ಬೆಂಗಳೂರು: ರಾಜ್ಯ ರಾಜಧಾನಿಯಲ್ಲೇ ಪೊಲೀಸರಿಗೆ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ ಎಂಬುದು ಅಕ್ಷರಶಃ ಸತ್ಯ. ಕಳೆದ ಮೂರು ದಿನಗಳಿಂದ ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ಅಲೆದು ಹೈರಾಣದ ನಿವೃತ್ತ ಸಬ್ ಇನ್ಪೆಕ್ಟರ್ ನಿನ್ನೆ(ಗುರುವಾರ) ರಾತ್ರಿಯೇ ಅಸುನೀಗಿದ್ದಾರೆ.
ಕೋರಮಂಗಲದ ನಿವೃತ್ತ ಪಿಎಸ್ಐ ಪಂಚಾಕ್ಷರಿ(67) ಮೃತರು. ಮೂರು ದಿನಗಳ ಹಿಂದೆ ಜ್ವರ ಬಂದ ಹಿನ್ನೆಲೆಯಲ್ಲಿ ಪಂಚಾಕ್ಷರಿ ಅವರಿಗೆ ಚಿಕಿತ್ಸೆ ಕೊಡಿಸಲು ಅವರ ಕುಟುಂಬ ಸದಸ್ಯರು ಹೆಬ್ಬಾಳದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಜ್ವರ ಇದ್ದ ಕಾರಣಕ್ಕೆ ಕೋವಿಡ್ ಭಯದಿಂದ ಚಿಕಿತ್ಸೆ ನೀಡಿಲ್ಲ. ಅಲ್ಲಿಂದ ವಿಲ್ಸನ್ ಗಾರ್ಡನ್ನಲ್ಲಿರುವ ಮತ್ತೊಂದು ಆಸ್ಪತ್ರೆಗೆ ಬಂದಾಗಲೂ ಚಿಕಿತ್ಸೆ ನೀಡಿಲ್ಲ. ಮತ್ತೆರೆಡು ಆಸ್ಪತ್ರೆಗೆ ಹೋದಾಗಲೂ ಕೋವಿಡ್ ಪರೀಕ್ಷೆ ಮಾಡಿಸಬೇಕು. ಇಲ್ಲಿ ವೆಂಟಿಲೇಟರ್ ಸೌಲಭ್ಯವಿಲ್ಲ ಎಂದು ಸಬೂಬು ಹೇಳಿ ಕಳುಹಿಸಿದ್ದಾರೆ. ಇದನ್ನೂ ಓದಿರಿ ಇಡೀ ರಾಜ್ಯ ಮತ್ತೆ ಸ್ತಬ್ಧ! ವೀಕೆಂಡ್ ಲಾಕ್ಡೌನ್ಗೆ ಕ್ಷಣಗಣನೆ
ಕೊನೆಗೆ ಪಂಚಾಕ್ಷರಿ ಅವರನ್ನು ಕುಟುಂಬಸ್ಥರು ರಾಜೀವ್ ಗಾಂಧಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ಅಲ್ಲೂ ಮೂರು ಗಂಟೆ ಕಾಯಿಸಿದ್ದಾರೆ. ಬೆಡ್ ಖಾಲಿ ಇಲ್ಲವೆಂದು ಚಿಕಿತ್ಸೆಗೆ ನಕಾರ ಮಾಡಿದ ವೈದ್ಯರು, ಕೈ ಚೆಲ್ಲಿದ್ದಾರೆ. ಅಲ್ಲಿಂದ ಮತ್ತೊಂದು ಆಸ್ಪತ್ರೆಗೆ ಹೋಗಿದ್ದಾರೆ. ಅಲ್ಲಿಯೂ ಬೆಡ್ ಖಾಲಿ ಇಲ್ಲವೆಂದು ಹೇಳಿದ್ದಾರೆ. ಕೊನೆಗೆ ಚಿಕಿತ್ಸೆ ಸಿಗದೆ ಖಾಸಗಿ ಕ್ಲಿನಿಕ್ನಲ್ಲಿ ಅಸುನೀಗಿದ್ದಾರೆ. ಆಸ್ಪತ್ರೆಗಳ ವಿರುದ್ಧ ಕುಟುಂಬ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ತವ್ಯನಿರತ ಪೊಲೀಸ್ ಸಿಬ್ಬಂದಿಗೂ ಟ್ರೀಟ್ಮೆಂಟ್ ಸಿಗ್ತಿಲ್ಲ ಬೆಂಗಳೂರಿನಲ್ಲಿ ಟ್ರೀಟ್ಮೆಂಟ್ ಸಿಗ್ತಿಲ್ಲ. ಇನ್ನು ನಿವೃತ್ತ ಪೊಲೀಸರ ಕಥೆ ಹೇಳತೀರದಾಗಿದೆ.
ಜಾಂಡೀಸ್ನಿಂದ ಬಳಲುತ್ತಿದ್ದ ವಿಜಯನಗರ ಪೊಲೀಸ್ ಠಾಣೆಯ ಮುಖ್ಯಪೇದೆ ರವಿಕುಮಾರ್(49) ಚಿಕಿತ್ಸೆಗಾಗಿ ನಿನ್ನೆ (ಗುರವಾರ) ರಾತ್ರಿಯಿಡೀ ಆಸ್ಪತ್ರೆಗಳಿಗೆ ಅಲೆದೆರೂ ಕರೊನಾ ಭೀತಿ ಹಿನ್ನೆಲೆಯಲ್ಲಿ ಅವರನ್ನು ಯಾವೊಂದು ಆಸ್ಪತ್ರೆಯಲ್ಲೂ ದಾಖಲಿಸಿಕೊಂಡಿಲ್ಲ. ತೀವ್ರ ಅಸ್ವಸ್ಥರಾಗಿದ್ದ ರವಿಕುಮಾರ್ ಬೆಳಗ್ಗೆ 8ರ ಸುಮಾರಿನಲ್ಲಿ ಕೊನೆಯುಸಿರೆಳೆದರು.
ಈ ಎರಡೂ ಪ್ರಕರಣಗಳೂ ಪೊಲೀಸ್ ಸಿಬ್ಬಂದಿಯಲ್ಲಿ ಆತಂಕ ಮೂಡಿಸಿದೆ. ಇನ್ನಾದರೂ ಸರ್ಕಾರ ಆರಕ್ಷಕರಿಗೆ ಸಮಯಕ್ಕೆ ಸರಿಯಾಗಿ ಸೂಕ್ತ ಚಿಕಿತ್ಸೆ ಸಿಗುವಂತೆ ವ್ಯವಸ್ಥೆ ಮಾಡಬೇಕಿದೆ.
ಬೆಂಗಳೂರಲ್ಲಿ ಪೊಲೀಸರಿಗೂ ಸಿಕ್ತಿಲ್ಲ ಟ್ರೀಟ್ಮೆಂಟ್! ಆಸ್ಪತ್ರೆಗಳ ನಿರ್ಲಕ್ಷ್ಯಕ್ಕೆ ಮುಖ್ಯಪೇದೆ ಬಲಿ