ನವದೆಹಲಿ: ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮ ವೃತ್ತಿ ಜೀವನದಲ್ಲಿ ಮಹತ್ವದ ಮೈಲಿಗಲ್ಲು ನಿರ್ಮಿಸುವ ಹಂತಕ್ಕೆ ಬಂದು ತಲುಪಿದ್ದಾರೆ. ಇನ್ನೊಂದು ಹೆಜ್ಜೆ ಬಾಕಿ ಇದ್ದು, ಅದರಲ್ಲಿ ಯಶಸ್ವಿಯಾದಲ್ಲಿ ವಿಶ್ವ ಕ್ರಿಕೆಟ್ ಇತಿಹಾಸದಲ್ಲಿ ತಮ್ಮ ಸಾಧನೆಯ ಮುದ್ರೆಯನ್ನು ಒತ್ತಲಿದ್ದಾರೆ. ಆದರೆ, ಈ ಸಾಧನೆ ಹಿಂದೆ ರೋಹಿತ್ ಅವರ ಹಾದಿ ಅಷ್ಟೊಂದು ಸುಗಮವಾಗಿರಲಿಲ್ಲ ಎಂಬುದನ್ನು ನಾವಿಲ್ಲಿ ನೆನಪು ಮಾಡಿಕೊಳ್ಳಲೇಬೇಕು. ಕ್ರಿಕೆಟ್ ಆರಂಭದಿಂದ ವಿಶ್ವಕಪ್ವರೆಗೂ ಅವರು ನಡೆದುಬಂದ ಹಾದಿ ನಿಜಕ್ಕೂ ಎಲ್ಲರಿಗೂ ಸ್ಫೂರ್ತಿ ನೀಡುತ್ತದೆ.
ನಾಳೆ (ನ.19) ಗುಜರಾತಿನ ಅಹಮದಾಬಾದ್ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಭಾರತ ಟ್ರೋಫಿಗಾಗಿ ಕಾದಾಡಲಿದ್ದು, ಮಹತ್ವದ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿದರೆ ಭಾರತದ ಪಾಲಿಗೆ ನಾಳೆ ಐತಿಹಾಸಿಕ ದಿನವಾಗಲಿದೆ. ಅಲ್ಲದೆ, ರೋಹಿತ್ಗೂ ಜೀವನದಲ್ಲಿ ಎಂದೂ ಮರೆಯದ ಕ್ಷಣವಾಗಲಿದೆ. ವಿಶ್ವಕಪ್ನಲ್ಲಿ ಒಂದೂ ಪಂದ್ಯವನ್ನೂ ಸೋಲದೆ ಫೈನಲ್ ತಲುಪಿರುವ ಭಾರತ ಇತಿಹಾಸ ನಿರ್ಮಿಸುವ ಹೊಸ್ತಿಲಿನಲ್ಲಿದ್ದು, ಅಸಖ್ಯಾಂತ ಭಾರತೀಯರು ಭಾರತದ ಗೆಲುವಿಗಾಗಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.
ಬಲಗೈ ಆಟಗಾರನಾಗಿರುವ ರೋಹಿತ್, ಅನೇಕ ವರ್ಷಗಳಿಂದ ಭಾರತೀಯ ಬ್ಯಾಟಿಂಗ್ ಕ್ರಮಾಂಕದ ಆಧಾರಸ್ತಂಭವಾಗಿದ್ದಾರೆ ಮತ್ತು ವೈಟ್ಬಾಲ್ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಸ್ಫೋಟಕ ಬ್ಯಾಟರ್ಗಳಲ್ಲಿ ಒಬ್ಬರಾಗಿದ್ದಾರೆ. ಇಲ್ಲಿಯವರೆಗೆ ರೋಹಿತ್ ಅನುಭವಿಸಿದ ಪ್ರಸಿದ್ಧ ವೃತ್ತಿಜೀವನವು ಒಂದು ಕಾಲ್ಪನಿಕ ಕಥೆಯಂತೆ ನಮಗೆ ಭಾಸವಾದರೂ ಅವರ ಸುದೀರ್ಘ ಪ್ರಯಾಣದ ಏರಿಳಿತಗಳನ್ನು ಮರೆಯುವಂತಿಲ್ಲ. 1999ರಲ್ಲಿ ರೋಹಿತ್ ಜೀವನವನ್ನೇ ಬದಲಿಸಿದ ಸಮಸ್ಯೆಯೊಂದಿಗೆ ಅವರ ಸ್ಟಾರ್ಡಮ್ ಯುಗವು ಸಹ ಆರಂಭವಾಯಿತು.
ರೋಹಿತ್ ಆಫ್ ಸ್ಪಿನ್ನರ್
ಶಾಲಾ ದಿನಗಳ ಟೂರ್ನಮೆಂಟ್ಗಳಲ್ಲಿ ರೋಹಿತ್ ಶರ್ಮ ಆಫ್ ಸ್ಪಿನ್ನರ್ ಆಗಿದ್ದರು. ಅವರ ಮನಮೋಹಕ ಪ್ರದರ್ಶನ ಕೋಚ್ ದಿನೇಶ್ ಲಾಡ್ ಅವರ ಗಮನ ಸೆಳೆಯಿತು. ಅಂದಹಾಗೆ ದಿನೇಶ್ ಲಾಡ್ ಅವರು ಮುಂಬೈ ಕ್ರಿಕೆಟರ್ ಸಿದ್ಧೇಶ್ ಲಾಡ್ ಅವರ ತಂದೆ. ರೋಹಿತ್ ಆಟದಿಂದ ಪ್ರಭಾವಿತರಾದ ದಿನೇಶ್ ಲಾಡ್, ಈತನಿಗೆ ಉತ್ತಮ ಭವಿಷ್ಯವಿದೆ ಎಂದು ಭಾವಿಸಿ ರೋಹಿತ್ ಪಾಲಕರೊಂದಿಗೆ ಮಾತನಾಡಲು ಬಯಸಿದರು. ಆ ಸಮಯದಲ್ಲಿ ರೋಹಿತ್, ಮುಂಬೈನ ಬೊರಿವಲಿ ಏರಿಯಾದಲ್ಲಿ ತಮ್ಮ ಅಂಕಲ್ ಮತ್ತು ಅಜ್ಜ-ಅಜ್ಜಿಯ ಜತೆ ವಾಸವಿದ್ದರು. ರೋಹಿತ್ ಅವರ ಅಂಕಲ್ ದಿನೇಶ್ ಲಾಡ್ ಅವರನ್ನು ಭೇಟಿಯಾದಾಗ ರೋಹಿತ್ರನ್ನು ಸ್ವಾಮಿ ವಿವೇಕಾನಂದ ಶಾಲೆಗೆ ಸೇರಿಸುವಂತೆ ಒತ್ತಾಯ ಮಾಡಿದರು.
275 ರೂ. ಶುಲ್ಕ
ರೋಹಿತ್ ಪ್ರಸ್ತುತ ಓದುತ್ತಿರುವ ಶಾಲೆಯಲ್ಲಿ 30 ರೂ. ಶುಲ್ಕವಿದೆ ಮತ್ತು ನೀವು ಹೇಳಿದಂತೆ ವಿವೇಕಾನಂದ ಶಾಲೆಗೆ ದಾಖಲಿಸಿ 275 ರೂ. ಪಾವತಿಸಲು ಸಾಧ್ಯವಾಗುವುದಿಲ್ಲ ಎಂದು ರೋಹಿತ್ ಚಿಕ್ಕಪ್ಪ ನನ್ನೊಂದಿಗೆ ಹೇಳಿದರು. ಬಳಿಕ ಶಾಲೆಯ ನಿರ್ದೇಶಕರ ಬಳಿ ರೋಹಿತ್ಗೆ ಸ್ಕಾಲರ್ಶಿಫ್ ನೀಡುವಂತೆ ಕೇಳಿಕೊಂಡೆ. ನನ್ನ ಜೀವನದಲ್ಲಿ ಸ್ಕಾಲರ್ಶಿಫ್ಗಾಗಿ ಮನವಿ ಮಾಡಿದ ಮೊದಲ ವಿದ್ಯಾರ್ಥಿ ರೋಹಿತ್. ಈ ವಿದ್ಯಾರ್ಥಿಗೆ ನಾನ್ಯಾಕೆ ಸಹಾಯ ಮಾಡಬೇಕೆಂದು ನಿರ್ದೇಶಕರು ಕೇಳಿದರು. ಆದರೆ, ರೋಹಿತ್ ಚೆನ್ನಾಗಿ ಕ್ರಿಕೆಟ್ ಆಡುತ್ತಾನೆ ಮತ್ತು ಆತನಿಗೆ ಒಳ್ಳೆಯ ಭವಿಷ್ಯವಿದೆ ಎಂಬುದು ನನಗೆ ತಿಳಿದಿತ್ತು. ಹೀಗಾಗಿ ರೋಹಿತ್ನನ್ನು ಸುಮ್ಮನೇ ಕಳುಹಿಸಲು ನನಗೆ ಇಷ್ಟವಿರಲಿಲ್ಲ ಎಂದು ದಿನೇಶ್ ಲಾಡ್ ಮಾಧ್ಯಮ ಸಂದರ್ಶನದಲ್ಲಿ ಹೇಳಿದ್ದಾರೆ.
ಕೊನೆಗೂ ದಿನೇಶ್ ಲಾಡ್ ಅವರ ಸಹಾಯದಿಂದ ಸ್ವಾಮಿ ವಿವೇಕಾನಂದ ಶಾಲೆಗೆ ಸೇರಿದ ರೋಹಿತ್, ದಿನೇಶ್ ಲಾಡ್ ಅವರ ಕೋಚಿಂಗ್ ಅಡಿಯಲ್ಲಿ ಕ್ರಿಕೆಟ್ನಲ್ಲಿ ಹೆಚ್ಚು ಪ್ರವರ್ಧಮಾನಕ್ಕೆ ಬಂದಿದ್ದರಿಂದ ರೋಹಿತ್ ಅವರ ವೃತ್ತಿಜೀವನದಲ್ಲಿ ಮಹತ್ವದ ತಿರುವು ಪಡೆಯಿತು. ಅಂತಿಮವಾಗಿ ಹಿರಿಯರ ತಂಡಕ್ಕೆ ಪ್ರವೇಶಿಸುವ ಮೊದಲು U-19 ಕ್ರಿಕೆಟ್ ಮತ್ತು ದೇಶೀಯ ಕ್ರಿಕೆಟ್ನಲ್ಲಿ ರೋಹಿತ್ ಅಮೋಘ ಪ್ರದರ್ಶನವನ್ನು ನೀಡಿದ್ದಾರೆ. ಇಂದು ವಿಶ್ವಕಪ್ ಗೆಲ್ಲುವ ಹಂತಕ್ಕೆ ರೋಹಿತ್ ಬಂದಿದ್ದು, ಇನ್ನೊಂದು ಹೆಜ್ಜೆ ಇಡುವಲ್ಲಿ ಯಶಸ್ವಿಯಾದರೆ ರೋಹಿತ್ ಕ್ರಿಕೆಟ್ ಲೋಕದ ದಿಗ್ಗಜರ ಸಾಲಿಗೆ ಸೇರಿಕೊಳ್ಳಲಿದ್ದಾರೆ. (ಏಜೆನ್ಸೀಸ್)
‘ಅವನು ಈ ಆಟಕ್ಕೆ ಬಂದಿದ್ದಾನೇನು’…ಎಂದು ಸಲ್ಮಾನ್ಗೆ ಕೇಳಿದ್ದೇಕೆ ನಟಿ ಅಂಕಿತಾ?