ಬೆಂಗಳೂರು: ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನ ಗೆಲ್ಲುವ ಮೂಲಕ ಜೆಡಿಎಸ್ ಪಕ್ಷದ ಅಸ್ಥಿತ್ವನ್ನು ಗಟ್ಟಿಗೊಳಿಸಲು ಈಗಿನಿಂದಲೇ ತಯಾರಿ ನಡೆಸಬೇಕು ಎಂದು ಕರೆ ನೀಡಿರುವ ಮಾಜಿ ಸಿಎಂ ಕುಮಾರಸ್ವಾಮಿ, ಸಾಂಭವ್ಯ ಅಭ್ಯರ್ಥಿಗಳ ಪಟ್ಟಿ ಕಳುಹಿಸುವಂತೆ ತಿಳಿಸಿದ್ದಾರೆ.
ಜೆಪಿ ಭವನದಲ್ಲಿ ನಡೆದ ಶಾಸಕರು, ಮಾಜಿ ಶಾಸಕರು ವೀಕ್ಷಕರು ಮತ್ತು ಪದಾಧಿಕಾರಿಗಳು ಮುಖಂಡರನ್ನೊಳಗೊಂಡ ಸಭೆಯಲ್ಲಿ ಮಾತನಾಡಿದ ಎಚ್ಡಿಕೆ, ಯಾರು ಅಭ್ಯರ್ಥಿಗಳಾದರೆ ಗೆಲುವು ಎನ್ನುವುದು ನಮಗಿಂತ ನಿಮಗೆ ಚೆನ್ನಾಗಿ ಗೊತ್ತಿರುತ್ತದೆ. ಆದ್ದರಿಂದ ಈಗಿನಿಂದಲೇ ಅಭ್ಯರ್ಥಿಗಳ ಪಟ್ಟಿ ತಯಾರಿಗೆ ಸಿದ್ಧತೆಗಳು ಆಗಬೇಕು. ಸಾಂಭವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಆದಷ್ಟು ಬೇಗ ಕಳುಹಿಸಿಕೊಡಿ. ಪಕ್ಷದಲ್ಲಿ ಗೆಲ್ಲುವ ಅಭ್ಯರ್ಥಿಗಳನ್ನು ಈಗಿನಿಂದಲೇ ಗುರುತಿಸಿ ಅವರಿಗೆ ಜವಬ್ದಾರಿ ನೀಡುವ ಮೂಲಕ ಕಾರ್ಯಕರ್ತರು ಸಹಕಾರ ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ತಾಲೂಕು ಮತ್ತು ಜಿಲ್ಲಾ ಘಟಕಗಳು ಸಭೆಗಳನ್ನು ನಡೆಸಿ ಚುನಾವಣೆಗೆ ಸಜ್ಜಾಗುವ ಕೆಲಸವನ್ನು ಇಂದಿನಿಂದಲೇ ಪ್ರಾರಂಭಿಸಬೇಕು ಎಂದರು.
ವರಿಷ್ಠ ಎಚ್.ಡಿ.ದೇವೇಗೌಡ ಮಾತನಾಡಿ, ಉಪ ಚುನಾವಣೆಗಳ ಸೋಲು, ಗೆಲುವು ಲೆಕ್ಕವಿಟ್ಟುಕೊಂಡು ಪಕ್ಷದ ಸಾಮರ್ಥ್ಯವನ್ನು ಅಳೆಯುವುದು ಸರಿಯಲ್ಲ. ಸೋಲಿನಿಂದ ಯಾರೂ ಧೃತಿಗೆಡಬೇಕಾಗಿಲ್ಲ. ಬದಲಿಗೆ ಛಲದಿಂದ ಪಕ್ಷವನ್ನು ತಳ ಮಟ್ಟದಲ್ಲಿ ಸಂಘಟನೆ ಮಾಡಲು ತೊಡಗಿಸಿಕೊಳ್ಳುವಂತೆ ಕರೆ ನೀಡಿದರು. ಜೆಡಿಎಸ್ ಇನ್ನೇನು ಮುಗಿದೇ ಹೋಯಿತು ಎಂದು ಬೀಗಿದವರನ್ನು ನೋಡಿದ್ದೇನೆ. ನನ್ನಲ್ಲಿ ಶಕ್ತಿ ಇರುವ ತನಕ ಈ ಪಕ್ಷವನ್ನು ಸಂಘಟನೆ ಮಾಡುವ ಪ್ರಯತ್ನ ಮಾಡುತ್ತೇನೆ. ಜನರ ಆರ್ಶೀವಾದ ಇರುವ ತನಕ ಯಾರೂ ಈ ಪಕ್ಷವನ್ನು ಮುಗಿಸಲು ಆಗುವುದಿಲ್ಲ ಎಂದರು.
ಜೆಡಿಎಸ್ ಅಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಮಾತನಾಡಿ, ಉಪಚುನಾವಣೆಗಳ ಸೋಲಿನ ಬಗ್ಗೆ ಚರ್ಚೆ ಮಾಡುವುದು ಬೇಡ. ಅದು ನಮಗೆ ಮುಖ್ಯವಲ್ಲ. ಮುಂಬರಲಿರುವ ಚುನಾವಣೆಗೆ ಎಲ್ಲರೂ ಒಗ್ಗಟ್ಟಿನಿಂದ ಶಕ್ತಿ ಮೀರಿ ಕೆಲಸ ಮಾಡಿದರೆ ಕಳೆದ ಬಾರಿಗಿಂತ ಹೆಚ್ಚಿನ ಸ್ಥಾನ ಗೆಲ್ಲಲು ಸಾಧ್ಯವಾಗಬಹುದು. ಈ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಮುಂದುವರಿಯಲಿ ಎಂದು ಕರೆ ನೀಡಿದರು.
ಸುಳ್ಳು ಹೇಳ್ಬೇಡಿ… ಸುಮಲತಾ ವಿರುದ್ಧ ಪ್ರತಾಪ್ ಸಿಂಹ ವಾಗ್ದಾಳಿ! ಎಚ್ಡಿಕೆ ಪರ ಬ್ಯಾಟಿಂಗ್
‘ಲೈಂಗಿಕ ಉತ್ಸವ’ದಲ್ಲಿ ಮಿಂದೆದ್ದ ನೂರಾರು ಜೋಡಿಗಳು! ನಾಲ್ಕು ದಿನ ನಡೆಯಿತು ಸೆಕ್ಸ್ ಫೆಸ್ಟಿವಲ್