ಸಿಡ್ನಿ: ಆಸ್ಟ್ರೇಲಿಯಾದ ಮಾಜಿ ವಿಕೆಟ್ ಕೀಪರ್-ಬ್ಯಾಟ್ಸ್ಮನ್ ಆಡಂ ಗಿಲ್ಕ್ರಿಸ್ಟ್ ಪ್ರವಾಸಿ ಭಾರತ ವಿರುದ್ಧದ ಮೊದಲ ಏಕದಿನ ಪಂದ್ಯದ ವೇಳೆ ಕಾಮೆಂಟರಿ ಬಾಕ್ಸ್ನಲ್ಲಿದ್ದರು. ಈ ವೇಳೆ ಅವರು ಮಾಡಿರುವ ದೊಡ್ಡ ಎಡವಟ್ಟು ಒಂದಕ್ಕೆ ಕ್ಷಮೆಯಾಚಿಸಿದ್ದಾರೆ. ಹಾಗಾದರೆ ಅವರು ಮಾಡಿರುವ ತಪ್ಪೇನು ಗೊತ್ತೇ?
ಗಿಲ್ಕ್ರಿಸ್ಟ್ ಭಾರತ ತಂಡದ ವೇಗಿಗಳಾದ ನವದೀಪ್ ಸೈನಿ ಮತ್ತು ಮೊಹಮದ್ ಸಿರಾಜ್ ನಡುವೆ ಗೊಂದಲ ಮಾಡಿಕೊಂಡಿದ್ದರು. ಇದರಿಂದಾಗಿ ಅವರು ಮೊದಲ ಏಕದಿನ ಪಂದ್ಯದ ವೇಳೆ ವೀಕ್ಷಕವಿವರಣೆ ನೀಡುತ್ತಿದ್ದಾಗ, ನವದೀಪ್ ಸೈನಿ ಅವರ ತಂದೆ ಇತ್ತೀಚೆಗೆ ನಿಧನ ಹೊಂದಿದ್ದರು ಎಂದು ಹೇಳಿದ್ದರು. ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಭಾರತದ ಕ್ರಿಕೆಟ್ ಪ್ರೇಮಿಗಳಿಂದ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಗಿಲ್ಕ್ರಿಸ್ಟ್ ಕೂಡಲೆ ಕ್ಷಮೆಯಾಚಿಸಿದ್ದರು.
‘ನನ್ನ ತಪ್ಪಿನ ಅರಿವಾಗಿದೆ. ನನ್ನ ತಪ್ಪಿಗೆ ದೊಡ್ಡ ಕ್ಷಮೆಯಾಚನೆ ಮಾಡುವೆ. ನವದೀಪ್ ಸೈನಿ ಮತ್ತು ಮೊಹಮದ್ ಸಿರಾಜ್ ಇಬ್ಬರ ಬಳಿಯೂ ಕ್ಷಮೆ ಕೇಳುತ್ತೇನೆ’ ಎಂದು ಗಿಲ್ಕ್ರಿಸ್ಟ್ ಟ್ವಿಟರ್ನಲ್ಲಿ ತಿಳಿಸಿದ್ದಾರೆ.
ಭಾರತ ಟೆಸ್ಟ್ ತಂಡದ ವೇಗಿ ಮೊಹಮದ್ ಸಿರಾಜ್ ಅವರ ತಂದೆ ಇತ್ತೀಚೆಗೆ ನಿಧನ ಹೊಂದಿದ್ದರು. ಆದರೂ ತವರೂರು ಹೈದರಾಬಾದ್ಗೆ ಮರಳಿ ಅಂತಿಮ ವಿಧಿವಿಧಾನಗಳಲ್ಲಿ ಪಾಲ್ಗೊಳ್ಳದೆ ಸಿರಾಜ್, ಆಸೀಸ್ ಪ್ರವಾಸದಲ್ಲಿ ಭಾರತ ತಂಡದ ಜತೆಗೆ ಉಳಿದುಕೊಂಡಿದ್ದರು. .
Yes, thanks @anshu2912 I realize I was mistaken in my mention. Huge apologies for my error, to both @navdeepsaini96 and Mohammed Siraj. 🙏😌 https://t.co/618EUIEyNU
— Adam Gilchrist (@gilly381) November 27, 2020