ಜಗಳೂರು: ತುಂಗಭದ್ರಾ ಹಿನ್ನೀರು ಯೋಜನೆಯ ಬಗ್ಗೆ ಮಾಜಿ ಶಾಸಕರು ನಿರುತ್ಸಾಹ ತೋರಿದ್ದರು. ಆದರೆ, ನಾನು ಶಾಸಕನಾದ ಮೇಲೆ ರಾಜ್ಯ ಸರ್ಕಾರದ ಮೇಲೆ ಒತ್ತಡ ಹಾಕಿದ ಪರಿಣಾಮ ತಾಲೂಕಿನ ನಾಲ್ಕೈದು ಗ್ರಾಮಗಳಿಗೆ ನೀರು ಸಿಗುವ ಭರವಸೆ ಸಿಕ್ಕಿದೆ ಎಂದು ಶಾಸಕ ಎಸ್.ವಿ.ರಾಮಚಂದ್ರ ಹೇಳಿದರು.
ಜಗಳೂರು ತಾಲೂಕಿನ ದೊಣೆಹಳ್ಳಿ, ಕಲ್ಲೇದೇವಪುರ ಕೆಚ್ಚೇನಹಳ್ಳಿ ಸೇರಿ ಗ್ರಾಮ ಪಂಚಾಯಿತಿಗಳಲ್ಲಿ ಸೋಮವಾರ ಸಾರ್ವಜನಿಕರಿಗೆ ಮಾಸ್ಕ್, ಸ್ಯಾನಿಟೈಸರ್, ಆಹಾರ ಕಿಟ್ ವಿತರಿಸಿ ಮಾತನಾಡಿದರು.
ಎಸ್ಸಿಪಿ, ಟಿಎಸ್ಪಿ ಅನುದಾನದಲ್ಲಿ ಕೈಗೆತ್ತಿಕೊಂಡಿದ್ದ ತುಂಗಭದ್ರಾ ಹಿನ್ನಿರು ಯೋಜನೆ ಜಗಳೂರು ವಿಧಾನಸಭಾ ಕ್ಷೇತ್ರ ಆಯ್ಕೆಯಾಗುವ ಎಲ್ಲ ಮಾನದಂಡವಿತ್ತು. ಆದರೆ, ಮಾಜಿ ಶಾಸಕರು ಇಂತಹ ಮಹತ್ವದ ಯೋಜನೆಯ ಬಗ್ಗೆ ತಮ್ಮ ಅಧಿಕಾರಾವಧಿಯಲ್ಲಿ ಒತ್ತು ನೀಡಲಿಲ್ಲ ಎಂದು ಆರೋಪಿಸಿದರು.
ಸಿರಿಗೆರೆ ಶ್ರೀ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಾರ್ಗದರ್ಶನದಲ್ಲಿ ನಾನು ನಡೆಯುತ್ತಿದ್ದೇನೆ. ಜಗಳೂರು ತಾಲೂಕಿಗೆ ನೀರಿಗೆ ಸಂಬಂಧಿತ ಎರಡು ಯೋಜನೆಗಳಿವೆ. ಮೊದಲ ಹಂತದಲ್ಲಿ ಕೆರೆ ತುಂಬಿಸುವ ಮತ್ತು ಭದ್ರಾ ಮೇಲ್ದಂಡೆ ಯೋಜನೆಯನ್ನು ಸಾಕಾರಗೊಳಿಸಲಾಗುವುದು. ಬಳಿಕ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು. ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ್ದಾರೆ ಎಂದು ಸ್ಪಷ್ಟಪಡಿಸಿದರು.
ತಹಸೀಲ್ದಾರ್ ಹುಲ್ಲಮನಿ ತಿಮ್ಮಣ್ಣ, ತಾಪಂ ಇಒ ಮಲ್ಲನಾಯ್ಕ, ಸಿಪಿಐ ದುರುಗಪ್ಪ, ಮಾಜಿ ಜಿಪಂ ಸದಸ್ಯ ಎಚ್.ನಾಗರಾಜ್, ಮುಖಂಡ ಬಿಸ್ತುವಳ್ಳಿ ಬಾಬು, ಇಂದ್ರೇಶ್, ಡಿ.ವಿ.ನಾಗಪ್ಪ, ವಿಜಯ್ಕುಮಾರ್ ಇದ್ದರು.
![](https://cdn.vvimgs.com/wp-content/uploads/2024/06/Ad-final.jpg)