿದ್ದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಂಸದ ಡಿ.ಕೆ. ಸುರೇಶ್, ಕುಣಿಗಲ್ ಶಾಸಕ ಡಾ.ರಂಗನಾಥ್ ಸೇರಿದಂತೆ ಸ್ವಪಕ್ಷದವರೇ ರಾಜಣ್ಣರ ಹೇಳಿಕೆ ವಿರುದ್ಧ ಗರಂ ಆಗಿದ್ದಾರೆ. ಇನ್ನು ಜೆಡಿಎಸ್ ವಲಯದಲ್ಲಿ ರಾಜಣ್ಣ ವಿರುದ್ಧ ಆಕ್ರೋಶ ಭುಗಿಲೆದ್ದಿದೆ.
ಮಧುಗಿರಿ ಶಾಸಕ ವೀರಭದ್ರಯ್ಯ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯುತ್ತಿದ್ದು, ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿರುವ ಜೆಡಿಎಸ್ ಕಾರ್ಯಕರ್ತರು ಪ್ರವಾಸಿ ಮಂದಿರದಿಂದ ಟಿವಿವಿ ವೃತ್ತದ ವರೆಗೆ ಮೆರವಣಿಗೆ ಹೊರಟಿದ್ದಾರೆ. ರಾಜಣ್ಣ ವಿರುದ್ಧ ಘೋಷಣೆ ಕೂಗಿ, ಆಕ್ರೋಶ ಹೊರಹಾಕುತ್ತಿದ್ದಾರೆ.
ಕುಣಿಗಲ್ನಲ್ಲಿ ಮಾಜಿ ಸಚಿವ ಡಿ.ನಾಗರಾಜಯ್ಯ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯುತ್ತಿದ್ದು, ಜೆಡಿಎಸ್ ತಾಲೂಕು ಘಟಕ ಅಧ್ಯಕ್ಷ ಬಿ.ಎನ್.ಜಗದೀಶ್ ಸೇರಿದಂತೆ ನೂರಾರು ಕಾರ್ಯಕರ್ತರು ಜಮಾಯಿಸಿದ್ದಾರೆ. ‘ರಾಜಣ್ಣನ ರಾಜಕೀಯ ಅಂತಿಮ ಶವಯಾತ್ರೆ’ ಎಂಬ ಬಿತ್ತಿಪ್ರತ್ರ ಹಿಡಿದು ಅಣಕು ಶವಯಾತ್ರೆ ನಡೆಸಿ ಜೆಡಿಎಸ್ ಕಾರ್ಯಕರ್ತರು ಆಕ್ರೋಶ ಹೊರಹಾಕಿದರು. ನಾಡು ಕಂಡ ಅತ್ಯಂತ ಧೀಮಂತ ನಾಯಕ ದೇವೇಗೌಡರು. ರಾಜಕೀಯ ಹಿರಿಯ ಮುತ್ಸದ್ಧಿ, ರೈತ ನಾಯಕ. ಬಡವರ ಪಾಲಿನ ಆಶಾಕಿರಣ. ಅವರನ್ನ ನಾವು ಸೇರಿದಂತೆ ಅಸಂಖ್ಯಾತ ಜನರು ದೇವರಂತೆ ಪ್ರೀತಿಸುತ್ತಾರೆ, ಗೌರವಿಸುತ್ತಾರೆ. ಅಂತಹವರ ಬಗ್ಗೆ ರಾಜಣ್ಣ ಲಘುವಾಗಿ ಮಾತನಾಡಿದ್ದು ಸರಿಯಲ್ಲ. ಕೂಡಲೇ ಕ್ಷಮೆ ಕೋರಬೇಕು ಎಂದು ಡಿ.ನಾಗರಾಜಯ್ಯ ಅವರು ಆಗ್ರಹಿಸಿದ್ದಾರೆ.
ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೆ.ಎಂ.ದೊಡ್ಡಿಯಲ್ಲೂ ರಾಜಣ್ಣ ವಿರುದ್ಧ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಹಾಸನ ನಗರದ ಹೇಮಾವತಿ ವೃತ್ತದಲ್ಲೂ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ರಾಜಣ್ಣನನ್ನು ಬಂಧಿಸಬೇಕು ಎಂದು ಆಗ್ರಹಿಸಿ ಹೇಮಾವತಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಪ್ರತಿಭಟನಾ ಮೆರವಣಿ ಹೊರಟಿದ್ದಾರೆ.
ನೆರೆಮನೆಯ ಸ್ತ್ರೀಯರ ಜತೆ ಶಿಕ್ಷಕನ ಕಾಮದಾಟದ ವಿಡಿಯೋ ವೈರಲ್! ಆಟ-ಪಾಠದ ನೆಪದಲ್ಲಿ ಮಕ್ಕಳನ್ನೂ ಬಿಟ್ಟಿಲ್ಲ
ಹುಷಾರ್ ನಾನಿನ್ನೂ ಬದುಕಿದ್ದೇನೆ, ಇನ್ನೆರಡು ತಿಂಗಳು ಕಾಯು… ಕೆ.ಎನ್.ರಾಜಣ್ಣಗೆ ಎಚ್ಡಿಕೆ ಹಿಗ್ಗಾಮುಗ್ಗಾ ತರಾಟೆ
ನಾನು ದೇವೇಗೌಡರ ಸಾವು ಬಯಸುವನಲ್ಲ.. ಖುದ್ದು ಅವರ ಬಳಿ ಕ್ಷಮೆಯಾಚಿಸುವೆ: ಕೆ.ಎನ್.ರಾಜಣ್ಣ