ಹಿಸಾರ್: ಹರಿಯಾಣ ರಾಜ್ಯದ ಹಿಸಾರ್ ಜಿಲ್ಲೆ ಬಿಧ್ಮಿರಾ ಗ್ರಾಮದಲ್ಲಿ ವಾಸಿಸುತ್ತಿರುವ ಸುಮಾರು 40 ಮುಸ್ಲಿಂ ಕುಟುಂಬವು ಹಿಂದು ಸಂಪ್ರದಾಯ ಪಾಲಿಸಿಕೊಂಡು ಬರುತ್ತಿವೆ. ಶುಕ್ರವಾರ ಮೃತಪಟ್ಟಿದ್ದ ವೃದ್ಧೆಯೊಬ್ಬರ ಅಂತ್ಯ ಸಂಸ್ಕಾರವನ್ನೂ ಹಿಂದು ಧರ್ಮದಂತೆಯೇ ನೆರವೇರಿವೆ. ಏ.18ರಂದು ದನೋಡಾ ಕಲಾನ್ ಗ್ರಾಮದಲ್ಲಿ 6 ಕುಟುಂಬದ 35 ಜನರು ಹಿಂದುಧರ್ಮ ಸ್ವೀಕರಿಸಿದ್ದರು.
ಬಿಧ್ಮಿರಾ ಗ್ರಾಮದ ಸತ್ಬೀರ್ ಎಂಬುವವರ ತಾಯಿ ಫೂಲಿ ದೇವಿ(84) ವಯೋಸಹಜವಾಗಿ ಅಸುನೀಗಿದ್ದರು. ತಾಯಿಯ ಅಂತ್ಯಸಂಸ್ಕಾರವನ್ನು ಹಿಂದು ಸಂಪ್ರದಾಯದಂತೆ ನೆರವೇರಿಸಲು ಪುತ್ರ ಇಚ್ಛಸಿದ್ದಕ್ಕೆ ಸಹಮತ ಸೂಚಿಸಿದ ಗ್ರಾಮಸ್ಥರು ಈ ಕಾರ್ಯದಲ್ಲಿ ಭಾಗಿಯಾಗಿದ್ದರು. ಬಿಧ್ಮಿರಾದಲ್ಲಿ 40 ಕುಟುಂಬಗಳ 250 ಜನರು ವಾಸಿಸುತ್ತಿದ್ದಾರೆ.
ಇದನ್ನೂ ಓದಿರಿ ಬಾಸುಮತಿ ಅಕ್ಕಿ ರಫ್ತುದಾರರಿಂದ 411 ಕೋಟಿ ರೂ. ಪಂಗನಾಮ!
ಸತ್ಬೀರ್ ಮಾತನಾಡಿ, ಹಿಂದುಗಳಾಗಿದ್ದ ನಮ್ಮ ಪೂರ್ವಜರು ಪರಿಶಿಷ್ಟ ಜಾತಿಗೆ ಸೇರುವ ದೂಮ್ ಜಾತಿಯವರು. ಮೊಗಲ್ ದೊರೆ ಔರಂಗಜೇಬ್ನ ಆಡಳಿತಾವಧಿಯಲ್ಲಿ ನಮ್ಮ ಪೂರ್ವಜನರು ಬಲವಂತವಾಗಿ ಮುಸ್ಲಿಂ ಧರ್ಮಕ್ಕೆ ಮತಾಂತರ ಆಗಬೇಕಾಯಿತು. ನಮ್ಮ ಇಡೀ ಗ್ರಾಮದ ಜನರು ಹಿಂದು ಧರ್ಮದ ಎಲ್ಲ ಹಬ್ಬವನ್ನೂ ಆಚರಿಸುತ್ತಾರೆ. ಆದರೆ, ಮೃತರ ಶವ ಸಂಸ್ಕಾರವನ್ನು ಮುಸ್ಲಿಂ ಧರ್ಮದಂತೆ ಮಾಡುತ್ತಿದ್ದೆವು. ಈಗ ಹಿಂದು ಸಂಪ್ರದಾಯದಂತೆಯೇ ನೆರವೇರಿಸಿದ್ದೇವೆ. ಈ ಬಗ್ಗೆ ಯಾರಿಂದಲೂ ನಮಗೆ ಯಾವುದೇ ಒತ್ತಡವಾಗಲಿ, ಕಿರುಕುಳವಾಗಲಿ ಬಂದಿಲ್ಲ ಎಂದು ಹೇಳಿದ್ದಾರೆ. ಗ್ರಾಮಸ್ಥರು ಹೇಳುವಂತೆ, ಬಿಧ್ಮಿರಾ ನಿವಾಸಿಗಳು ಸ್ವಾತಂತ್ರ್ಯಕ್ಕೂ ಮುನ್ನ ದನೋಡಾ ಕಲಾನ್ ಗ್ರಾಮದಲ್ಲಿ ವಾಸಿಸುತ್ತಿದ್ದರಂತೆ.
ಇದನ್ನೂ ಓದಿರಿ ತಬ್ಲಿಘಿಗಳಿಂದ ಹಿಂದು ಯುವಕ ಮತಾಂತರ
ಮೀಸಲಾತಿಗಾಗಿ?: ಈ ಬಗ್ಗೆ ಪ್ರತಿಕ್ರಿಯಿಸಿರುವ ಮುಸ್ಲಿಂ ಕಲ್ಯಾಣ ಸಂಸ್ಥೆಯ ರಾಜ್ಯಾಧ್ಯಕ್ಷ ಹರ್ಫೂಲ್ ಖಾನ್, ಪರಿಶಿಷ್ಟ ಜಾತಿಯಲ್ಲಿರುವ ಸೌಲಭ್ಯ ಪಡೆಯಲು ದನೋಡಾ ಕಲಾನ್ ಗ್ರಾಮಸ್ಥರು ಹಿಂದು ಧರ್ಮ ಸ್ವೀಕರಿಸಿದ್ದಾರೆ. ಬಿಧ್ಮಿರಾ ಗ್ರಾಮದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. 1951ರ ಅಧಿಸೂಚನೆ ಪ್ರಕಾರ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಧರ್ಮದವರಿಗೆ ಪರಿಶಿಷ್ಟ ಜಾತಿಯ ದೂಮ್ ಕೆಟಗರಿಯ ಮೀಸಲಾತಿ ಸೌಲಭ್ಯ ಸಿಗುವುದಿಲ್ಲ ಎಂದಿದ್ದಾರೆ. (ಏಜೆನ್ಸೀಸ್)
ಇದನ್ನೂ ಓದಿರಿ ನಿಮಗೆ ಜನ ಸೇವೆ ಸಲ್ಲಿಸುವ ಆಸಕ್ತಿ ಇದೆಯೆ? ಇಲ್ಲಿದೆ ಉತ್ತಮ ಅವಕಾಶ