ತುಮಕೂರು: ಪಂಚಮಸಾಲಿ ಸಮುದಾಯದ ಮೀಸಲಾತಿ ಒತ್ತಾಯ ಇನ್ನಷ್ಟು ತೀವ್ರಗೊಂಡಿದ್ದು, ‘ಮೀಸಲಾತಿ ಹಕ್ಕೊತ್ತಾಯ ಪಂಚಮಸಾಲಿ ಮಹಾರ್ಯಾಲಿ’ಯನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ಫೆ.21 ರಂದು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ.
ವಿಧಾನಸೌಧಕ್ಕೆ ಹತ್ತಿರ ಇರುವುದರಿಂದ ಅರಮನೆ ಮೈದಾನವನ್ನು ಅಂತಿಮಗೊಳಿಸಲಾಗಿದೆ. ಸ್ವಾಗತ ಸಮಿತಿ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಹಾಗೂ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಸೇರಿ ಸಮಾಜದ ಮುಖಂಡರ ಸಭೆಯಲ್ಲಿ ಸಮಾವೇಶದ ಸ್ಥಳವನ್ನು ನಿರ್ಧರಿಸಲಾಗಿದೆ ಎಂದು ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು. ತುಮಕೂರಿನ ಸಿದ್ದಗಂಗಾ ಮಠದಲ್ಲಿ ಶನಿವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಆಯೋಗಕ್ಕೆ ಪತ್ರ ತಲುಪಿಲ್ಲ: ಪಂಚಮಸಾಲಿ ಸಮುದಾಯಕ್ಕೆ 2 ಎಗೆ ಮೀಸಲು ಕೊಡುವ ಸಂಬಂಧ ವರದಿ ನೀಡಲು ರಾಜ್ಯ ಶಾಶ್ವತ ಹಿಂದುಳಿದ ವರ್ಗಗಳ ಆಯೋಗಕ್ಕೆ ಕಳುಹಿಸಿದ್ದ ಪತ್ರ ಇನ್ನೂ ತಲುಪಿಲ್ಲ. ಸರ್ಕಾರದ ವಿಳಂಬಧೋರಣೆ ಮಾಡುತ್ತಿರುವ ಕಾರಣ ಏನು? ಇದು ಸಹಿಸಲು ಸಾಧ್ಯವಿಲ್ಲ ಎಂದು ಸ್ವಾಮೀಜಿ ಹೇಳಿದರು.
ಪಾದಯಾತ್ರೆ ಹತ್ತಿಕ್ಕುವ ಯತ್ನ: ಪಂಚಮಸಾಲಿ ಸಮುದಾಯದ ಪ್ರಮುಖ ಮುಖಂಡರಾದ ಬಸವನಗೌಡ ಪಾಟೀಲ್ ಯತ್ನಾಳ್ ಅವರಿಗೆ ಬಿಜೆಪಿ ಪಕ್ಷ ನೋಟಿಸ್ ನೀಡಿರುವುದರಿಂದ ಪಾದಯಾತ್ರೆ ಹತ್ತಿಕ್ಕುವ ಗುಮಾನಿ ಇದೆ. ಯತ್ನಾಳ್ ವಿರುದ್ಧ ಕ್ರಮಕ್ಕೆ ಮುಂದಾಗಿರುವುದು ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ ಆಗಿದೆ ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ ಎಚ್ಚರಿಸಿದರು.
ಯಾವುದೇ ಒತ್ತಡಕ್ಕೂ ಮಣಿಯುವುದಿಲ್ಲ: ಯಾವುದೇ ಒತ್ತಡ ಬಂದರೂ ಅರಮನೆ ಮೈದಾನದಲ್ಲೇ ಸಮಾವೇಶ ಮಾಡಲಾಗುವುದು. ಮೀಸಲಾತಿ ಪಡೆದೇ ಮನೆಗೆ ಮರಳುತ್ತೇವೆ ಎಂದು ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಹೇಳಿದರು.
“ಎಲ್ಲೆಂದರಲ್ಲಿ ಯಾವಾಗ ಬೇಕಿದ್ದರೂ ಪ್ರತಿಭಟನೆ ಮಾಡಲು ಸಾಧ್ಯವಿಲ್ಲ” : ಸುಪ್ರೀಂ ಕೋರ್ಟ್
ಮತಾಂತರಿಗಳಿಗೆ ಮೀಸಲಾತಿಯೂ ಇಲ್ಲ, ಮೀಸಲು ಪ್ರದೇಶದಿಂದ ಸ್ಪರ್ಧೆಯೂ ಇಲ್ಲ- ಸಂವಿಧಾನ ಉಲ್ಲೇಖಿಸಿದ ಸಚಿವ