ಜಗಳೂರು: ತಾಲೂಕಿನ ವಿವಿಧೆಡೆ ಭಾನುವಾರ ಸಂಜೆ ಭಾರಿ ಗಾಳಿ ಸಹಿತ ಸುರಿದ ಮಳೆಗೆ ಮರ, ಮನೆಗಳ ಛಾವಣಿ, ವಿದ್ಯುತ್ ಕಂಬಗಳು ನೆಲಕ್ಕುರುಳಿವೆ.
ಬೆಳಗ್ಗೆಯಿಂದ ವಿಪರೀತ ಬಿಸಿಲಿನ ತಾಪಕ್ಕೆ ಬಸವಳಿದಿದ್ದ ಜನರು ಸಾಧಾರಣ ಮಳೆಯಿಂದಾಗಿ ನಿಟ್ಟುಸಿರು ಬಿಟ್ಟಿದ್ದಾರೆ.
ತಾಲೂಕಿನ ಕೆಲವು ಕಡೆ ಮಳೆಯಾದರೆ ಇನ್ನು ಕೆಲವು ಕಡೆ ಒಂದು ಹನಿಯೂ ಬಿದ್ದಿಲ್ಲ. ದೊಣೆಹಳ್ಳಿಯಲ್ಲಿ ಬಿರುಗಾಳಿ, ಮಳೆಗೆ ಹಲವು ಅಂಗಡಿ ಮುಂಗಟ್ಟುಗಳು, ಮನೆಗಳ ಮೇಲಿನ ಸಿಮೆಂಟ್ ಶೀಟ್ಗಳು ಗಾಳಿಗೆ ಹಾರಿ ಹೋಗಿವೆ.
ದೊಣೆಹಳ್ಳಿ ಬಸ್ ನಿಲ್ದಾಣದಲ್ಲಿ ಜಯಶೀಲ ರೆಡ್ಡಿ ಎಂಬುವರ ಕಟ್ಟಡದ ಸಿಮೆಂಟ್ ಶೀಟ್ಗಳು ಭಾಗಶಃ ಹಾರಿ ಹೋಗಿವೆ. ಸಮೀಪದ ರಾಷ್ಟ್ರೀಯ ಹೆದ್ದಾರಿ 50ರ ವೃತ್ತದಲ್ಲಿ ಮೂಕಣ್ಣ ಎಂಬುವವರ ಅಂಗಡಿಯ ಮುಂಭಾಗದ ಶೀಟ್ಗಳು ಹಾರಿವೆ.
ಗ್ರಾಮದ ಅಲ್ಲಲ್ಲಿ ಮರಗಳು ಉರುಳಿದ್ದು, ವಿದ್ಯುತ್ ತಂತಿಗಳ ಮೇಲೆ ರೆಂಬೆಗಳು ಬಿದ್ದಿವೆ. ಬೆಸ್ಕಾಂ ಇಲಾಖೆ ವಿದ್ಯುತ್ ಮಾರ್ಗ ದುರಸ್ತಿಗೆ ಕಾರ್ಯೋನ್ಮುಖವಾಗಿದೆ.
ಬಿದರಕೆರೆ, ರಸ್ತೆ ಮಾಕುಂಟೆ, ಬಿಸ್ತುವಳ್ಳಿ, ಗೋಪಗೊಂಡನಹಳ್ಳಿ, ಕೊಣಗಲ್ಲು, ಗುತ್ತಿದುರ್ಗ, ಸಾಗಲಗಟ್ಟೆ, ಮೆದಗಿನಕೆರೆಯಲ್ಲಿ ಬಿರುಸಿನ ಮಳೆಯಾಗಿದೆ. ಬಿಸ್ತುವಳ್ಳಿ ಸರ್ಕಾರಿ ಶಾಲೆಯ ರಕ್ಷಣಾಗೋಡೆಯೊಳಗಿದ್ದ ಭಾರಿ ಗಾತ್ರದ ಮರ ಬಿದ್ದಿದೆ. ಮುಂದೆ ಎರಡು ಮರಗಳು ನೆಲಕಚ್ಚಿವೆ.