ಕಾಸರಗೋಡು: ಚಿಕನ್ ಶವರ್ಮ ಸೇವಿಸಿದ್ದ 15 ವಿದ್ಯಾರ್ಥಿಗಳ ಪೈಕಿ ಓರ್ವ ವಿದ್ಯಾರ್ಥಿನಿ ಮೃತಪಟ್ಟು, 14 ಮಂದಿ ಅಸ್ವಸ್ಥರಾದ ಘಟನೆ ಕಾಸರಗೋಡುನಲ್ಲಿ ಸಂಭವಿಸಿದೆ.
ಕರಿವೆಳ್ಳೂರು ಪೆರಳಂ ನಿವಾಸಿ ನಾರಾಯಣನ್-ಪ್ರಸನ್ನ ದಂಪತಿ ಪುತ್ರಿ ದೇವನಂದಾ(16) ಮೃತ ವಿದ್ಯಾರ್ಥಿನಿ. ಚೆರ್ವತ್ತೂರಿನ ತಂಪು ಪಾನೀಯ ಅಂಗಡಿಯೊಂದರಲ್ಲಿ (ಕೂಲ್ ಬಾರ್) 15 ವಿದ್ಯಾರ್ಥಿಗಳು ಶನಿವಾರ ಚಿಕನ್ ಶವರ್ಮ ಸೇವಿಸಿದ್ದರು. ನಂತರ ಇವರಲ್ಲಿ ವಾಂತಿ, ಹೊಟ್ಟೆನೋವು, ಜ್ವರ ಕಾಣಿಸಿಕೊಂಡಿತು. ಹಲವು ಆಸ್ಪತ್ರೆಗಳಲ್ಲಿ ಇವರನ್ನು ದಾಖಲಿಸಲಾಗಿತ್ತು. ಇವರು ಏ.29 ಹಾಗೂ 30ರಂದು ಈ ಕೂಲ್ಬಾರ್ನಲ್ಲಿ ಚಿಕನ್ ಶವರ್ಮ ಸೇವಿಸಿದ್ದರು. ಆ ದಿನಗಳಲ್ಲಿ ಇಲ್ಲಿಂದ ಮನೆಗೆ ಪಾರ್ಸೆಲ್ ಕೊಂಡೊಯ್ದು ತಿಂದವರಲ್ಲೂ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿತ್ತು.
ಅಸ್ವಸ್ಥರಾದ ದೇವನಂದ ಅವರನ್ನು ಭಾನುವಾರ ಬೆಳಗ್ಗೆ ಚೆರ್ವತ್ತೂರಿನ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿತ್ತು. ಆರೋಗ್ಯ ತೀವ್ರ ಹದಗೆಟ್ಟ ಕಾರಣ, ಆಕೆಯನ್ನು ಕಾಞಂಗಾಡಿನಲ್ಲಿರುವ ಕಾಸರಗೋಡು ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತ್ತಾದರೂ ಬದುಕಲಿಲ್ಲ. ದೇವನಂದಾ ಎಸ್ಸೆಸ್ಸೆಲ್ಸಿ ಪೂರೈಸಿದ್ದು, ಪ್ಲಸ್ ವನ್ ತರಗತಿಗಾಗಿ ಟ್ಯೂಷನ್ಗೆ ತೆರಳುತ್ತಿದ್ದಳು. ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇತರ 14 ವಿದ್ಯಾರ್ಥಿಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.
ಚೆರ್ವತ್ತೂರಿನ ತಂಪು ಪಾನೀಯ ಅಂಗಡಿ ಮೇಲೆ ದಾಳಿ ಮಾಡಿದ ಆರೋಗ್ಯ ಇಲಾಖೆ ಅಧಿಕಾರಿಗಳು, ಅಂಗಡಿಗೆ ಬೀಗ ಜಡಿದಿದ್ದಾರೆ. ತಪಾಸಣೆಗಾಗಿ ಅಲ್ಲಿನ ಆಹಾರ ಸಾಮಗ್ರಿಯನ್ನು ಲ್ಯಾಬ್ಗೆ ರವಾನಿಸಲಾಗಿದೆ ಎಂದು ಗ್ರಾಪಂ ಅಧ್ಯಕ್ಷೆ ಸಿ.ಪ್ರಮಿಳಾ ತಿಳಿಸಿದ್ದಾರೆ. ಆಹಾರ ಹಳಸಿತ್ತು ಎಂಬ ಅನುಮಾನ ವ್ಯಕ್ತವಾಗಿದ್ದು, ಲ್ಯಾಬ್ ವರದಿ ಬಂದ ಬಳಿಕ ಈ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಮನಗರದಲ್ಲಿ ಪೊಲೀಸ್ ಮುಖ್ಯಪೇದೆ ಸಾವು: ಮದ್ವೆ ವಾರ್ಷಿಕೋತ್ಸವದ ಮುನ್ನಾದಿನವೇ ದುರಂತ