ಬೆಂಗಳೂರು: ಬಿಡದಿ ಧ್ಯಾನಪೀಠದ ನಿತ್ಯಾನಂದ ಸ್ವಾಮೀಜಿ ಭಾರತದಿಂದ ಪರಾರಿಯಾಗಿದ್ದಾನೆ ಎನ್ನುವುದು ಪೊಲೀಸರ ಹೇಳಿಕೆ. ಆತನಿಗಾಗಿ ಶೋಧ ನಡೆಸುತ್ತಲೇ ಇದ್ದಾರೆ. ಈ ನಡುವೆ, ಕಳೆದ ವರ್ಷ ತನ್ನದೇ ಆದ ದೇಶವನ್ನು ಸ್ಥಾಪಿಸಿದ್ದಾನೆ. ಅದಕ್ಕೆ ಕೈಲಾಸವೆಂದು ಹೆಸರು. ಹಿಂದು ಧರ್ಮದ ಪುನರುತ್ಥಾನವೇ ಅದರ ಉದ್ದೇಶ ಎಂದೆಲ್ಲ ಹೇಳಿಕೊಂಡಿದ್ದ.
ಕೈಲಾಸ ದೇಶಕ್ಕೆ ಇ-ಪಾಸ್ಪೋರ್ಟ್ ಚಾಲ್ತಿಗೆ ತಂದಿರುವ ನಿತ್ಯಾನಂದ ಕೆಲ ದಿನಗಳ ಹಿಂದಷ್ಟೇ ರಿಸರ್ವ್ ಬ್ಯಾಂಕ್ ಆಫ್ ಕೈಲಾಸ ಎಂದು ಪ್ರಕಟಿಸಿದ್ದ. ಕೈಲಾಸ ತನ್ನದೇ ಆದ ಕರೆನ್ಸಿ, ಆರ್ಥಿಕ ನೀತಿ ಮೊದಲಾದವುಗಳನ್ನು ಹೊಂದಲಿದೆ ಎಂದು ಘೋಷಿಸಿದ್ದ.
ಇಷ್ಟಕ್ಕೂ ಕೈಲಾಸ ಎಲ್ಲಿದೆ ಎಂಬ ಬಗ್ಗೆ ಸ್ವತಃ ನಿತ್ಯಾನಂದ ಕೂಡ ಸ್ಪಷ್ಟಪಡಿಸಿಲ್ಲ. ಈಕ್ವೆಡಾರ್ ದೇಶದಲ್ಲಿ ದ್ವೀಪವೊಂದನ್ನು ಖರೀದಿಸಿದ್ದಾನೆ ಎಂದು ಹೇಳಲಾಗುತ್ತಿದ್ದರೂ, ಅದನ್ನು ಈಕ್ವೆಡಾರ್ ಸರ್ಕಾರ ನಿರಾಕರಿಸಿತ್ತು. ಆದರೆ, ತನ್ನ ದೇಶದಲ್ಲಿ ನೆಲೆಸಲು ಅನುಮತಿ ಕೋರಿದ್ದಾನೆಯೇ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ನೀಡಿರಲಿಲ್ಲ.
ಇದನ್ನೂ ಓದಿ; ಹೊಟೇಲ್, ರೆಸ್ಟೋರಂಟ್ಗಳಲ್ಲಿ ಮದ್ಯ ಸರಬರಾಜು; ಯಾವ ರಾಜ್ಯಗಳಲ್ಲಿದೆ ಅವಕಾಶ?
ಈತನ ಹೇಳಿಕೆಯಂತೆ ಈತನದ್ದು ವರ್ಲ್ಡ್’ಸ್ ಗ್ರೇಟೇಸ್ಟ್ ಡಿಜಿಟಲ್ ಹಿಂದು ನೇಷನ್- ಕೈಲಾಸ. ಆದರೆ, ವಾಸ್ತವ ಜಗತ್ತಿನಲ್ಲಿ ಹಲವು ಕಂಪನಿಗಳು, ಸರ್ಕಾರೇತರ ಸಂಘ- ಸಂಸ್ಥೆಗಳ ಜಾಲವಾಗಿದೆ. ಇಷ್ಟಕ್ಕೂ ಈ ಪ್ರತ್ಯೇಕ ದೇಶದ ಕಲ್ಪನೆ, ಇದನ್ನು ನಡೆಸುತ್ತಿರೋದು ಹೇಗೆ ಎಂಬುದನ್ನುತಿಳಿಯಲು ಪ್ರಯತ್ನಿಸಿದರೆ, ನಿತ್ಯಾನಂದ ಹಲವು ಕಂಪನಿ, ಸರ್ಕಾರೇತರ ಸಂಘ-ಸಂಸ್ಥೆಗಳನ್ನು ವಿವಿಧ ದೇಶಗಳಲ್ಲಿ ಸ್ಥಾಪಿಸಿರುವುದು ಗೊತ್ತಾಗುತ್ತದೆ.
ಅಮೆರಿಕದ ಸ್ಯಾನ್ಜೋಸ್, ಮಿಚಿಗನ್, ಮಿನ್ನೆಸೋಟ, ಪೆನ್ಸಿಲ್ವೇನಿಯಾ, ಪಿಟ್ಸ್ಬರ್ಗ್, ಟೆನ್ನೆಸ್ಸಿ, ಡಲ್ಲಾಸ್, ಸಿಯಾಟಲ್, ಹೂಸ್ಟ್ನ್ ಮೊದಲಾದ ಕಡೆಗಳಲ್ಲಿ ನಿತ್ಯಾನಂದನ ಕಂಪನಿಗಳಿವೆ. ಜಗತ್ತಿನೆಲ್ಲೆಡೆಯಿರುವ ಸನಾತನ ಧರ್ಮದ ಅನುಯಾಯಿಗಳಿಗೆ ಪ್ರತ್ಯೇಕ ರಾಯಭಾರ ಕಚೇರಿ ಸ್ಥಾಪಿಸುವುದು. ಅತಿಥೇಯ ದೇಶದ ರಾಜಕೀಯ ಹಾಗೂ ಆರ್ಥಿಕ ನೀತಿಗಳನ್ನು ಪರಾಮರ್ಶಿಸಿ ಅದರಿಂದ ಉಂಟಾಗಬಹುದಾದ ಪರಿಣಾಮಗಳನ್ನು ಕೈಲಾಸಕ್ಕೆ ವರದಿ ಮಾಡುವುದು ಎಂದೇ ನಿತ್ಯಾನಂದ ಅನುಯಾಯಿಗಳು ಅಮೆರಿಕ ಸರ್ಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ಹೇಳಿದ್ದಾರೆ. ಮತ್ತೊಂದು ದೇಶದವರು ಹೇಳಿದಂತಿವೆ ಈ ಮಾತುಗಳು.
ಅಮೆರಿಕದಲ್ಲಿರುವ ಈ ಸಂಸ್ಥೆಗಳು ನಿತ್ಯಾನಂದ ಧ್ಯಾನಪೀಠ ಮತ್ತು ನಿತ್ಯಾನಂದ ಮಿಷನ್ ಅರ್ಥಾತ್ ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸದ ಅಧೀನಕ್ಕೆ ಒಳಪಟ್ಟಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಸರ್ಕಾರೇತರ ಸಂಸ್ಥೆಗಳ ಜಾಲವನ್ನು ಆರ್ಥಿಕ ಸಂಪನ್ಮೂಲ ಕ್ರೋಢಿಕರಿಸಲು ಹೇಗೆ ಬಳಸಲಾಗುತ್ತದೆ ಎಂಬುದನ್ನು ನಿತ್ಯಾನಂದನೇ ಈ ಹಿಂದೆ ವಿವರಿಸಿದ್ದಾನೆ. ಜಗತ್ತಿನ ಎಲ್ಲೆಡೆಯ ಜನರು ಉದಾರವಾಗಿ ದೇಣಿಗೆ ನೀಡುತ್ತಾರೆ. ಈ ಸಂಸ್ತೆಗಳು ಸ್ಥಳೀಯಾಡಳಿತದೊಂದಿಗೆ ಕೆಲಸ ಮಾಡುತ್ತಿವೆ. ಏಕೆಂದರೆ, ಆಯಾ ದೇಣಿಗೆ ಅಲ್ಲಿನ ಸರ್ಕಾರೇತರ ಸಂಸ್ಥೆಗೆ ಸೇರಿರುತ್ತದೆ, ಅಲ್ಲಿನ ನಿಯಮಗಳನ್ನು ಪಾಲಿಸಲಾಗುತ್ತದೆ. ಈ ಎಲ್ಲ ದೇಶಗಳೊಂದಿಗೆ ಅತ್ಯಂತ ಸಂಘಟನಾತ್ಮಕವಾಗಿ ಕೆಲಸ ಮಾಡುವ ವ್ಯವಸ್ಥೆಯನ್ನು ಈಗಾಗಲೇ ರೂಪಿಸಲಾಗಿದೆ.
ಇದನ್ನೂ ಓದಿ; ಕರೊನಾ ಕೇಸ್ಗಳಿಲ್ಲ; ಮಾಸ್ಕ್ ಧರಿಸೋದು ಕಡ್ಡಾಯವೇನಲ್ಲ; ಅದ್ಯಾವ ದೇಶದಲ್ಲಿದೆ ಈ ನಿರಾಳತೆ?
ಈತನ ಸಂಘಟನೆಗಳು ಅಮೆರಿಕ, ಬ್ರಿಟನ್, ಏಷ್ಯಾ ಖಂಡಗಳಲ್ಲಿ ಹಂಚಿಹೋಗಿವೆ ಎಂಬುದು ನಿತ್ಯಾನಂದ ಸಲ್ಲಿಸಿರುವ ದಾಖಲೆಗಳಿಂದ ಗೊತ್ತಾಗುತ್ತದೆ. ಕಳೆದ ಒಂದು ವರ್ಷದಲ್ಲಿ ನಿತ್ಯಾನಂದನಿಗೆ ಸಂಭಂದಿಸಿದ ಹತ್ತು ಸರ್ಕಾರೇತರ ಸಂಸ್ಥೆಗಳನ್ನು ಆರಂಭಿಸಲಾಗಿದೆ. ಹವಾಯಿ ದ್ವೀಪದ ವಿಳಾಸ ಹೊಂದಿರುವ ಕೈಲಾಸ ಇನ್ ಹವಾಯಿ ಐಲ್ಯಾಂಡ್ ಸಂಸ್ಥೆ ಲಾಭದ ಉದ್ದೇಶ ಹೊಂದಿದೆ ಎಂದು ತಿಳಿಸಲಾಗಿದೆ.
ಇದಷ್ಟೇ ಅಲ್ಲ, ಕಳೆದ ಅಕ್ಟೋಬರ್ನಲ್ಲಿ ಕೈಲಾಸ ದೇಶ ಹಾಂಗ್ಕಾಂಗ್ನಲ್ಲಿ ಖಾಸಗಿ ಕಂಪನಿಯೊಂದನ್ನು ನೋಂದಾಯಿಸಿದೆ. ಇದಕ್ಕೆ ಹಾಂಗ್ಕಾಂಗ್ ವರ್ಲ್ಡ್ ಟ್ರಸ್ಟ್ ಟವರ್ನ ವಿಳಾಸವನ್ನೇ ನೀಡಲಾಗಿದೆ. ಕಳೆದ ಏಪ್ರಿಲ್ನಲ್ಲಿ ಈ ಕಂಪನಿ ಬ್ರಿಟನ್ನಲ್ಲಿ ಎರಡು ಧಾರ್ಮಿಕ ಸಂಸ್ಥೆಗಳನ್ನು ಹುಟ್ಟು ಹಾಕಿದೆ. ಬ್ರಿಟನ್ನಲ್ಲಿ ಸಂಘ-ಸಂಸ್ಥೆಗಳು ಕಾಂಪ್ಲಿಮೆಂಟರಿ ಕರೆನ್ಸಿಗಳನ್ನು ಬಳಸಲು ಅವಕಾಶವಿದೆ. ಈ ಕಾರಣಕ್ಕೆ ನಿತ್ಯಾನಂದ ಸ್ವಂತ ಕರೆನ್ಸಿ ಹಾಗೂ ಬ್ಯಾಂಕ್ ವಿಚಾರಗಳನ್ನು ಪ್ರಸ್ತಾಪಿಸಿದ್ದಾನೆ.
ಕೆಲಸ ಕಳೆದುಕೊಂಡಿದ್ದೀರಾ…? ಸರ್ಕಾರವೇ ಕೊಡುತ್ತೆ ಮೂರು ತಿಂಗಳ ಸಂಬಳ; ಅರ್ಹತೆಗಳೇನು?