ಬೆಳಗಾವಿ: ಜಿಲ್ಲಾ ಪಂಚಾಯಿತಿ ಸದಸ್ಯ ಹಾಗೂ ಬಿಜೆಪಿ ಮುಖಂಡ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್ ಮಾಜಿ ಸಚಿವ ವಿನಯ ಕುಲಕರ್ಣಿಗೆ ಸುಪ್ರೀಂಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದ್ದು, ಇಂದು ಹಿಂಡಲಗಾ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ಹೈಕೋರ್ಟ್ನಲ್ಲಿ ಜಾಮೀನು ಅರ್ಜಿ ತಿರಸ್ಕೃತಗೊಂಡಿದ್ದಕ್ಕೆ ವಿನಯ ಕುಲಕರ್ಣಿ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಬಳಿಕ ವಿಚಾರಣೆ ನಡೆಸಿದ ಕೋರ್ಟ್ ಆಗಸ್ಟ್ 19ರಂದೇ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿತ್ತು. ಆದರೆ ಆದೇಶದ ಪ್ರತಿ ಇದುವರೆಗೆ ಹಿಂಡಲಗಾ ಜೈಲು ಅಧಿಕಾರಿಗಳಿಗೆ ಸಿಗದಿದ್ದರಿಂದ ಬಿಡುಗಡೆ ತಡವಾಗಿತ್ತು. ಇಂದು ಕೊನೆಗೂ ಜಾಮೀನು ಪ್ರತಿ ಜೈಲು ಅಧಿಕಾರಿಗಳ ಕೈಸೇರಿದ್ದು, ವಿನಯ್ ಕುಲಕರ್ಣಿ ಜೈಲು ವಾಸ ಅಂತ್ಯವಾಗಿದೆ. ಒಟ್ಟು 9 ತಿಂಗಳ 16 ದಿನ ಸೆರೆವಾಸದಿಂದ ಮುಕ್ತಿ ಪಡೆದಿದ್ದಾರೆ.
ಸುಪ್ರೀಂಕೋರ್ಟ್ನ ಷರತ್ತಿನ ಅನ್ವಯ ವಿನಯ್ ಕುಲಕರ್ಣಿ ಅವರು ಧಾರವಾಡಕ್ಕೆ ಹೋಗುವಂತಿಲ್ಲ. ಸಾಕ್ಷಿ ನಾಶ ಸಾಧ್ಯತೆ ಇದೆ ಎಂದು ಸಿಬಿಐ ವಾದ ಮಂಡನೆ ಹಿನ್ನೆಲೆಯಲ್ಲಿ ಧಾರವಾಡಕ್ಕ ಹೋಗದಂತೆ ನ್ಯಾಯಾಲಯ ಮಾಜಿ ಸಚಿವರಿಗೆ ಷರತ್ತು ವಿಧಿಸಿದೆ.
ಏನಿದು ಪ್ರಕರಣ?
2016ರ ಜೂನ್ 15ರಂದು ಧಾರವಾಡದ ಸಪ್ತಾಪುರದ ಉದಯ್ ಜಿಮ್ ಬಳಿ ಯೋಗೇಶ್ ಗೌಡರನ್ನು ದುಷ್ಕರ್ಮಿಗಳ ತಂಡ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿತ್ತು. ಪ್ರಕರಣದ ಗಂಭೀರತೆ ಅರಿತ ಸರ್ಕಾರ 2019ರಲ್ಲಿ ಈ ಕೇಸನ್ನು ಸಿಬಿಐಗೆ ವರ್ಗಾಯಿಸಿತ್ತು.
ಯೋಗೇಶ್ ಗೌಡ ಹತ್ಯೆ ಪ್ರಕರಣದ ಆರೋಪಿಯಾಗಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಸುಮಾರು ಒಂಬತ್ತು ತಿಂಗಳಿನಿಂದ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದರು.
Good News: ಮಕ್ಕಳಿಗೂ ಬಂತು ಕರೊನಾ ಲಸಿಕೆ! ಸೂಜಿರಹಿತ ‘ಜೈಕೋವಿ-ಡಿ’ ತುರ್ತುಬಳಕೆಗೆ ಅನುಮೋದನೆ
ಪೊಲೀಸ್ ಕಾರಿನಲ್ಲಿ ಹಿಂದೆ-ಮುಂದೆ ಬೇರೆ ಬೇರೆ ನಂಬರ್ ಕಂಡು ಗಾಬರಿಗೊಂಡ ಜನ: ಅಸಲಿಯತ್ತು ಹೀಗಿದೆ ನೋಡಿ..!
ತಾಲಿಬಾನ್ ಉಗ್ರರ ಅಟ್ಟಹಾಸದ ನಡುವೆಯೇ ಪ್ರತಿಜ್ಞೆ ಮಾಡಿದ ಅಮೆರಿಕ ಅಧ್ಯಕ್ಷ ಜೋ ಬೈಡೆನ್