ನೆಲ್ಲೂರು: ಆಮ್ಲಜನಕದ ಕೊರತೆಯಿಂದ ಎಂಟು ರೋಗಿಗಳು ಮೃತಪಟ್ಟಿದ್ದಾರೆ ಎಂದು ಸಂಬಂಧಿಕರು ಆರೋಪ ಮಾಡಿರುವ ಘಟನೆ ಆಂಧ್ರಪ್ರದೇಶದ ನೆಲ್ಲೂರು ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.
ಎಂಟು ರೋಗಿಗಳಲ್ಲಿ ಆರು ಮಂದಿಯನ್ನು ಆಸ್ಪತ್ರೆಯ ವೈದ್ಯಕೀಯ ತೀವ್ರ ನಿಗಾ ಘಟಕ (ಎಂಐಸಿಯು) ವಾರ್ಡ್ಗೆ ದಾಖಲಿಸಲಾಗಿತ್ತು. ಆದರೆ ಈ ರೋಗಿಗಳು ಮೃತಪಟ್ಟಿದ್ದು, ಆಮ್ಲಜನಕದ ಕೊರತೆ ಹಾಗೂ ಆಸ್ಪತ್ರೆಯ ಅಧಿಕಾರಿ, ಸಿಬ್ಬಂದಿಗಳ ನಿರ್ಲಕ್ಷ್ಯವೇ ಕಾರಣ ಎಂದು ಸಂಬಂಧಿಕರು ಆರೋಪಿಸಿದ್ದಾರೆ.
ಇದನ್ನೂ ಓದಿ: ಫುಡ್ಕೋರ್ಟ್ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ – ಮೇಯರ್ ವಿನಾಯಕ ಜತೆ ಅಧಿಕಾರಿಗಳ ಭೇಟಿ
ಈ ಆರೋಪಗಳಿಗೆ ಪ್ರತಿಕ್ರಿಯಿಸಿದ ಆಸ್ಪತ್ರೆಯ ಅಧಿಕಾರಿಗಳು ಆಮ್ಲಜನಕದ ಕೊರತೆಯಿಂದ ಯಾವುದೇ ರೋಗಿಗಳು ಸಾವನ್ನಪ್ಪಿಲ್ಲ. ಬದಲಾಗಿ ರೋಗಿಗಳು ಅವರಿಗಿದ್ದ ಕಾಯಿಲೆಗಳಿಂದ ಮಾತ್ರ ಮೃತಪಟ್ಟಿದ್ದಾರೆ. ಆಸ್ಪತ್ರೆಯಲ್ಲಿ ಆಮ್ಲಜನಕದ ಪೂರೈಕೆಯಲ್ಲಿ ಯಾವುದೇ ಕೊರತೆಯಿಲ್ಲ ಎಂದು ಹೇಳಿದ್ದಾರೆ.
ಈ ಕುರಿತು ಸರ್ಕಾರಿ ಜನರಲ್ ಆಸ್ಪತ್ರೆಯ ಅಧೀಕ್ಷಕರು ಮಧ್ಯ ಪ್ರವೇಶಿಸಿ, ಪ್ರಕರಣದ ಕುರಿತು ಕೂಲಂಕುಷ ತನಿಖೆ ನಡೆಸುವಂತೆ ಸೂಚಿಸಿದ್ದಾರೆ. ಆದರೆ, ಆಸ್ಪತ್ರೆಯ ಸೂಪರೆಡೆಂಟ್ ವರದಿಯಲ್ಲಿ ರೋಗಿಗಳು ಮತ್ತು ಆಮ್ಲಜನಕದ ಕೊರತೆಯ ನಡುವೆ ಯಾವುದೇ ಸಂಬಂಧವಿಲ್ಲ ಎಂದು ಉಲ್ಲೇಖಿಸಲಾಗಿದೆ.(ಏಜೆನ್ಸೀಸ್)