ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಸಕ್ತ ಸರ್ಕಾರದ ಕೊನೆಯ ಹಾಗೂ ಸಿಎಂ ಆಗಿ ಎರಡನೇ ಬಜೆಟ್ ಮಂಡನೆ ಮಾಡಿದರು. ಕೃಷಿ, ಶಿಕ್ಷಣ ಮತ್ತು ಆರೋಗ್ಯ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಬಜೆಟ್ನಲ್ಲಿ ಭರಪೂರ ಅನುದಾನ ಮೀಸಲಿಟ್ಟಿದ್ದಾರೆ.
ಬೆಳಗ್ಗೆ 10.15 ಬೆಜಟ್ ಮಂಡನೆ ಆರಂಭಿಸಿದ ಸಿಎಂ ಬೊಮ್ಮಾಯಿ ಅವರು ಸುಮಾರು 2.35 ಗಂಟೆ ಬಜೆಟ್ ಭಾಷಣವನ್ನು ಓದಿದರು. ಬಜೆಟ್ ಮಂಡನೆ ಮುಗಿದ ಬಳಿಕ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಕಲಾಪವನ್ನು ಸೋಮವಾರಕ್ಕೆ ಮುಂದೂಡಿದರು. ಸೋಮವಾರ ಪುನಾರಂಭವಾಗುವ ಕಲಾಪದಲ್ಲಿ ಬಜೆಟ್ ಮೇಲಿನ ಚರ್ಚೆ ನಡೆಯುತ್ತದೆ.
ಬಜೆಟ್ ಭಾಷಣದ ಆರಂಭದಲ್ಲೇ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಗದ್ದಲ ಏರ್ಪಟ್ಟಿತ್ತು. ಕಲಾಪಕ್ಕೆ ಆಗಮಿಸಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕಿವಿ ಮೇಲೆ ಹೂ ಇಟ್ಟುಕೊಂಡು ಬಂದಿರುವುದನ್ನು ಉಲ್ಲೇಖಿಸಿದ ಸಿಎಂ ಬೊಮ್ಮಾಯಿ, ಕಿವಿ ಮೇಲೆ ಹೂ ಇಟ್ಟುಕೊಳ್ಳುವುದು ಬೇಡ ಎಂದು ನಾನು ಹೇಳುತ್ತೇನೆ. ಆದರೂ ಅವರು ಹೂ ಇಟ್ಟುಕೊಂಡು ಬಂದಿದ್ದಾರೆ. ಇದು ಸರಿಯಲ್ಲ ಎಂಬುದು ನನ್ನ ಭಾವನೆ. ಇಷ್ಟು ದಿನ ಜನಗಳ ಕಿವಿ ಮೇಲೆ ಹೂ ಇಡುತ್ತಿದ್ದರು. ಈಗ ಜನ ಅವರ ಕಿವಿ ಮೇಲೆ ಹೂ ಇಟ್ಟುಕೊಳ್ಳುತ್ತಿದ್ದಾರೆ. ಮುಂದೆಯು ಇಡುತ್ತಾರೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಈ ಬಜೆಟ್ ಮೂಲಕ ರಾಜ್ಯದ 7 ಕೋಟಿ ಜನರ ಕಿವಿಗೆ ಹೂ ಇಡಲು ಹೊರಟಿದ್ದಾರೆ ಎಂದು ತಿರುಗೇಟು ನೀಡಿದರು. ಈ ವೇಳೆ ಸದನದಲ್ಲಿ ಗದ್ದಲ ಏರ್ಪಟ್ಟಿತು. ಬಳಿಕ ಸ್ಪೀಕರ್ ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಸಿಎಂ ಬೊಮ್ಮಾಯಿ ಅವರು ಕಳೆದ ಸಾಲಿನಲ್ಲಿ 2.7 ಲಕ್ಷ ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಿದ್ದರು. ಈ ಬಾರಿ ಬಜೆಟ್ ಮೊತ್ತ ಒಟ್ಟು 3 ಲಕ್ಷ 9 ಸಾವಿರ 182 ಕೋಟಿ ರೂ. ಇದೆ.
ಇಲಾಖೆವಾರು ಹಂಚಿಕೆಯಾದ ಅನುದಾನದ ವಿವರ ಈ ಕೆಳಕಂಡಂತಿದೆ…
* ವಸತಿ ಇಲಾಖೆ- 3787.01 ಕೋಟಿ ರೂ.
* ಆಹಾರ ಮತ್ತು ನಾಗರಿಕ ಸರಬರಾಜು – 4,608 ಕೋಟಿ ರೂ.
* ಮಹಿಳಾ ಮತ್ತು ಮಕ್ಕಳ ಕಲ್ಯಾಣ- 5,676 ಕೋಟಿ ರೂ.
* ಕೃಷಿ ಮತ್ತು ತೋಟಗಾರಿಕೆ- 9,456 ಕೋಟಿ ರೂ.
* ಲೋಕೋಪಯೋಗಿ ಇಲಾಖೆ – 10,741 ಕೋಟಿ ರೂ.
* ಸಮಾಜಕಲ್ಯಾಣ ಇಲಾಖೆ – 11,163 ಕೋಟಿ ರೂ.
* ಇಂಧನ ಇಲಾಖೆ – 13,803 ಕೋಟಿ ರೂ.
* ಒಳಾಡಳಿತ ಮತ್ತು ಸಾರಿಗೆ – 14,509 ಕೋಟಿ ರೂ.
* ಆರೋಗ್ಯ ಮತ್ತು ಕುಟುಂಬ ಕಲ್ಯಾಣ 15,151 ಕೋಟಿ ರೂ.
* ಕಂದಾಯ ಇಲಾಖೆ – 15,943 ಕೋಟಿ ರೂ.
* ನಗರಾಭಿವೃದ್ಧಿ ಇಲಾಖೆ – 17,938 ಕೋಟಿ ರೂ.
* ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ- 20,494 ಕೋಟಿ ರೂ.
* ಜಲಸಂಪನ್ಮೂಲ ಇಲಾಖೆ – 22,854 ಕೋಟಿ ರೂ.
* ಶಿಕ್ಷಣ ಇಲಾಖೆ – 37,960 ಕೋಟಿ ರೂ.
ಇತರೆ - 1,16,968 ಕೋಟಿ ರೂ.
ರಾಜ್ಯ ಬಜೆಟ್ 2023| ಪ್ರಸಕ್ತ ವರ್ಷದಲ್ಲಿ 5 ಲಕ್ಷ ಮನೆಗಳ ನಿರ್ಮಾಣಕ್ಕೆ 5 ಸಾವಿರ ಕೋಟಿ ರೂ. ಮೀಸಲು
ಶ್ರೀ ನಾರಾಯಣ ಗುರು ವಸತಿ ಶಾಲೆ ಪ್ರಾರಂಭ; 18 ಕೋಟಿ ರೂ. ವೆಚ್ಚದಲ್ಲಿ 4 ಜಿಲ್ಲೆಗಳಲ್ಲಿ ನಿರ್ಮಾಣ