ಬೆಂಗಳೂರು: ದೀಪಾವಳಿ ಹಬ್ಬದ ಪ್ರಯುಕ್ತ ಎಲ್ಲ ಮುಜುರಾಯಿ ದೇವಾಲಯಗಳಲ್ಲಿ ಗೋಪೂಜೆ ಕಾರ್ಯಕ್ರಮ ಸಾಂಗವಾಗಿ ನೆರವೇರುವಂತೆ ನೋಡಿಕೊಳ್ಳಲು ಆಯಾ ಜಿಲ್ಲೆಗಳ ಪಶುಸಂಗೋಪನಾ ಅಧಿಕಾರಿಗಳನ್ನು ನಿಯೋಜಿಸಿ ಆದೇಶ ಹೊರಡಿಸಲಾಗಿದೆ ಎಂದು ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ತಿಳಿಸಿದ್ದಾರೆ.
ಬಲಿಪಾಡ್ಯಮಿ ದಿನವಾದ ಶುಕ್ರವಾರ ರಾಜ್ಯದ ದೇವಾಲಯಗಳಲ್ಲಿ ಮುಜುರಾಯಿ ಇಲಾಖೆ ಸಹಯೋಗದೊಂದಿಗೆ ಗೋಪೂಜೆ ಕಾರ್ಯಕ್ರಮವನ್ನು ಪಶುಸಂಗೋಪನೆ ಇಲಾಖೆಯಿಂದ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
ಪೂಜೆಯ ಸಂದರ್ಭಕ್ಕೆ ಹಸುಗಳನ್ನು ದೇವಾಲಯಗಳಿಗೆ ಕರೆ ತರುವ ಮತ್ತು ಗೋಪೂಜೆ ನೆರವೇರಿಸುವ ಜವಾಬ್ದಾರಿಯನ್ನು ಪಶುಸಂಗೋಪನಾ ಅಧಿಕಾರಿಗಳು ನಿರ್ವಹಿಸಲಿದ್ದಾರೆ. ಗೋವುಗಳ ರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ಗೋ ಉತ್ಪನ್ನಗಳ ಖರೀದಿಗೆ ಹೆಚ್ಚು ಒತ್ತು ನೀಡಲು ಪಶುಸಂಗೋಪನೆ ಇಲಾಖೆ ಈ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಸಚಿವರು ವಿವರಿಸಿದ್ದಾರೆ.
ಗೋಮಯ ದೀಪ ಬಳಸಿ: ಗೋಮಯದಿಂದ ಮಾಡಿದ ಪರಿಸರಸ್ನೇಹಿ ದೀಪಗಳನ್ನು ಬಳಸುವ ಮೂಲಕ ರಾಜ್ಯದ ರೈತರಿಗೆ, ಗೋಪಾಲಕರಿಗೆ ಉತ್ತೇಜನ ನೀಡುವ ಜತೆಗೆ ಜನರು ಈ ದೀಪಾವಳಿ ಹಬ್ಬವನ್ನು ಹೆಚ್ಚು ಅರ್ಥಪೂರ್ಣವಾಗಿ ಆಚರಿಸಬೇಕೆಂದು ಸಚಿವರು ಮನವಿ ಮಾಡಿದ್ದಾರೆ. ಪಶುಸಂಗೋಪನೆ ಇಲಾಖೆ ರಾಜ್ಯದ ಎಲ್ಲ ದೇಗುಲಗಳಲ್ಲಿ ಪೂಜೆ ನಡೆಸುತ್ತಿದ್ದು ಆಯಾ ಕ್ಷೇತ್ರದ ಜನಪ್ರತಿನಿಧಿಗಳು ಬಲಿಪಾಡ್ಯದ ಗೋಪೂಜೆಯಲ್ಲಿ ಪಾಲ್ಗೊಳ್ಳಬೇಕು ಎಂದು ಪ್ರಭು ಚವ್ಹಾಣ್ ಮನವಿ ಮಾಡಿದ್ದಾರೆ.