ಬೆಂಗಳೂರು: ಚುನಾವಣೆ ಹತ್ತಿರವಿದ್ದಾಗ ತೀರ್ಥಕ್ಷೇತ್ರಗಳ ಪ್ರಯಾಣಕ್ಕೆ ತೆರಳುವವರಿಗೆ ರಾಜಕೀಯ ಮುಖಂಡರು ವಿಶೇಷ ಬಸ್ಗಳ ವ್ಯವಸ್ಥೆ ಮಾಡಲು ಪೈಪೋಟಿಗಿಳಿದಿರುತ್ತಾರೆ. ಆದರೆ, ಇಲ್ಲಿ ‘ಅಸ್ಥಿ ವಿಸರ್ಜನೆ’ ವ್ಯವಸ್ಥೆ ಕಲ್ಪಿಸಲು ರಾಜಕೀಯ ಪಕ್ಷಗಳಿಂದ ಪೈಪೋಟಿ ನಡೆದಿದೆ.
ಕರೊನಾ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಹೆಚ್ಚಳ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕವೂ ಸೇರಿ ಹಲವು ರಾಜ್ಯಗಳು ಬೇರೆ ರಾಜ್ಯಗಳಿಂದ ಬರುವ ಪ್ರಯಾಣಿಕರನ್ನು, ವಲಸೆ ಕಾರ್ಮಿಕರನ್ನು ಗಡಿಯಲ್ಲಿಯೇ ತಡೆದು ನಿಲ್ಲಿಸುತ್ತಿವೆ. ಪರವಾನಗಿಯಿಲ್ಲದೇ ಒಳಗೆ ಬಿಡುತ್ತಿಲ್ಲ. ಕ್ವಾರಂಟೇನ್ ಸೌಲಭ್ಯ ಒದಗಿಸಲು ಸಾಧ್ಯವಾಗುವುದಾದರೆ ಮಾತ್ರ ಕರೆಯಿಸಿಕೊಳ್ಳುತ್ತಿವೆ.
ಇದನ್ನೂ ಓದಿ; ಪರಮಾಣು ಪರೀಕ್ಷೆಗೆ ಸಜ್ಜಾಗುತ್ತಿದೆಯೇ ಅಮೆರಿಕ?
ಆದರೆ, ರಾಜಸ್ಥಾನ ಹಾಗೂ ಉತ್ತರಾಖಂಡ್ ಸರ್ಕಾರಗಳು ಪರಸ್ಪರ ಒಪ್ಪಿಗೆ ಮೇರೆಗೆ ಪ್ರಯಾಣಿಕ ಬಸ್ಗಳ ಸಂಚಾರಕ್ಕೆ ಅನುಮತಿ ಕಲ್ಪಿಸಿವೆ. ಈ ವಿಶೇಷ ಬಸ್ಗಳಲ್ಲಿ ಅಸ್ಥಿ ವಿಸರ್ಜನೆಗೆ ತೆರಳುವವರು ಮಾತ್ರ ಪ್ರಯಾಣಿಸಬಹುದು. ಸರ್ಕಾರವೇ ಕುಟುಂಬದ ಇಬ್ಬರು ಅಥವಾ ಮೂವರಿಗೆ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸುತ್ತಿದೆ. ರಾಜಸ್ಥಾನದ ಜೈಪುರದಿಂದ 470 ಕಿ.ಮೀ. ಗೂ ಅಧಿಕ ದೂರದಲ್ಲಿರುವ ಹರಿದ್ವಾರಕ್ಕೆ ಬಸ್ಗಳು ಸಂಚರಿಸುತ್ತಿವೆ. ಇದರ ಹಿಂದಿರುವುದು ಪಕ್ಕಾ ರಾಜಕೀಯ ಕಾರಣವಲ್ಲದೇ, ಬೇರೇನೂ ಅಲ್ಲ.
ಕೋವಿಡ್ ಲಾಕ್ಡೌನ್ ಕಾಲದಲ್ಲಿ ಅಥವಾ ಅದಕ್ಕೂ ಮುಂಚೆ ಮೃತಪಟ್ಟವರ ಅಸ್ಥಿಗಳನ್ನು ಹರಿದ್ವಾರದ ಗಂಗಾನದಿಯಲ್ಲಿ ವಿಸರ್ಜಿಸಲು ಪ್ರಯಾಣ ಬೆಳೆಸಬಹುದು. ಸ್ವತಃ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಈ ಬಸ್ಗಳಿಗೆ ಚಾಲನೆ ನೀಡಿದ್ದಾರೆ. ಜೈಪುರ್, ಜೋಧಪುರ, ಬಿಕಾನೇರ್, ಉದಯಪುರ, ಹಾಗೂ ಅಜ್ಮೇರ್ನಿಂದ ಬಸ್ಗಳ ವ್ಯವಸ್ಥೆ ಮಾಡಲಾಗಿದೆ.
ಇದನ್ನೂ ಓದಿ; ಗೋರಖನಾಥ್ ದೇಗುಲದ ಆಸ್ತಿ ಧ್ವಂಸಕ್ಕೆ ಆದೇಶಿಸಿದ ಯುಪಿ ಸಿಎಂ
ಇದೆಲ್ಲ ಆರಂಭವಾಗಿದ್ದು ಸಂಗಾನೇರ್ ಕ್ಷೇತ್ರದ ಬಿಜೆಪಿ ಶಾಸಕ ಅಶೋಕ್ ಲಾಹೋಟಿಯಿಂದ. ಹರಿದ್ವಾರಕ್ಕೆ 27 ಕುಟುಂಬಗಳ 36 ಜನರ ಪ್ರಯಾಣಕ್ಕೆ ಅವಕಾಶ ಕಲ್ಪಿಸಬೇಕೆಂದು ಅನುಮತಿ ಕೋರಿದ್ದರು. ಬಳಿಕ ಇದರಲ್ಲಿ ಸರ್ಕಾರವೇ ವಿಶೇಷ ಮುತುವರ್ಜಿ ವಹಿಸಿತು. ಕಾಂಗ್ರೆಸ್ ಸರ್ಕಾರ ಇದರಲ್ಲಿ ರಾಜಕೀಯ ಲಾಭದ ಲೆಕ್ಕಾಚಾರ ನಡೆಸಿದೆ ಎಂಬುದು ಲಾಹೋಟಿ ಆರೋಪ. ಇದು ಇಷ್ಟಕ್ಕೆ ನಿಲ್ಲುತ್ತಿಲ್ಲ 10ಕ್ಕೂ ಅಧಿಕ ಶಾಸಕರು ಸರ್ಕಾರಕ್ಕೆ ಪತ್ರ ಬರೆದು ಹರಿದ್ವಾರಕ್ಕೆ ಬಸ್ ಕಳುಹಿಸಲು ಅನುಮತಿ ನೀಡಬೇಕೆಂದು ಕೋರಿದ್ದಾರೆ.
ಈ ರಾಜಕೀಯ ಮೇಲಾಟವೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದು, ಅಜ್ಮೇರ್ನ ಬಿಜೆಪಿ ಸಂಸದ ಭಗೀರಥ ಚೌಧರಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಉದಯ್ಪುರ-ಅಜ್ಮೇರ್-ಹರಿದ್ವಾರ ಎಕ್ಸ್ಪ್ರೆಸ್ ರೈಲನ್ನು ಆರಂಭಿಸಬೇಕು. ಆ ಮೂಲಕ ಹರಿದ್ವಾರಕ್ಕೆ ತೆರಳುವ ಭಕ್ತರಿಗೆ ಅವಕಾಶ ಕಲ್ಪಿಸಬೇಕೆಂದು ಮನವಿ ಮಾಡಿದ್ದಾರೆ.