ಕೊಲ್ಹಾರ: ರೈತರು ರಾಸಾಯನಿಕಗಳನ್ನು ತ್ಯಜಿಸಿ, ದನಕರುಗಳ ಸಾಕಣೆ ಮೂಲಕ ಸಾವಯವ ಕೃಷಿ ಪ್ರೊತ್ಸಾಹಿಸಬೇಕು. ಮಣ್ಣಿನ ಸಂರಕ್ಷಣೆ ಮಾಡಬೇಕು ಎಂದು ಮಣ್ಣು ಉಳಿಸಿ ಸ್ವಯಂ ಸೇವಕರ ತಂಡದ ಬಸವರಾಜ ಬಿರಾದಾರ ಹೇಳಿದರು.
ಶಿಕ್ಷಣ ಕ್ರಾಂತಿಗೈದ ಲಿಂ.ಬಂಥನಾಳ ಸಂಗನಬಸವ ಶಿವಯೋಗಿಗಳ ಹುಟ್ಟೂರಾದ ತಾಲೂಕಿನ ಮಸೂತಿ ಗ್ರಾಮದಲ್ಲಿ ಸದ್ಗುರು ಜಗ್ಗಿ ವಾಸುದೇವ ಮಣ್ಣಿನ ಸಂರಕ್ಷಣೆ ಜಾಗೃತಿ ಅಭಿಯಾನಕ್ಕೆ ಬೆಂಬಲಿಸಿ ಅವರು ಮಾತನಾಡಿದರು.
ಜಗದೀಶ್ವರ ಹಿರೇಮಠದ ಪ್ರಭುಕುಮಾರ ಶಿವಾಚಾರ್ಯರು ಎತ್ತುಗಳಿಗೆ ಬಾಳೆಹಣ್ಣು ತಿನ್ನಿಸಿ ಜಾಥಾಕ್ಕೆ ಚಾಲನೆ ನೀಡಿದರು. ರೈತರು, ಯುವಕರೊಂದಿಗೆ ಮಣ್ಣು ಉಳಿಸಿ ಕಾರ್ಯಕ್ರಮ ಬೆಂಬಲಿಸಿ ಗ್ರಾಮದ ಸುತ್ತಲೂ ಪಾದಯಾತ್ರೆ ಮಾಡಲಾಯಿತು.
ಮಣ್ಣು ಉಳಿಸಿ ಸ್ವಯಂ ಸೇವಕರ ತಂಡದ ಸಂತೋಷ ಚನಗೊಂಡ ಮಾತನಾಡಿ, ನಾವೆಲ್ಲರೂ ಉಸಿರಾಡುತ್ತಿರುವುದಕ್ಕೆ ಮಣ್ಣು ಕಾರಣವಾಗಿದೆ. ದನಕರುಗಳು ಹಾಗೂ ಮಾತೃ ಸ್ವರೂಪಿಯಾದ ಮಣ್ಣಿನ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಮಣ್ಣು ಉಳಿಸಿ ರೈತನಿಗೆ ಮೊದಲ ಆದ್ಯತೆ ಕಾರ್ಯಕ್ರಮಕ್ಕೆ ನಮ್ಮ ಗ್ರಾಮದ ರೈತರ ಸಂಪೂರ್ಣ ಬೆಂಬಲವಿದೆ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂತೋಷ ಗಣಾಚಾರಿ ಅಭಿಯಾನದ ನೇತೃತ್ವ ವಹಿಸಿದ್ದರು. ಎತ್ತಿನ ಬಂಡಿಯಲ್ಲಿ ಲಿಂ.ಸಂಗನಬಸವ ಶಿವಯೋಗಿಗಳ ಭಾವಚಿತ್ರ ಮೆರವಣಿಗೆ ಶಾಲೆಯಿಂದ ಆರಂಭಿಸಲಾಯಿತು. ಮಣ್ಣು ಉಳಿಸಿ ಭಿತ್ತಿ ಪತ್ರಗಳ ಮೂಲಕ ಸಂಚರಿಸಿದ ಜಾಗೃತಿ ಜಾಥಾ ಗ್ರಾಮದಲ್ಲೆಡೆ ಸಂಚರಿಸಿ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಮುಕ್ತಾಯವಾಯಿತು.
ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಜಗದೀಶ ಸಾಲಳ್ಳಿ, ಹಿರಿಯರಾದ ಬಿ.ಕೆ.ಸಾಲಳ್ಳಿ, ಗುರಪ್ಪ ಕಾಗಲ್, ಬಿ.ಎ.ಪಾಟೀಲ, ಶಿಕ್ಷಕ ಜಿ.ಎಸ್.ಗರಸಂಗಿ, ರೈತ ಬಸವರಾಜ ಚನಗೊಂಡ, ಗ್ರಾಮ ಪಂಚಾಯಿತಿ ಸದಸ್ಯರಾದ ಮಲ್ಲು ಮೊಕಾಶಿ, ಶ್ರೀಕಾಂತ ಸಾಲಳ್ಳಿ, ಶಿವಪ್ಪ ಗರಸಂಗಿ, ಸಂಗಮೇಶ ಚಿಮ್ಮಲಗಿ ಸೇರಿದಂತೆ ಗ್ರಾಮ ಪಂಚಾಯಿತಿ ಸದಸ್ಯರು, ರೈತರು ಮಕ್ಕಳು ಭಾಗವಹಿಸಿದ್ದರು.