More

    ನನ್ನ ತಾಯಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡು ನಮ್ಮ ಕುಟುಂಬದಿಂದ ಕೈತಪ್ಪಿ ಹೋಗುತ್ತಿದ್ದಾರೆ, ದಯವಿಟ್ಟು ಉಳಿಸಿಕೊಡಿ…

    ಚನ್ನರಾಯಪಟ್ಟಣ: ನನ್ನ ತಾಯಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡು ನಮ್ಮ ಕುಟುಂಬದಿಂದ ಕೈತಪ್ಪಿ ಹೋಗುತ್ತಿದ್ದಾರೆ, ದಯವಿಟ್ಟು ಉಳಿಸಿಕೊಡಿ ಎಂದು ಪುತ್ರನೊಬ್ಬ ಅಂಗಲಾಚುತ್ತಿದ್ದಾರೆ.

    ತಾಲೂಕಿನ ಬಾಗೂರು ಹೋಬಳಿ ಮರುಗೂರು ಗ್ರಾಮದ ನಿವಾಸಿ ದಿ.ಪುಟ್ಟಸ್ವಾಮಿಗೌಡರ ಮಗ ಅರವಿಂದ್ ಯೋಗರಾಜ್ ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ಸ್ವಉದ್ಯೋಗ ನಡೆಸಿಕೊಂಡಿದ್ದು, ತಾಯಿ ಪುಟ್ಟಮ್ಮ(ಮೈನ್ಸ್ ಪುಟ್ಟಮ್ಮ, 65)ಮತಾಂತರ ವಿಚಾರ ತಿಳಿದಾಗಿನಿಂದ ನೆಮ್ಮದಿ ಇಲ್ಲದೆ ಪರದಾಡುತ್ತಿದ್ದಾರೆ. ಪುಟ್ಟಮ್ಮ 10-15 ವರ್ಷಗಳ ಹಿಂದೆ ನಡೆಯುತ್ತಿದ್ದ ಸದ್ಯಕ್ಕೆ ಸ್ಥಗಿತಗೊಂಡಿರುವ ಮೈನ್ಸ್​ನಲ್ಲಿ ಕೆಲಸ ಮಾಡುತ್ತಿದ್ದರು. ಇದ್ದಕ್ಕಿದ್ದಂತೆಯೇ ಕೆಲಸದಿಂದ ಸ್ವಇಚ್ಛೆಯಿಂದ ನಿವೃತ್ತಿ ಪಡೆದಿದ್ದರು. ಅದರಿಂದ ಬಂದ ಹಣದ ಜತೆಗೆ ಮಗ ಅರವಿಂದ್ ಯೋಗರಾಜ್ ಇನ್ನಷ್ಟು ಹಣ ಹೊಂದಿಸಿ ಗ್ರಾಮದಲ್ಲಿ 1.17 ಗುಂಟೆ ಕೃಷಿ ಜಮೀನು ಖರೀದಿಸಿ ತಾಯಿ ಹೆಸರಿಗೆ ನೋಂದಣಿ ಮಾಡಿಸಿದ್ದರು.

    ನಂತರ ಪುಟ್ಟಮ್ಮ ಮೈನ್ಸ್​ನ ವ್ಯವಸ್ಥಾಪಕರ ಮನೆಯಲ್ಲಿ ಮನೆಗೆಲಸಕ್ಕೆ ಸೇರಿಕೊಂಡಿದ್ದು, ವ್ಯವಸ್ಥಾಪಕರ ಪತ್ನಿ ಶಾಂತಮ್ಮ ಜತೆ ಹೆಚ್ಚು ಒಡನಾಟ ಇಟ್ಟುಕೊಂಡಿದ್ದರು. ಮೈನ್ಸ್ ವ್ಯವಸ್ಥಾಪಕ ಮೂಲತಃ ಕೋಲಾರದವರಾಗಿದ್ದು, ಕ್ರೈಸ್ತ ಧರ್ಮಕ್ಕೆ ಸೇರಿದವರು. ಪುಟ್ಟಮ್ಮ ಮಗನಿಗೆ ತಿಳಿಯದಂತೆ ಐದಾರು ವರ್ಷಗಳ ಹಿಂದೆಯೇ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ವಾರಕ್ಕೊಮ್ಮೆ ಮನೆಗೆ ಫಾದರ್ ರಾಜು ಹಾಗೂ ಇತರರು ಆಗಮಿಸಿ ಅವರಿಗೂ, ಅಕ್ಕಪಕ್ಕದವರಿಗೂ ಸೇರಿದಂತೆ ಪಾಠ-ಪ್ರವಚನ ನೀಡುತ್ತಿದ್ದರು. ಇದರಿಂದ ಗ್ರಾಮದ ನಾಲ್ಕು ಕುಟುಂಬಗಳು ಮತಾಂತರಗೊಂಡಿವೆ.

    ಮಾಸ್ತಿಯಮ್ಮ ದೇಗುಲ ಧ್ವಂಸ: ನಿವೃತಿಯಿಂದ ಬಂದ ಹಣದಲ್ಲಿ ಖರೀದಿಸಿದ್ದ 1.17 ಗುಂಟೆ ಜಮೀನಿನಲ್ಲಿ ಊರಿನ ಕೆಲ ಒಕ್ಕಲಿನವರಿಗೆ ಸೇರಿದ ಸುಮಾರು 300 ವರ್ಷಗಳಿಗೂ ಹಳೆಯದಾದ ಮಾಸ್ತಿಯಮ್ಮದೇವಿ ಚಿಕ್ಕ ದೇಗುಲವಿತ್ತು. ಎರಡು ವರ್ಷಗಳ ಹಿಂದೆ ಅದನ್ನು ತೆರವುಗೊಳಿಸದಿದ್ದರೆ ನಿನ್ನ ಕುಟುಂಬಕ್ಕೆ ಕೆಡಕು ಕಟ್ಟಿಟ್ಟ ಬುತ್ತಿ ಎಂದು ಫಾದರ್ ಹಾಗೂ ಸಂಗಡಿಗರು ಪುಟ್ಟಮ್ಮನನ್ನು ಹೆದರಿಸಿದ್ದಾರೆ. ಅದಾಗಲೇ ಮತಾಂತರಗೊಂಡಿದ್ದ ವೃದ್ಧೆ ಪುಟ್ಟಮ್ಮ ಯಾರಿಗೂ ತಿಳಿಯದಂತೆ ತೆರವುಗೊಳಿಸಲು ಒಪ್ಪಿಗೆ ನೀಡಿದ್ದರಿಂದ ರಾತ್ರಿ ದೇಗುಲವನ್ನು ನೆಲಸಮ ಮಾಡಲಾಗಿತ್ತು.

    ನನ್ನ ತಾಯಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡು ನಮ್ಮ ಕುಟುಂಬದಿಂದ ಕೈತಪ್ಪಿ ಹೋಗುತ್ತಿದ್ದಾರೆ, ದಯವಿಟ್ಟು ಉಳಿಸಿಕೊಡಿ...

    ಮಾಸ್ತಿಯಮ್ಮ ದೇವಿಯ ಒಕ್ಕಲಿನವರು ಹಾಗೂ ಗ್ರಾಮಸ್ಥರು ಅರವಿಂದ್ ಯೋಗರಾಜ್ ಈ ಕೃತ್ಯ ಮಾಡಿಸಿದ್ದಾರೆ ಎಂದು ಭಾವಿಸಿ ಅವರ ಮೇಲೆ ಕ್ರಮ ಕೈಗೊಳ್ಳುವಂತೆ ಠಾಣೆಗೆ ದೂರು ನೀಡಿದ್ದರು. ವಿಷಯ ತಿಳಿದು ಬೆಂಗಳೂರಿನಿಂದ ಆಗಮಿಸಿದ ಅರವಿಂದ್ ಯೋಗರಾಜ್ ಈ ಬಗ್ಗೆ ನನಗೆ ಏನೂ ಗೊತ್ತಿಲ್ಲ. ಆಗಿರುವ ತಪ್ಪನ್ನು ಸರಿಪಡಿಸುತ್ತೇನೆ ಎಂದು ಹೇಳಿದರೂ ಗ್ರಾಮಸ್ಥರು ದಂಡದ ಬದಲು ಅದೇ ಸ್ಥಳದಲ್ಲಿ ಕಲ್ಲಿನಿಂದ ಚಿಕ್ಕ ದೇಗುಲ ನಿರ್ವಿುಸುವಂತೆ ಹೇಳಿದ್ದರಿಂದ ಚಿಕ್ಕ ಗುಡಿ ನಿರ್ವಿುಸಿ ಅದಕ್ಕೆ ಪ್ರಾರಂಭಿಕ ಪೂಜೆ, ಹೋಮ ನಡೆಸಿಕೊಟ್ಟು ಇದೀಗ ನಿತ್ಯ ಪೂಜೆಗೆ ಅನುವು ಮಾಡಿಕೊಟ್ಟಿದ್ದಾರೆ.

    ತಾಯಿಯ ರಂಪಾಟ: ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿರುವ ವಿಚಾರ ತಿಳಿದ ಅರವಿಂದ್ ಯೋಗರಾಜ್ ತಾಯಿ ಪುಟ್ಟಮ್ಮ ಅವರನ್ನು ಮನವೊಲಿಸಿ ಮತ್ತೆ ಹಿಂದು ಧರ್ಮಕ್ಕೆ ಬರುವಂತೆ ಸಾಕಷ್ಟು ಪ್ರಯತ್ನ ಮಾಡಿದ್ದಾರೆ. ಆದರೆ ಅದಕ್ಕೆ ಒಪ್ಪದ ಪುಟ್ಟಮ್ಮ ಸಂಪೂರ್ಣ ಕುಟುಂಬವನ್ನೇ ಮತಾಂತರಗೊಳ್ಳುವಂತೆ ಒತ್ತಾಯಿಸಿ ಇಲ್ಲಸಲ್ಲದ ಕ್ಯಾತೆ ತೆಗೆದು ರಂಪಾಟ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

    ತಾಯಿಯನ್ನು ಕರೆದೊಯ್ದಿದ್ದಾರೆ: ನನ್ನ ತಾಯಿಯನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಗೊಳಿಸಿದ್ದಲ್ಲದೇ ಅಕ್ಕಪಕ್ಕದ ಮನೆಗಳು ಹಾಗೂ ಊರಿನ ಬಹುತೇಕರನ್ನು ಮತಾಂತರ ಮಾಡಲು ಯತ್ನಿಸುತ್ತಿದ್ದ ಫಾದರ್ ರಾಜು ಹಾಗೂ ಇತರರ ವಿರುದ್ಧ ಜಿಲ್ಲಾಧಿಕಾರಿ, ಎಸ್​ಪಿ ಹಾಗೂ ಅಂತಾರಾಷ್ಟ್ರೀಯ ಹಿಂದು ಪರಿಷತ್​ಗೆ ದೂರು ನೀಡಿದ್ದೇನೆ ಎಂದು ಅರವಿಂದ್ ಯೋಗರಾಜ್ ತಿಳಿಸಿದ್ದಾರೆ.

    ಈ ಬಗ್ಗೆ ಭೇಟಿ ನೀಡಿ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಹಾಗೂ ಎಸ್​ಪಿ ಭರವಸೆ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಐದಾರು ದಿನಗಳ ಹಿಂದೆ ರಾಜು ಹಾಗೂ ಸಹಚರರು ಲಗೇಜ್ ವಾಹನ ತಂದು ಮನೆಯಲ್ಲಿದ್ದ ಸಾಮಗ್ರಿ ತುಂಬಿಕೊಂಡು ನನ್ನ ತಾಯಿಯನ್ನು ಕರೆದುಕೊಂಡು ಇಲ್ಲಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

    ಮತಾಂತರ ವಿಚಾರದ ಬಗ್ಗೆ ಅರವಿದ್ ಯೋಗರಾಜ್ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ. ಅದು ಇನ್ನೂ ನನ್ನ ಗಮನಕ್ಕೆ ಬಂದಿಲ್ಲ. ದೂರು ಪರಿಶೀಲಿಸಿದ ಬಳಿಕ ಗ್ರಾಮಕ್ಕೆ ಭೇಟಿ ನೀಡಿ, ಮಾಹಿತಿ ಪಡೆದು ಸತ್ಯಾಸತ್ಯತೆ ನೋಡಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ.
    | ಆರ್.ಶ್ರೀನಿವಾಸಗೌಡ ಎಸ್​ಪಿ ಹಾಸನ

    ನಗರಗಳಲ್ಲಿ ನಡೆಯುತ್ತಿದ್ದ ಮತಾಂತರ ಎಂಬ ಭೂತ ಈಗಾಗಲೇ ಗ್ರಾಮೀಣ ಭಾಗವನ್ನು ಆವರಿಸುತ್ತಿದೆ. ನನಗೆ ತಿಳಿಯದೆ ನನ್ನ ತಾಯಿಯ ಮನಸ್ಸು ಕೆಡಿಸಿ ಮತಾಂತರ ಮಾಡಲಾಗಿದೆ. ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಲು ಸರ್ಕಾರ ಮುಂದಾಗಬೇಕು.
    | ಅರವಿಂದ್ ಯೋಗರಾಜ್ ಪುಟ್ಟಮ್ಮನ ಮಗ, ಮರುಗೂರು

    10-12 ವರ್ಷಗಳಿಂದ ನಮ್ಮ ಗ್ರಾಮದಲ್ಲಿ ಕ್ರೈಸ್ತ ಧರ್ಮದ ಗುರುಗಳು ಹಾಗೂ ಅನುಯಾಯಿಗಳಿಂದ ಮತಾಂತರ ನಡೆಯುತ್ತಿದೆ. ನಾವು ಕೇಳಿದರೆ ಇಲ್ಲದ ಸಮಸ್ಯೆ ತಂದೊಡ್ಡುತ್ತಾರೆ. ಜತೆಗೆ ಹಿರಿಯರು ನಮ್ಮನ್ನೇ ಬೈದು ಕಳುಹಿಸುತ್ತಾರೆ. ಸ್ಥಳೀಯರು ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ 10 ವರ್ಷಗಳಲ್ಲಿ ಇಡೀ ಗ್ರಾಮವೇ ಮತಾಂತರ ಪಟ್ಟಿಗೆ ಸೇರಲಿದೆ.
    | ಹೆಸರು ಹೇಳಲಿಚ್ಛಿಸದ ಗ್ರಾಮದ ಯುವಕ

    ಇಂಟರ್ನ್​ಶಿಪ್​ ವಿದ್ಯಾರ್ಥಿನಿಗೆ ಹಿರಿಯ ವಕೀಲನಿಂದ ಲೈಂಗಿಕ ಕಿರುಕುಳ: ಪ್ರಕರಣ ತಿರುಚಲು ಹೋಗಿ ಸಿಕ್ಕಿಬಿದ್ದ ಮಹಿಳೆ

    ಒಂದೇ ಕುಟುಂಬದ ಐವರು ಆತ್ಮಹತ್ಯೆ: ಮನೆಯ ದೇವರ ಫೋಟೋ ಹಿಂದಿತ್ತು ಮನಕಲಕುವ ದೃಶ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts