ದಾವಣಗೆರೆ: ಸಮರ್ಪಕ ತನಿಖೆ ಮೂಲಕ ಆರೋಪಿಗಳಿಗೆ ಶಿಕ್ಷೆ ಕೊಡಿಸಬೇಕು. ಅದು ಪೊಲೀಸರಿಗೆ ಸಿಗುವ ನಿಜವಾದ ಯಶಸ್ಸು ಎಂದು ಪೂರ್ವವಲಯ ನೂತನ ಪ್ರಭಾರ ಐಜಿಪಿ ಎಸ್.ರವಿ ಹೇಳಿದರು.
ಜಿಲ್ಲಾ ಪೊಲೀಸ್ ಕಚೇರಿ ಸಭಾಂಗಣದಲ್ಲಿ ಸೋಮವಾರ ಸಂಜೆ ಆಯೋಜಿಸಿದ್ದ ಪೂರ್ವವಲಯ ಮಟ್ಟದ ಪೊಲೀಸ್ ಕರ್ತವ್ಯಕೂಟದ ಸಮಾರೋಪದಲ್ಲಿ ಮಾತನಾಡಿದರು.
ಶಿಕ್ಷೆಯ ಭಯ ಮೂಡಿಸಿದಲ್ಲಿ ಸಣ್ಣ ತಪ್ಪೆಸಗಿದವರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಸಮಾಜವೂ ಸುವ್ಯವಸ್ಥಿತವಾಗಿ ನಡೆಯಲಿದೆ. ಹಾಗಾಗಿ ಪ್ರಕರಣದ ತನಿಖೆ ಹಾಗೂ ಅಪರಾಧ ತಡೆಗಟ್ಟುವಿಕೆಗೆ ಗಮನ ಹರಿಸಬೇಕು ಎಂದರು.
ಎಸ್ಸಿಆರ್ಬಿ ಹಿರಿಯ ಕಾರ್ಯಕ್ರಮಾಧಿಕಾರಿ ಎನ್.ನಾಗೇಶ್ ಮಾತನಾಡಿ, ರಾಷ್ಟ್ರೀಯ ಕರ್ತವ್ಯಕೂಟದಲ್ಲಿ ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕ ಸಾಧಿಸಿದ ಸಿಬ್ಬಂದಿಗೆ ಕ್ರಮವಾಗಿ 3 ಲಕ್ಷ ರೂ. 2 ಲಕ್ಷ ರೂ. ಹಾಗೂ 1 ಲಕ್ಷ ರೂ. ನೀಡುವ ಬಗ್ಗೆ ಸರ್ಕಾರ ಮಂಗಳವಾರ ಆದೇಶ ಹೊರಡಿಸಲಿದೆ. ವಲಯ ಮಟ್ಟದ ವಿಜೇತರಿಗೂ ಕ್ರಮವಾಗಿ 3 ಸಾವಿರ ರೂ., 2 ಸಾವಿರ ರೂ., ಹಾಗೂ 1 ಸಾವಿರ ರೂ. ನಗದು ಬಹುಮಾನ ನೀಡುವಂತೆ ಕೋರಿದರು.
ಅಭಿಯೋಗ ಉಪ ನಿರ್ದೇಶಕಿ ಕೆ.ಜೆ. ಕಲ್ಪನಾ ಮಾತನಾಡಿ, ಪೊಲೀಸರು ಕಾಯ್ದೆ ಮತ್ತು ತಿದ್ದುಪಡಿಗಳ ಬಗ್ಗೆ ಅಧ್ಯಯನ ಮಾಡಬೇಕು. ದಿನಕ್ಕೆ 5 ಚಾಪ್ಟರ್ ಅಭ್ಯಾಸ ಮಾಡಿ ವಿಷಯವಾರು ಜ್ಞಾನ ಸಂಪಾದಿಸಿದಲ್ಲಿ ತನಿಖೆಗೆ ಅನುಕೂಲವಾಗಲಿದೆ ಎಂದರು.
ಜೆಜೆಎಂ ವೈದ್ಯಕೀಯ ಕಾಲೇಜಿನ ಪೋರೆನ್ಸಿಸ್ ಮೆಡಿಸನ್ ಮುಖ್ಯಸ್ಥ ಡಾ.ಸಿ.ಎಸ್. ಸಂತೋಷ್ ಮಾತನಾಡಿ, ಸ್ನಿಫರ್ಡ್ ಪ್ರಭೇದದ ಶ್ವಾನಕ್ಕೆ ವಿಶೇಷ ವಾಸನೆ ಗ್ರಹಿಕೆ ಶಕ್ತಿ ಇದೆ. ಮಾನವನ ಅಂಗಾಂಗಗಳು ಛಿದ್ರವಾದರೂ, ಮಣ್ಣಿನಲ್ಲಿ ಹೂತು ಹಾಕಿದ್ದರೂ ಮೂಸಿ ಪತ್ತೆ ಹಚ್ಚುವ ಸಾಮರ್ಥ್ಯವಿದೆ ಎಂದು ಐಜಿಪಿ ಪ್ರಶ್ನೆಗೆ ಉತ್ತರಿಸಿದರು.
ಆರ್ಎಫ್ಎಸ್ಎಲ್ ಉಪನಿರ್ದೇಶಕಿ ಛಾಯಾಕುಮಾರಿ ಇದ್ದರು. ಕರ್ತವ್ಯಕೂಟದಲ್ಲಿ ದಾವಣಗೆರೆ ಜಿಲ್ಲೆ ಸಮಗ್ರ ಪಾರಿತೋಷಕ ಪಡೆದುಕೊಂಡಿತು. ಶ್ವಾನಗಳ ಪೈಕಿ ದಾವಣಗೆರೆಯ ಸಿಂಧು ಕೂಟದ ಉತ್ತಮ ಶ್ವಾನ ಪ್ರಶಸ್ತಿ, ಬಾಂಬ್ ಪತ್ತೆ ನಿಷ್ಟ್ರಿಯ ದಳದ ತಂಡದ ಪಾರಿತೋಷಕವನ್ನು ದಾವಣಗೆರೆ ಪಡೆದುಕೊಂಡಿತು.