ತಿರುವನಂತಪುರ: ಕೇರಳದ ತಿರುವನಂತಪುರದ ವಿಮಾನ ನಿಲ್ದಾಣದಲ್ಲಿ ಸಿಕ್ಕಿರುವ ಚಿನ್ನದ ಬ್ಯಾಗ್ಗೆ ಸಂಬಂಧಿಸಿದ ಘಟನೆ ದಿನದಿನಕ್ಕೂ ಕುತೂಹಲದ ತಿರುವನ್ನು ಪಡೆದುಕೊಳ್ಳುತ್ತಿದೆ.
ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಖುರ್ಚಿಯನ್ನೇ ಅಲ್ಲಾಡಿಸಿರುವ ಈ ಪ್ರಕರಣದ ಪ್ರಮುಖ ಆರೋಪ ಸ್ವಪ್ನಾ ಸುರೇಶ್. ಇವರೀಗ ‘ಚಿನ್ನದ ರಾಣಿ’ ಎಂದೇ ಪ್ರಸಿದ್ಧಿ. ಪ್ರಕರಣದ ಹಲವು ಆರೋಪಿಗಳು ಸೆರೆ ಸಿಕ್ಕರೂ, ಸ್ವಪ್ನಾ ಮಾತ್ರ ‘ಗಣ್ಯರ’ ಕೃಪಾಶ್ರಯದಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.
ಈಕೆಯ ಜತೆ ಕೇಳಿ ಬಂದಿದ್ದ ಇನ್ನೊಂದು ಹೆಸರು ಸಂದೀಪ್. ಇಬ್ಬರ ಬೇಟೆಗೆ ಕಸ್ಟಮ್ಸ್ ಅಧಿಕಾರಿಗಳು ಭಾರಿ ಬಲೆ ಬೀಸಿದ್ದರು. ಆದರೆ ಇಬ್ಬರೂ ತಪ್ಪಿಸಿಕೊಳ್ಳುತ್ತಲೇ ಇದ್ದರು.
ಈ ಇಬ್ಬರೂ ಆರೋಪಿಗಳು ಕೇರಳದ ಕೊಚ್ಚಿಯಲ್ಲೇ ಇರಬಹುದು ಎಂಬ ಸಂದೇಹ ಇದ್ದರೂ, ಹೊರರಾಜ್ಯದಲ್ಲಿ ತಲೆ ಮರೆಸಿಕೊಂಡಿರಬಹುದು ಎಂಬ ಗುಮಾನಿಯೂ ತನಿಖಾಧಿಕಾರಿಗಳಿಗೆ ಇತ್ತು. ಆದರೆ ಖಚಿತ ಸುಳಿವು ಸಿಕ್ಕಿರಲಿಲ್ಲ. ಆದ್ದರಿಂದ ಈ ನಿಟ್ಟಿನಲ್ಲಿ ಅವರು ಕಾರ್ಯಪ್ರವೃತ್ತರಾಗಿದ್ದರು. ಆದರೆ ಇಬ್ಬರ ಬಗ್ಗೆ ಸ್ಪಷ್ಟ ಮಾಹಿತಿ ಇರಲಿಲ್ಲ.
ಇಬ್ಬರು ‘ಕಳ್ಳ’ರಿಗೂ ಮುಳುವಾದದ್ದು ಫೋನ್.
ಆಗಿದ್ದೇನು? ಜುಲೈ 10ರಂದು ಕಸ್ಟಮ್ಸ್ ಅಧಿಕಾರಿಗಳು ಸಂದೀಪ್ ಸಹೋದರನ ಮನೆಯ ಮೇಲೆ ದಾಳಿ ಮಾಡಿದ್ದರು. ಅದೇ ಸಮಯದಲ್ಲಿ ಸಹೋದರನ ಮೊಬೈಲಿಗೆ ಒಂದು ಫೋನ್ ಬಂತು. ಆದರೆ ಅದರಲ್ಲಿ ಬಂದ ಫೋನ್ನ ನಂಬರ್ ಸೇವ್ ಆಗಿರಲಿಲ್ಲ. ಆ ಕರೆಯನ್ನು ಕಸ್ಟಮ್ಸ್ ಅಧಿಕಾರಿಗಳು ಸ್ವೀಕರಿಸಿದರು. ಸಂದೀಪ್ನ ದುರಾದೃಷ್ಟಕ್ಕೆ ಆತನೇ ಕರೆ ಮಾಡಿದ್ದಾಗಿತ್ತು. ಅದರ ಜಾಡು ಹಿಡಿದು ಹೋದ ಅಧಿಕಾರಿಗಳಿಗೆ ಆತ ಬೆಂಗಳೂರಿನಲ್ಲಿ ಇರುವುದು ತಿಳಿಯಿತು.
ಇದನ್ನೂ ಓದಿ: ದುಷ್ಕರ್ಮಿಗಳಿಗೆ ‘ಸ್ವಪ್ನಾ’ ಚಿನ್ನದ ಗಟ್ಟಿ; ರಾಜತಾಂತ್ರಿಕ ಮಾರ್ಗದ ಮೂಲಕ ಅಕ್ರಮ ಸಾಗಣೆ
ಇದು ಸಂದೀಪ್ ಕಥೆಯಾದರೆ ಚಿನ್ನದ ರಾಣಿ ಸ್ವಪ್ನಾ ಸುರೇಶ್ ಕಥೆ ಇನ್ನೂ ರೋಚಕವಾಗಿದೆ. ಅದೇನೆಂದರೆ, ಸಂದೀಪ್ ಬೆಂಗಳೂರಿನಲ್ಲಿ ಇದ್ದ ಮೇಲೆ ಸ್ವಪ್ನಾ ಕೂಡ ಬೆಂಗಳೂರಿನಲ್ಲಿಯೇ ಇರಬಹುದು ಎಂಬ ಗುಮಾನಿ ಕಸ್ಟಮ್ಸ್ ಅಧಿಕಾರಿಗಳಿಗೆ ಶುರುವಾಗಿತ್ತು. ಅದಕ್ಕೆ ಸ್ವಪ್ನಾ ಮಗಳೇ ದಾರಿ ತೋರಿಸಿಬಿಟ್ಟಳು!
ವಾರದಿಂದ ಸ್ವಿಚ್ ಆಫ್ ಆಗಿದ್ದ ಸ್ವಪ್ನಾರ ಮೊಬೈಲನ್ನು ಶನಿವಾರ ಮಧ್ಯಾಹ್ನ ಅವರ ಮಗಳು ಆನ್ ಮಾಡಿದ್ದಳು. ಸ್ವಪ್ನಾ ಮೊಬೈಲ್ ಸಿಗ್ನಲ್ ಲೋಕೇಷನ್ ಟ್ರೇಸ್ ಮಾಡುತ್ತಿದ್ದ ಕಸ್ಟಮ್ಸ್ ಅಧಿಕಾರಿಗಳಿಗೆ ಇಷ್ಟೇ ಸಾಕಾಗಿಹೋಪಯಿತು! ಸಿಗ್ನಲ್ ಕ್ಯಾಚ್ ಆಗುತ್ತಿದ್ದಂತೆಯೇ ಮೊಬೈಲ್ ಟವರ್ನ ಲೊಕೇಶನ್ ವಿವರಗಳನ್ನು ಪಡೆದುಕೊಂಡ ಅಧಿಕಾರಿಗಳು ಅದನ್ನು ಹೈದರಾಬಾದ್ನಲ್ಲಿರುವ ತಮ್ಮ ವಿಭಾಗಕ್ಕೆ ತಲುಪಿಸಿದರು. ಅದೇ ಸಿಗ್ನಲ್ ಆಧಾರದ ಮೇಲೆ ಕಸ್ಟಮ್ಸ್ ಅಧಿಕಾರಿಗಳ ತಂಡ, ಬೆಂಗಳೂರಿಗೆ ಬಂದು ಸ್ವಪ್ನಾ ಅವರನ್ನು ವಶಕ್ಕೆ ಪಡೆದುಕೊಂಡಿತು.
ನಾಗಾಲ್ಯಾಂಡ್ಗೆ ಹೋಗುವ ಸಂಚೇ? ಕೇರಳದಲ್ಲಿ ತಲೆಮರೆಸಿಕೊಂಡಿದ್ದ ಈ ಇಬ್ಬರೂ ಆರೋಪಿಗಳು ನಾಗಾಲ್ಯಾಂಡ್ಗೆ ಹೋಗುವ ಸಂಚು ರೂಪಿಸಿದ್ದರು ಎಂದು ಕಸ್ಟಮ್ಸ್ ಅಧಿಕಾರಿಗಳಿಗೆ ಅನುಮಾನ ಬಂದಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಬಂದಿದ್ದ ಅವರು, ಇಲ್ಲಿಂದ ನಾಗಾಲ್ಯಾಂಡ್ಗೆ ಹೋಗುವ ಪ್ಲ್ಯಾನ್ ಮಾಡಿದ್ದಿರಬಹುದು ಎನ್ನಲಾಗಿದೆ.
ಆದರೆ ತಿರುವನಂತಪುರದಲ್ಲಿ ತ್ರಿಬಲ್ ಲಾಕ್ಡೌನ್ ಇದ್ದಾಗಲೂ ಹೇಗೆ ತಪ್ಪಿಸಿಕೊಂಡು ಬೆಂಗಳೂರಿಗೆ ಬಂದರು ಎಂಬ ಬಗ್ಗೆ ಇನ್ನಷ್ಟು ತನಿಖೆ ಶುರುವಾಗಿದೆ.
ಈ ‘ಚಿನ್ನದ ರಾಣಿ’ಯ ಇತಿಹಾಸವೇ ರೋಚಕ; ಇವಳಿಂದ ಕೇರಳ ಸಿಎಂ ಕುರ್ಚಿ ಗಡಗಡ!