ತುಮಕೂರು: ಗುಬ್ಬಿ ಕ್ಷೇತ್ರದ ಜೆಡಿಎಸ್ ಶಾಸಕ ಎಸ್.ಆರ್.ಶ್ರೀನಿವಾಸ್ ಬದುಕಿದ್ದರೂ ಅವರ ಫೋಟೋ ಸಹಿತ ತಿಥಿ ಕಾರ್ಡ್ ತಯಾರಿಸಿ ಜಾಲತಾಣದಲ್ಲಿ ಅಪ್ಲೋಡ್ ಮಾಡಿ ವಿಕೃತಿ ಮೆರೆಯಲಾಗಿದೆ.
ಶುಕ್ರವಾರ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಶ್ರೀನಿವಾಸ್ ಅಡ್ಡ ಮತದಾನ ಮಾಡಿದ್ದರು. ಈ ಬಗ್ಗೆ ಎಚ್ಡಿಕೆ ಗರಂ ಆಗಿದ್ದರು. ಶನಿವಾರ ಬೆಳಗ್ಗೆ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದ ಶ್ರೀನಿವಾಸ್, ತಾಕತ್ತಿದ್ದರೆ ನನ್ನ ಕ್ಷೇತ್ರದಲ್ಲಿ ನನ್ನ ವಿರುದ್ಧ ಚುನಾವಣೆಗೆ ಬಂದು ಸ್ಪಧಿಸಿ ಗೆಲ್ಲಲಿ. ಅವನು ಗೆದ್ದರೆ ನನ್ನ ಜೀವನ ಪೂರ ಆತನ ಮನೆಯಲ್ಲೇ ಕೂಲಿ ಕೆಲಸ ಮಾಡುವೆ ಎಂದು ಓಪನ್ ಚಾಲೆಂಜ್ ಮಾಡಿದ್ದರು. ಅಷ್ಟೇ ಅಲ್ಲ, ಇಂದು ತುಮಕೂರಲ್ಲಿ ಶ್ರೀನಿವಾಸ್ರ ಮನೆ ಮುಂದೆ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಇದಕ್ಕೆ ಪ್ರತಿಯಾಗಿ ಶ್ರೀನಿವಾಸ್ ಪರ ಇವರ ಅಭಿಮಾನಿಗಳೂ ಪ್ರತಿಭಟನೆ ನಡೆಸಿದ್ದರು. ಇಷ್ಟೆಲ್ಲಾ ಬೆಳವಣಿಗೆ ನಡುವೆ ಶ್ರೀನಿವಾಸ್ ಹೆಸರಲ್ಲಿ ತಿಥಿ ಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ.
ಫೇಸ್ಬುಕ್ನಲ್ಲಿ ಪ್ರಚಂಡ ಭೈರವ ಹೆಸರಿನ ಖಾತೆಯಿಂದ ತಿಥಿ ಕಾರ್ಡ್ ಅಪ್ಲೋಡ್ ಆಗಿದ್ದು, ಹಲವರಿಗೆ ಟ್ಯಾಗ್ ಮಾಡಲಾಗಿದೆ. ಈ ಕಾರ್ಡ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜೂನ್ 10ರಂದು ನಿಧನರಾಗಿದ್ದಾರೆ, ಜೂನ್ 21ರಂದು ಸ್ವಕ್ಷೇತ್ರ ಗುಬ್ಬಿಯಲ್ಲಿ ಕೈಲಾಸ ಸಮಾರಾಧಾನೆ ನಡೆಯಲಿದೆ ಎಂದು ಬರೆಯಲಾಗಿದೆ. ಶ್ರೀನಿವಾಸ್ರ ಅಭಿಮಾನಿಗಳು ಇದನ್ನು ನೋಡಿ ವಿಕೃತಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ನಿಖಿಲ್ ಕುಮಾರಸ್ವಾಮಿ ಪುತ್ರ ಅವ್ಯಾನ್ ದೇವ್… ತಾಯಿ ರೇವತಿ ಸೆಲೆಕ್ಟ್ ಮಾಡಿದ ಈ ಹೆಸರಿನ ಅರ್ಥ ಇಲ್ಲಿದೆ