ಮಡಿಕೇರಿ : ಓಣಂ ಹಬ್ಬದ ಪ್ರಯುಕ್ತ ಗುರುವಾರ ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಪೊನ್ನಂಪೇಟೆ ಪಳ್ಳಿಯತ್ ಮಡಪುರ ಮುತ್ತಪ್ಪ ದೇವಸ್ಥಾನದಲ್ಲಿ ನಮ್ಮ ದೇಶ-ನಮ್ಮ ಸಂಸ್ಕೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಗೌರಿ-ಗಣೇಶ ಉತ್ಸವದಿಂದ 10 ದಿನಗಳ ಕಾಲ ಕೊಡಗು ಜಿಲ್ಲೆಯಲ್ಲಿ ಓಣಂ ಆಚರಿಸಲಾಗುತ್ತದೆ. ಮನೆ, ಮನೆಗಳಲ್ಲಿ ಪೂಕಳಂ ಎಂಬ ಹೂವಿನ ರಂಗೋಲಿ ಬಿಡಿಸಿ ಮಹಾಬಲಿ ಚಕ್ರವರ್ತಿಯನ್ನು ಸ್ವಾಗತಿಸುತ್ತೇವೆ. 10ನೇ ದಿನ ಮನೆಯ ಎಲ್ಲರೂ ಸೇರಿ, ಪ್ರಾರ್ಥಿಸಿ, ಸಹಭೋಜನದ ಮೂಲಕ ಓಣಂ ಆಚರಿಸಲಾಗುತ್ತದೆ. ಪ್ರಜೆಗಳನ್ನು ರಕ್ಷಿಸುತ್ತಿದ್ದ ರಾಜನ ಜ್ಞಾಪಕಾರ್ಥ ನಡೆಸುವ ವಿಶೇಷ ಆಚರಣೆ ಎಂದು ಮಲಯಾಳಿ ಸಮುದಾಯದ ಹಿರಿಯರು ಮಾಹಿತಿ ನೀಡಿದರು.
ಪೊನ್ನಂಪೇಟೆ ಪಳ್ಳಿಯತ್ ಮಡಪುರ ಮುತ್ತಪ್ಪ ದೇವಸ್ಥಾನದ ಸಮಿತಿ ಖಜಾಂಚಿ ಶಾಜಿ ಅಚ್ಚುತ್ತನ್ ಮಾತನಾಡಿ, 10 ದಿನ ಚಕ್ರವರ್ತಿಯನ್ನು ಬರ ಮಾಡಿಕೊಳ್ಳುತ್ತೇವೆ. ಅವನಿಗಾಗಿ ರಂಗೋಲಿ ಹಾಕಿ, ಸಾಂಪ್ರದಾಯಿಕ ಹಬ್ಬ ಆಚರಿಸುತ್ತೇವೆ. ಯುವ ಸಮುದಾಯ ಕೂಡ ಹೆಚ್ಚು ಭಾಗಿಯಾಗುತ್ತಿರುವುದು ವಿಶೇಷವಾಗಿದೆ. ಕೊಡಗಿನ ಕೈಲ್ಪೊವ್ದ್ ಹಬ್ಬ ನಡೆಯುವ ಸಂದರ್ಭ ಓಣಂ ಆಚರಿಸಲಾಗುತ್ತದೆ ಎಂದರು.
ದೇವಸ್ಥಾನ ಅರ್ಚಕ ಪಿ.ಆರ್.ಸುದೀಶ್ ಮಾತನಾಡಿ, ಹಬ್ಬದಲ್ಲಿ ಒಂದೊಂದು ಕಡೆಗಳಲ್ಲಿ ಒಂದೊಂದು ರೀತಿಯ ಆಹಾರ ಪದ್ಧತಿ ಇದೆ. ಸಸ್ಯಾಹಾರ ಮತ್ತು ಮಾಂಸಾಹಾರವನ್ನು ಆಯಾ ಭಾಗದ ಜನರು ಅನುಸರಿಸುತ್ತಾರೆ ಎಂದರು.
ಕೊಡಗು ಹಿಂದು ಮಲಯಾಳಿ ಸಮಾಜದ ಅಧ್ಯಕ್ಷ ಎನ್. ಆರ್.ಅಮೃತ್ರಾಜ, ಪಿ.ಆರ್.ದಿನೇಶ್, ಕೆ.ವಿ.ರಾಮಕೃಷ್ಣ, ಪಿ.ಕೆ. ಮಹೇಶ್, ಪಿ.ಕೆ.ನಳಿನಿ, ರಾಉಣ್ಣಿ, ಶಿಬಿಲ್, ಕುಮಾರಿ, ಬಿಪಿನ್, ತಾಲೂಕು ಪತ್ರಕರ್ತ ಸಂಘದ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ, ಪ್ರ. ಕಾರ್ಯದರ್ಶಿ ಎನ್. ಎನ್. ದಿನೇಶ್, ಕಾರ್ಯದರ್ಶಿ ಮಂಡೇಡ ಅಶೋಕ್, ಖಜಾಂಚಿ ವಿ. ವಿ. ಅರುಣ್ಕುಮಾರ್, ನಿರ್ದೇಶಕ ಚಿಮ್ಮಣಮಾಡ ದರ್ಶನ್ ದೇವಯ್ಯ, ಸದಸ್ಯ ಡಿ. ನಾಗೇಶ್ ಇದ್ದರು.