ಬೆಂಗಳೂರು: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಆಪ್ತ ಉಮೇಶ್ ಮನೆ ಮೇಲೆ ಇಂದು(ಗುರುವಾರ) ಬೆಳ್ಳಂಬೆಳಗ್ಗೆ ಐಟಿ ದಾಳಿಯಾಗಿದೆ. ಬಿಎಂಟಿಸಿ ಬಸ್ನ ಕಂಡಕ್ಟರ್ ಕಂ ಡ್ರೈವರ್ ಆಗಿದ್ದ ಉಮೇಶ್ ಕೋಟ್ಯಧಿಪತಿ ಆಗಿದ್ದ ರೋಚಕ ಸಂಗತಿಗಳು ಇದೀಗ ಒಂದೊಂದೇ ಬಯಲಾಗ್ತಿದೆ.
2007-08ನೇ ಸಾಲಿನ ನೇಮಕಾತಿಯಲ್ಲಿ ಬಿಎಂಟಿಸಿ ಉದ್ಯೋಗಿಯಾಗಿ ಸೇರಿದ ಉಮೇಶ್, ಟ್ರೈನಿಯಾಗಿ ಸಾರಿಗೆ ನಿಗಮದಲ್ಲಿ ಸರ್ಕಾರಿ ಕೆಲಸ ಮಾಡುತ್ತಿದ್ದ. ಕೆಲಸಕ್ಕೆ ಸೇರಿದ ಒಂದೇ ವರ್ಷಕ್ಕೆ ಈ ಉದ್ಯೋಗ ಬೇಡ ಅನ್ನಿಸಿತ್ತು. ಅದೇ ವೇಳೆಗೆ ಬಿಎಸ್ವೈ ಮುಖ್ಯಮಂತ್ರಿಯಾಗಿ ಮೊದಲ ಬಾರಿಗೆ ಅಧಿಕಾರ ಸ್ವೀಕರಿಸಿದ್ದರು. ಬಿಎಸ್ವೈ ಸಿಎಂ ಆಗ್ತಿದ್ದಂತೆ ಎರವಲು ಸೇವೆಗೆ ಅರ್ಜಿ ಸಲ್ಲಿಸಿದ್ದ ಉಮೇಶ್, 2008ರಲ್ಲಿ ಎರವಲು ಸೇವೆಯಡಿ ಬಿಎಂಟಿಸಿಯಿಂದ ಶಕ್ತಿಸೌಧದತ್ತ ಪಯಣ ಬೆಳೆಸಿದ್ದ.
ಎರವಲು ಸೇವೆಗೆ ನಿಯೋಜನೆಗೊಳ್ಳುವ ಮುನ್ನ ಉಮೇಶ್ ವೇತನ ತಿಂಗಳಿಗೆ 3,500 ರೂಪಾಯಿ. ಅತ್ತ ಒಂದೇ ವರ್ಷಕ್ಕೆ ಟ್ರೈನಿಯಿಂದ ಪ್ರೊಬೆಷನರಿಯಾಗಿ ಬಡ್ತಿ ಪಡೆದ ಉಮೇಶ್ಗೆ ತಿಂಗಳಿಗೆ 18,000 ರೂಪಾಯಿ ವೇತನ ಬರುತ್ತಿತ್ತು. ಪ್ರಸ್ತುತ ಉಮೇಶ್ ವೇತನ ತಿಂಗಳಿಗೆ 30 ರಿಂದ 32 ಸಾವಿರ ರೂಪಾಯಿ ಇದೆ.
ಎರವಲು ಸೇವೆಗೆ ನಿಯೋಜನೆಗೊಂಡ್ರೆ ಎರಡು ವರ್ಷದ ಬಳಿಕ ಮತ್ತೆ ಮಾತೃ ಇಲಾಖೆಯಲ್ಲಿ ಕೆಲ್ಸ ಮಾಡಿ ಮತ್ತೆ ಡೆಪ್ಟೇಷನ್ ಪಡೆಯಬಹುದು. ಆದರೆ ಉಮೇಶ್ ಮಾತ್ರ 2008ರಿಂದ ಎರವಲು ಸೇವೆಯಲ್ಲಿಯೇ ಮುಂದುವರೆಯುತ್ತಿದ್ದಾರೆ. ಒಮ್ಮೆ ನಿಗಮದಿಂದ ಹೋದವರು ಮತ್ತೆ ವಾಪಸ್ ಬಾರಲೇ ಇಲ್ಲ.
ವೇತನ ಇಷ್ಟು ಕಡಿಮೆ ಇದ್ರೂ ಉಮೇಶ್ ಕೋಟ್ಯಧಿಪತಿ ಆಗಿದ್ದಾರೆ. ಸದ್ಯ ರಾಜಾಜಿನಗರದ ಭಾಷ್ಯಂ ಸರ್ಕಲ್ ಬಳಿ ಮೂರಂತಸ್ತಿನ ಮನೆಯಲ್ಲಿ ಬಾಡಿಗೆಗೆ ವಾಸವಿದ್ದರಾದರೂ ಸಹಕಾರ ನಗರದಲ್ಲಿ ಕೋಟ್ಯಂತರ ಮೌಲ್ಯದ ಮನೆ ನಿರ್ಮಾಣ ಮಾಡುತ್ತಿದ್ದಾರೆ. ಬಾಗಲಗುಂಟೆಯಲ್ಲಿ ಸೈಟ್ಗಳಿವೆ. ನೆಲಮಂಗಲದಲ್ಲಿ ಜಮೀನು, ಬಿಡಿಎದಲ್ಲಿ ಅನೇಕ ಸೈಟ್ಗಳು ಮಂಜೂರಾಗಿವೆ. ತನ್ನ ಹಾಗೂ ಕುಟುಂಬಸ್ಥರ ಹೆಸರಲ್ಲಿ ಕೋಟ್ಯಂತರ ಮೌಲ್ಯದ ಆಸ್ತಿ ಹೊಂದಿದ್ದಾರೆ. ಇತ್ತೀಚೆಗೆ ಎಲೆಕ್ಷನ್ನಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಸಹೋದರನನ್ನು ಗೆಲ್ಲಿಸಿಕೊಂಡಿದ್ದರು.
ಉಮೇಶ್ ಆದಾಯದಲ್ಲಿ ಅಕ್ರಮದ ವಾಸನೆ ಬರುತ್ತಿದ್ದು, ಸಾಬೀತಾದಲ್ಲಿ ಉಮೇಶ್ ಸಹೋದರ ಪಿಡಿಒ ಮಾಲ್ತೇಶ್, ಸ್ನೇಹಿತ ಅರವಿಂದ್, ಮತ್ತೊಬ್ಬ ಸಹ ಪಿಎ ಪ್ರಸನ್ನ ಹಾಗೂ ಉಮೇಶ್ ಕುಟುಂಬಸ್ಥರಿಗೆ ಸಂಕಷ್ಟ ಎದುರಾಗಲಿದೆ.
ಬಿಎಸ್ವೈ ಆಪ್ತನ ಮನೆ ಮೇಲೆ ಐಟಿ ದಾಳಿ! ವಿಜಯೇಂದ್ರ, ರಾಘವೇಂದ್ರರ ವ್ಯವಹಾರದಲ್ಲೂ ಉಮೇಶನ ಕೈಚಳಕ…
ಮಗು ಸಾಯುವ ಭಯದಲ್ಲಿ 8 ತಿಂಗಳ ಗರ್ಭಿಣಿ ಆತ್ಮಹತ್ಯೆ! ಈ ಸಾವಿಗೆ ಹಿಂದಿನ ದುರ್ಘಟನೆಯೇ ಕಾರಣವಾಯ್ತಾ?