ಕೈಲಾಂಚ: ಪಂಚಾಯಿತಿ ಗ್ರಂಥಾಲಯಗಳು ವಿದ್ಯಾರ್ಥಿಗಳು, ಹಿರಿಯ ನಾಗರಿಕರು, ಮಹಿಳೆಯರ ಓದಿಗೆ ಉತ್ತಮ ವಾತಾವರಣ ಕಲ್ಪಿಸಿಕೊಡುತ್ತಿವೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಉಮಾ ಮಹದೇವನ್ ತಿಳಿಸಿದರು.
ಕೈಲಾಂಚ ಹೋಬಳಿ ವಿಭೂತಿಕೆರೆ ಗ್ರಾಮ ಪಂಚಾಯಿತಿ ಕೇಂದ್ರ ಗ್ರಂಥಾಲಯಕ್ಕೆ ಶನಿವಾರ ಭೇಟಿ ನೀಡಿದ ಅವರು, ಹಿರಿಯ ನಾಗರಿಕರು, ವಿದ್ಯಾರ್ಥಿಗಳು, ಮಹಿಳೆಯರ ಜತೆ ಸಮಾಲೋಚನೆ ನಡೆಸಿ, ಗ್ರಂಥಾಲಯ ಸೌಲಭ್ಯಗಳ ಕುರಿತು ಮಾಹಿತಿ ಕಲೆ ಹಾಕಿದರು.
ಸ್ಪರ್ಧಾತ್ಮಕ ಓದಿಗೆ ಡಿಜಿಟಲ್ ಗ್ರಂಥಾಲಯ ಅವಶ್ಯವಿದ್ದು, ಗ್ರಾಮೀಣ ಮಕ್ಕಳ ಅನುಕೂಲಕ್ಕಾಗಿ ಪರಿಸರ ಸ್ನೇಹಿ ಡಿಜಿಟಲ್ ಗ್ರಂಥಾಲಯ ತೆರೆಯಲಾಗಿದೆ. ಈಗಾಗಲೇ ಜಿಲ್ಲೆಯ ಹಲವು ಗ್ರಂಥಾಲಯಗಳು ಡೆಲ್ ಕಂಪನಿ ಸಹಭಾಗಿತ್ವದಲ್ಲಿ ಡಿಜಿಟಲ್ ಗ್ರಂಥಾಲಯಗಳಾಗಿ ಮಾರ್ಪಾಡಾಗಿದ್ದು, ಸೌಲಭ್ಯ ಒಳಗೊಂಡಿವೆ ಎಂದರು.
ಓದುವ ಬೆಳಕು: ಪ್ರತಿ ಭಾನುವಾರ ಮಕ್ಕಳಿಗೆ ಓದುವ ಬೆಳಕು ಕಾರ್ಯಕ್ರಮದ ಮೂಲಕ ಚಿತ್ರಕಲೆ, ಕ್ರೀಡೆ, ಗೀತಗಾಯನ ಸೇರಿ ಹಲವು ಚಟುವಟಿಕೆಗಳನ್ನು ಏರ್ಪಡಿಸಿ, ಅವರಲ್ಲಿ ಗ್ರಂಥಾಲಯಗಳ ಬಗ್ಗೆ ವಿಶೇಷ ಆಸಕ್ತಿ ಮೂಡಿಸುವುದರೊಂದಿಗೆ ಪ್ರತಿಭೆಯನ್ನು ಗುರುತಿಸುವ ಕೆಲಸ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಅನುಕೂಲ ಕಲ್ಪಿಸಲಾಗುತ್ತದೆ ಎಂದು ತಿಳಿಸಿದರು.
ಡೆಲ್ ಸಂಸ್ಥೆ ಸಿಎಸ್ಆರ್ ಮುಖ್ಯಸ್ಥೆ ಅರ್ಚನಾ ಶಾಹಿ, ಅರ್ಪಿತಾ, ವಿಭೂತಿಕೆರೆ ಗ್ರಾಪಂ ಅಧ್ಯಕ್ಷೆ ಮಂಗಳಗೌರಮ್ಮ ಗಿರಿಯಪ್ಪ, ಜಿಪಂ ಮುಖ್ಯ ಯೋಜನಾಧಿಕಾರಿ ಚಿಕ್ಕಸುಬ್ಬಯ್ಯ, ತಾಪಂ ಇಒ ಪ್ರದೀಪ್, ಪಿಡಿಒ ಬಿ.ಕೆ.ಗೋಮತಿ, ಜಿಲ್ಲಾ ಗ್ರಂಥಾಲಯಾಧಿಕಾರಿ ಚನ್ನಕೇಶವ, ಗ್ರಂಥಾಲಯ ಮೇಲ್ವಿಚಾರಕ ನಾಗರಾಜ್ಸಿಂಗ್ ಬಾಬು, ಶಿಕ್ಷಣ ೌಂಡೇಷನ್ನ ಪ್ರಸನ್ನ ಒಡೆಯರ್, ಅಶ್ವತ್ಥನಾರಾಯಣ್, ಗ್ರಾಮ ಡಿಜಿ ವಿಕಸನ ಜಿಲ್ಲಾ ವ್ಯವಸ್ಥಾಪಕ ವೆಂಕಟೇಶ್, ಸಿಎಂಸಿಎ ಸಂಸ್ಥೆ ಸೌಭಾಗ್ಯ ಮುಂತಾದವರು ಇದ್ದರು.
ಕೈಲಾಂಚ ಹೋಬಳಿಯ ವಿಭೂತಿಕೆರೆ ಕೇಂದ್ರ ಗ್ರಂಥಾಲಯಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಉಮಾ ಮಹದೇವನ್ ಭೇಟಿ ನೀಡಿ ಗ್ರಂಥಾಲಯದ ಬಗ್ಗೆ ಮಾಹಿತಿ ಪಡೆದರು. ಮುಖ್ಯ ಯೋಜನಾಧಿಕಾರಿ ಚಿಕ್ಕಸುಬ್ಬಯ್ಯ, ತಾಪಂ ಇಒ ಪ್ರದೀಪ್, ಗ್ರಾಪಂ ಅಧ್ಯಕ್ಷೆ ಮಂಗಳಗೌರಮ್ಮ ಗಿರಿಯಪ್ಪ ಪಿಡಿಒ ಬಿ.ಕೆ. ಗೋಮತಿ ಮತ್ತಿತರರು ಇದ್ದರು.