ಬೆಂಗಳೂರು: ತಿಲಕ್ನಗರದ ಶಬನಮ್ ಬಿಲ್ಡರ್ಸ್ ಕಚೇರಿಯಲ್ಲಿ ಜೋಡಿ ಕೊಲೆ ಹಾಗೂ ವೈಟ್ಫೀಲ್ಡ್ನಲ್ಲಿನ ದೇವಸ್ಥಾನದ ಟ್ರಸ್ಟಿಯಿಂದ ಹಣ ಸುಲಿಗೆ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಭೂಗತ ಪಾತಕಿ ರವಿ ಪೂಜಾರಿ ವಿರುದ್ಧ ಸಿಸಿಬಿ ಪೊಲೀಸರು 1ನೇ ಎಸಿಎಂಎಂ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.
ಕೊಲೆ, ಜೀವ ಬೆದರಿಕೆ, ಹಫ್ತಾ ವಸೂಲಿ ಸೇರಿದಂತೆ ಹಲವು ಗಂಭೀರ ಸ್ವರೂಪದ ಅಪರಾಧ ಪ್ರಕರಣಗಳ ಆರೋಪಿಯಾಗಿದ್ದ ಭೂಗತ ಪಾತಕಿ ರವಿ ಪೂಜಾರಿ, ಕಳೆದ 26 ವರ್ಷಗಳಿಂದ ವಿದೇಶದಲ್ಲಿ ತಲೆಮರೆಸಿಕೊಂಡು ಓಡಾಡುತ್ತಿದ್ದ. ಕಳೆದ ವರ್ಷ ಆಫ್ರಿಕಾದ ಸೆನೆಗಲ್ನಲ್ಲಿ ಬಂಧಿಸಲಾಗಿತ್ತು. ಫೆಬ್ರವರಿಯಲ್ಲಿ ನಗರಕ್ಕೆ ಬಂಧಿಸಿ ಕರೆತರಲಾಗಿತ್ತು. ಆತನ ಮೇಲಿರುವ ಪ್ರಕರಣಗಳ ಕುರಿತು ವಿಚಾರಣೆ ನಡೆಸಲಾಗಿದೆ.
ತಿಲಕ್ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಜೋಡಿ ಕೊಲೆ ಹಾಗೂ ವೈಟ್ಫೀಲ್ಡ್ ಠಾಣೆ ವ್ಯಾಪ್ತಿಯಲ್ಲಿ ದೇವಸ್ಥಾನದ ಟ್ರಸ್ಟಿಯೊಬ್ಬರಿಂದ ಹಣ ಸುಲಿಗೆ ಮಾಡಿದ್ದ ಈ 2 ಪ್ರಕರಣಗಳಲ್ಲಿ ರವಿ ಪೂಜಾರಿ ವಿರುದ್ಧ ನ್ಯಾಯಾಲಯಕ್ಕೆ ಪ್ರತ್ಯೇಕ ದೋಷಾರೋಪ ಪಟ್ಟಿಯನ್ನು ಸಲ್ಲಿಸಲಾಗಿದೆ ಎಂದು ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
ಇದನ್ನೂ ಓದಿ ಭೂಗತ ಪಾತಕಿ ರವಿ ಪೂಜಾರಿಯ ಸೆನೆಗಲ್ ಸುಳಿವಿನ ರಹಸ್ಯ ಬಯಲು: ಕೋಳ ತೊಡಿಸಿದ್ದು ಹೋಳಿ ವಿಡಿಯೋ!
ಶಬನಂ ಬಿಲ್ಡರ್ಸ್ನ ಮಾಲೀಕರಾಗಿದ್ದ ಅಂದಿನ ಕಾರ್ಪೋರೇಟ್ ಸಮೀವುಲ್ಲಾ ಅವರಿಗೆ ವಿದೇಶದಿಂದ ರವಿ ಪೂಜಾರಿ ಬೆದರಿಕೆ ಕರೆ ಮಾಡುತ್ತಿದ್ದ. ಹಣ ನೀಡುವಂತೆ ಬೇಡಿಕೆ ಇಟ್ಟಿದ್ದ. ಹಣ ನೀಡಲು ನಿರಾಕರಿಸಿದ್ದಕ್ಕೆ, 2007ರ ಫೆ. 15ರಂದು ತನ್ನ ಸಹಚರರಿಂದ ಶಬನಂ ಬಿಲ್ಡರ್ಸ್ ಕಚೇರಿ ಮೇಲೆ ಗುಂಡಿನ ದಾಳಿ ಮಾಡಿಸಿದ್ದ. ಇದರಿಂದ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಶೈಲಜಾ ಹಾಗೂ ಕಾರು ಚಾಲಕ ರವಿ ಎಂಬಾವರು ಹತ್ಯೆಗೀಡಾಗಿದ್ದರು.
ದುಷ್ಕರ್ಮಿಗಳು, ‘ರವಿ ಪೂಜಾರಿ’ ಎಂಬ ಹೆಸರಿದ್ದ ಭಿತ್ತಿ ಪತ್ರವನ್ನು ಕಚೇರಿಯ ಗೋಡೆ ಮೇಲೆ ಅಂಟಿಸಿ ಪರಾರಿಯಾಗಿದ್ದರು. ಕೃತ್ಯ ಎಸಗಿದ್ದ ಕವಿರಾಜ್, ಮೋಹನ್, ಶಿವಾ, ಇಬ್ರಾಹಿಂ, ಮಹೇಶ್, ಸಂತೋಷ್ ರೈ, ಪ್ರದೀಪ್, ಆಜಾದ್ ಹಾಗೂ ಉದಯ್ಕುಮಾರ್ ಹೆಗ್ಡೆ ಸೇರಿ 17 ಮಂದಿಯನ್ನು 2009ರಲ್ಲಿ ಬಂಧಿಸಲಾಗಿತ್ತು. ಇವರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು.
ಇದನ್ನೂ ಓದಿ ಭೂಗತ ಪಾತಕಿ ರವಿ ಪೂಜಾರಿ ಆಪ್ತ ಗುಲಾಂ ಸಿಸಿಬಿ ಬಲೆಗೆ!
ಈಗ ರವಿ ಪೂಜಾರಿ ವಿರುದ್ಧ ಸಲ್ಲಿಸಿರುವ ದೋಷರೋಪ ಪಟ್ಟಿಯಲ್ಲಿ ಈ ಎಲ್ಲ ಅಂಶಗಳನ್ನು ಸೇರಿಸಲಾಗಿದೆ. ಒಟ್ಟು 514 ಪುಟಗಳ ದೋಷಾರೋಪ ಪಟ್ಟಿಯಲ್ಲಿ 40ಕ್ಕೂ ಹೆಚ್ಚು ಮಂದಿಯಿಂದ ಪಡೆದ ಸಾಕ್ಷಾೃಧಾರ ಹೇಳಿಕೆ ಹಾಗೂ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ಕುರಿತ ಮಹತ್ವದ ಪುರಾವೆಗಳನ್ನು ದೋಷರೋಪ ಪಟ್ಟಿಯಲ್ಲಿ ಉಲ್ಲೇಖಿಸಿದ್ದಾರೆ.
ವೈಟ್ಫೀಲ್ಡ್ ಠಾಣೆ ವ್ಯಾಪ್ತಿಯ ದೇವಸ್ಥಾನವೊಂದರ ಟ್ರಸ್ಟಿಗೆ ಕರೆ ಮಾಡಿದ್ದ ರವಿ ಪೂಜಾರಿ, ಜೀವ ಬೆದರಿಕೆಯೊಡ್ಡಿದ್ದ. ಅವರಿಂದ ಹಣ ಸುಲಿಗೆಯನ್ನೂ ಮಾಡಿದ್ದ. ಈ ಪ್ರಕರಣದಲ್ಲೂ 200 ಪುಟಗಳ ದೋಷಾರೋಪ ಪಟ್ಟಿ ಸಿದ್ಧಪಡಿಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
ಇದನ್ನೂ ಓದಿ ಭೂಗತ ಪಾತಕಿ ರವಿ ಪೂಜಾರಿಗೆ ಶಾಕ್ ನೀಡಲು ಇಡಿ ಸಿದ್ಧತೆ
ರಾಜ್ಯದಲ್ಲಿ ರವಿ ಪೂಜಾರಿ ವಿರುದ್ಧ 100ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಬೆಂಗಳೂರಿನಲ್ಲೇ ಆತನ ವಿರುದ್ಧ 47 ಪ್ರಕರಣಗಳಿವೆ. ಈ ಪೈಕಿ ಇದೀಗ 2 ಪ್ರಮುಖ ಪ್ರಕರಣಗಳಲ್ಲಿ ಚಾರ್ಜ್ಶೀಟ್ ಸಲ್ಲಿಸಲಾಗಿದೆ. ಉಳಿದ ಪ್ರಕರಣಗಳ ತನಿಖೆಯನ್ನು ಸಿಸಿಬಿ ಪೊಲೀಸರು ಮುಂದುವರಿಸಿದ್ದಾರೆ.