ಹೊಸನಗರ: ವಿಶ್ವದಲ್ಲಿರುವ 190 ದೇಶಗಳಿಗಿಂತ ಭಿನ್ನ ಮತ್ತು ಶ್ರೇಷ್ಠತೆ ಹೊಂದಿರುವ ಭಾರತದ ಸಂವಿಧಾನ ರಚನೆ ಅಷ್ಟು ಸುಲಭವಾಗಿರಲಿಲ್ಲ ಎಂದು ಸಾಹಿತಿ ಡಾ. ಜಿ.ಸುಧಾಕರ್ ತಿಳಿಸಿದರು.
ತಾಲೂಕಿನ ಮೂಡುಗೊಪ್ಪ ಬಸ್ ನಿಲ್ದಾಣದಲ್ಲಿ ಆಯೋಜಿಸಿದ್ದ ಸಂವಿಧಾನ ಜಾಗೃತಿ ಜಾಥಾದಲ್ಲಿ ಮಾತನಾಡಿ, ಡಾ. ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನದಲ್ಲಿ 60 ದೇಶಗಳ ಸಂವಿಧಾನದ ಉತ್ಕೃಷ್ಠ ಅಂಶಗಳನ್ನು ಅಡಕ ಮಾಡಲಾಗಿದೆ. ಈಗಾಗಲೇ ನಮ್ಮ ಸಂವಿಧಾನ 106 ತಿದ್ದುಪಡಿ ಕಂಡಿದೆ ಎಂದರು.
ಆಡಳಿತ ಚುಕ್ಕಾಣಿ ಹಿಡಿದವರು, ಅಧಿಕಾರಿಗಳು, ನ್ಯಾಯ ವ್ಯವಸ್ಥೆ ಕೂಡ ಸಂವಿಧಾನ ಮಹತ್ವ ಅರಿಯಬೇಕಿದೆ. ಅದನ್ನು ಅರಿತರೆ ನಾನು ರಚಿಸಿದ ಸಂವಿಧಾನ ಎಲ್ಲ ಕಾಲಕ್ಕೂ ಅನ್ವಯವಾಗುತ್ತದೆ ಎಂದು ಸ್ವತಃ ಅಂಬೇಡ್ಕರ್ ಅವರೇ ಹೇಳಿದ್ದರು. ಬಹುಮುಖ ವ್ಯಕ್ತಿತ್ವದ ಅಂಬೇಡ್ಕರ್ ಬದುಕಿನ ವಿಚಾರಧಾರೆ ಹೇಗಿತ್ತು ಎನ್ನುವುದಕ್ಕೆ ಅವರು ರಚಿಸಿದ ಸಂವಿಧಾನವೇ ಉತ್ತರ ಎಂದು ಹೇಳಿದರು.
ಸಂವಿಧಾನ ಜಾಗೃತಿ ಜಾಥಾ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿತು. ಈ ವೇಳೆ ಸಂವಿಧಾನದ ಪರವಾಗಿ ಘೋಷಣೆಗಳು ಮೊಳಗಿದವು. ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
ಮೂಡುಗೊಪ್ಪ ಗ್ರಾಪಂ ಅಧ್ಯಕ್ಷೆ ಯು.ಸಂಗೀತಾ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಸುಮನಾ ಭಾಸ್ಕರ್, ಸದಸ್ಯರಾದ ಕರುಣಾಕರ ಶೆಟ್ಟಿ, ಅರುಣ ಬೈಸೆ, ಜಾತಪ್ಪ ಗೌಡ, ಎಂ.ವಿಶ್ವನಾಥ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಸುನೀಲ್, ಸಿಆರ್ಪಿ ಕೆ.ಆರ್.ರವಿ, ಪಿಎಸ್ಐ ರಮೇಶ, ಉಪ ತಹಸೀಲ್ದಾರ್ ಗೌತಮ್, ಕೃಷ್ಣಮೂರ್ತಿ, ಸುಶೀಲಮ್ಮ, ಜಿ.ಎಸ್.ಅರವಿಂದ ಇತರರಿದ್ದರು. ಪಿಡಿಒ ರಾಮಚಂದ್ರ ನಿರೂಪಿಸಿದರು.