ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಎದೆ ರೋಗಗಳ (ಸಿಡಿ) ಆಸ್ಪತ್ರೆಯ ಮೆಟ್ಟಿಲಿನ ಮೇಲೆ ಅಸಹಾಯಕಳಾಗಿ ಅಂಗಾತ ಮಲಗಿದ್ದ ಶಂಕಿತ ಕರೊನಾ ರೋಗಿಯನ್ನು ಆಕೆಯ ಸೇವಕ ಸಂತೈಸುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆಸ್ಪತ್ರೆ ನಿರ್ಲಕ್ಷ್ಯಕ್ಕೆ ಸಾರ್ವಜನಿಕ ವಲಯ ಆಕ್ರೋಶ ವ್ಯಕ್ತಪಡಿಸಿದೆ.
ಶ್ರೀ ಮಹಾರಾಜ ಹರಿ ಸಿಂಗ್ ಆಸ್ಪತ್ರೆಯಿಂದ ಈ ಮಹಿಳಾ ರೋಗಿಯನ್ನು ಆಂಬುಲೆನ್ಸ್ನಲ್ಲಿ ಕರೆತಂದ ಸಿಬ್ಬಂದಿ ಇಲ್ಲಿನ ಮೆಟ್ಟಿಲುಗಳ ಬಳಿಯೇ ಬಿಟ್ಟು ಹೊರಟು ಹೋಗಿದ್ದಾನೆ. ಆಂಬುಲೆನ್ಸ್ ಚಾಲಕ ರೋಗಿಯನ್ನು ಸೂಕ್ತ ರೀತಿಯಲ್ಲಿ ಆಸ್ಪತ್ರೆಗೆ ಸ್ಥಳಾಂತರಿಸುವ ಕನಿಷ್ಠ ಕಾಳಜಿಯನ್ನೂ ತೋರಿಲ್ಲ. ಆಸ್ಪತ್ರೆಯ ಮೆಟ್ಟಿಲುಗಳಿಗೆ ಬೆನ್ನು ಮಾಡಿ ಮಲಗಿದ್ದ ರೋಗಿಯನ್ನು ಆಕೆ ಜತೆಯಲ್ಲೇ ಬಂದಿದ್ದ ವ್ಯಕ್ತಿಯೊಬ್ಬ ಸಂತೈಸುತ್ತಿದ್ದ. ಕೆಲ ಸಮಯದ ಬಳಿಕ ಸಿಡಿ ಆಸ್ಪತ್ರೆಯ ಸಿಬ್ಬಂದಿ ರೋಗಿಯನ್ನು ವಾರ್ಡ್ಗೆ ಸ್ಥಳಾಂತರಿಸಿದರು ಎಂದು ಇಂಗ್ಲಿಷ್ ಪತ್ರಿಕೆಯೊಂದರ ಫೋಟೋಗ್ರಾಫರ್ ವಾಸೀಮ್ ಆಂಡ್ರಾಬಿ ವಿವರಿಸಿದ್ದಾರೆ. ಹೃದಯವಿದ್ರಾವಕ ಘಟನೆಗೆ ಸಾಕ್ಷಿ ಎಂಬಂತೆ ಮೆಟ್ಟಿಲು ಮೇಲೆ ರೋಗಿ ನರಳುತ್ತಿದ್ದ ದೃಶ್ಯವನ್ನು ವಾಸೀಮ್ ಆಂಡ್ರಾಬಿ ಸರೆಹಿಡಿದಿದ್ದು, ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿರಿ ಬಾಲಿವುಡ್ ನಟನಿಗೆ ವಾಟ್ಸ್ಆ್ಯಪ್ನಲ್ಲಿ ಬಂತು ಡಿವೋರ್ಸ್ ನೋಟಿಸ್ !
ಈ ಬಗ್ಗೆ ಟ್ವಿಟರ್ ಮೂಲಕ ಸ್ಪಷ್ಟನೆ ನೀಡಿರುವ ಸಿಡಿ ಆಸ್ಪತ್ರೆಯ ಎದೆ ಔಷಧ ವಿಭಾಗದ ಮುಖ್ಯಸ್ಥ ಡಾ.ನವೀದ್ ಶಾ, “ಸಿಡಿ ಆಸ್ಪತ್ರೆಗೆ ಒಂದೇ ಸಮಯದಲ್ಲಿ 9 ರೋಗಿಗಳನ್ನು ಶ್ರೀ ಮಹಾರಾಜ ಹರಿ ಸಿಂಗ್ ಆಸ್ಪತ್ರೆಯಿಂದ ವರ್ಗಾಯಿಸಲಾಯಿತು. ಸೋಂಕು ಹರಡುವಿಕೆ ಭಯದಿಂದ ಎಲ್ಲ ರೋಗಿಗಳನ್ನೂ ಒಂದೇ ಸಮಯದಲ್ಲಿ ತುರ್ತುನಿಗಾ ಘಟಕಕ್ಕೆ ಸ್ಥಳಾಂತರಿಸಲು ಆಗಲಿಲ್ಲ. ಈಗಾಗಲೇ ನಮ್ಮ ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗಿದೆ” ಎಂದು ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಸೋಮವಾರ ಒಂದೇ ದಿನ ಮೂವರು ಕರೊನಾ ರೋಗಿಗಳು ಮೃತಪಟ್ಟಿದ್ದು, ಕೇಂದ್ರಾಡಳಿತ ಪ್ರದೇಶದಲ್ಲಿ ಸಾವಿನ ಸಂಖ್ಯೆ 16ಕ್ಕೆ ತಲುಪಿದೆ. ಈ ಎಲ್ಲ ಸಾವುಗಳೂ ಸಿಡಿ ಆಸ್ಪತ್ರೆಯಲ್ಲಿ ಸಂಭವಿಸಿವೆ. ಉಸಿರಾಟದಿಂದ ಬಳಲುತ್ತಿದ್ದ 102 ರೋಗಿಗಳ ಪೈಕಿ 83 ಮಂದಿಗೆ ಸಿಡಿ ಆಸ್ಪತ್ರೆಯಲ್ಲೇ ಸೋಮವಾರ ಪರೀಕ್ಷೆ ಮಾಡಲಾಗಿದೆ. 102 ಜನರ ವರದಿ ಪಾಸಿಟಿವ್ ಬಂದಿದೆ. (ಏಜೆನ್ಸೀಸ್)
ಇದನ್ನೂ ಓದಿರಿ ಒಂದೇ ದಿನದಲ್ಲಿ ಮಂಡ್ಯ 71, ದಾವಣಗೆರೆ 22… 12 ಜಿಲ್ಲೆ ಶಾಂತ… ನಿಮ್ಮಲ್ಲೆಷ್ಟು ಕರೊನಾ ಕೇಸ್?