ಉತ್ತರಕನ್ನಡ: ಒಂದೇ ಮನೆಯ ನಾಲ್ವರ ಕೊಲೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಮಾಹಿತಿ ಹೊರಬಿದ್ದಿದ್ದು, ಕೊಲೆಗೆ ಆಸ್ತಿ ಆಸೆಯೇ ಕಾರಣ ಎನ್ನಲಾಗಿದೆ. ಮಾತ್ರವಲ್ಲ, ಕೊಲೆಯ ವೇಳೆ ನಾಲ್ಕು ವರ್ಷದ ಮಗು ಮಲಗಿದ್ದರಿಂದ ಹಾಗೂ ಇನ್ನೊಂದು ಮಗು ಪಕ್ಕದ ಮನೆಯಲ್ಲಿ ಆಟವಾಡುತ್ತಿದ್ದುದರಿಂದ ಬಚಾವ್ ಆದಂತಾಗಿದೆ.
ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಹಾಡುವಳ್ಳಿಯಲ್ಲಿ ಈ ಕೊಲೆ ನಡೆದಿದೆ. ಶಂಭು ಭಟ್ (65), ಅವರ ಪತ್ನಿ ಮಾದೇವಿ ಭಟ್ (40), ಪುತ್ರ ರಾಜೀವ್ ಭಟ್ (34) ಹಾಗೂ ಸೊಸೆ ಕುಸುಮಾ ಭಟ್ (30) ಕೊಲೆಯಾದವರು. ಮನೆಯ ಹೊರಗಡೆ ನಾಲ್ವರ ಶವ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ನಾಲ್ವರನ್ನು ಅಟ್ಟಾಡಿಸಿ ಕತ್ತಿಯಿಂದ ಕಡಿದು ಹಾಕಿರುವಂಥ ಸನ್ನಿವೇಶ ಕಂಡುಬಂದಿದೆ.
ಶಂಭು ಭಟ್ ಅವರ ಹಿರಿಯ ಸೊಸೆ ವಿದ್ಯಾ ಭಟ್ ಕುಟುಂಬಸ್ಥರಿಂದ ಈ ಕೊಲೆ ನಡೆದಿದೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಈಕೆಯ ಪತಿ ಕೆಲವು ತಿಂಗಳ ಹಿಂದೆ ಮೂತ್ರಪಿಂಡ ವೈಫಲ್ಯದಿಂದ ಮೃತಪಟ್ಟಿದ್ದರು.
ಇದನ್ನೂ ಓದಿ: ಒಂದೇ ಕುಟುಂಬದ ನಾಲ್ವರ ಭೀಕರ ಕೊಲೆ; ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಶವಗಳು!
ಆ ಬಳಿಕ ಶಂಭು ಭಟ್ ಬಳಿ ಜೀವನಾಂಶಕ್ಕೆ ಆಸ್ತಿಯಲ್ಲಿ ಪಾಲು ಕೊಡುವಂತೆ ವಿದ್ಯಾ ಭಟ್ ಕುಟುಂಬಸ್ಥರು ಕೇಳಿದ್ದರು. ಇದೇ ವಿಚಾರವಾಗಿ ಹಲವು ಬಾರಿ ಎರಡೂ ಕುಟುಂಬಗಳ ನಡುವೆ ಗಲಾಟೆ ಆಗಿತ್ತು. ಕೊನೆಗೊಂದು ದಿನ ವಿದ್ಯಾ ಭಟ್ಗೆ ಶಂಭು ಭಟ್ ಆಸ್ತಿಯಲ್ಲಿ ಪಾಲು ನೀಡಿದ್ದರು. ಆ ಆಸ್ತಿಯನ್ನು ವಿನಯ್ ಭಟ್ ಎಂಬಾತ ನೋಡಿಕೊಳ್ಳುತ್ತಿದ್ದು, ಆತನೇ ಈ ಕೊಲೆ ನಡೆಸಿದ್ದಾನೆ ಎನ್ನಲಾಗಿದೆ. ಸದ್ಯಕ್ಕೆ ವಿನಯ್ ಭಟ್ ಪರಾರಿಯಾಗಿ ತಲೆಮರೆಸಿಕೊಂಡಿದ್ದು, ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಪತಿ ಹೃದಯಾಘಾತಕ್ಕೆ ಬಲಿ; ಒಂದೇ ಉರುಳಿಗೆ ಮಗನೊಂದಿಗೆ ಕೊರಳೊಡ್ಡಿ ಪ್ರಾಣ ಬಿಟ್ಟ ಪತ್ನಿ
ಹತ್ಯೆ ನಡೆದ ವೇಳೆ 10 ವರ್ಷದ ಒಂದು ಮಗು ಪಕ್ಕದ ಮನೆಯಲ್ಲಿ ಆಟವಾಡುತಿತ್ತು. ನಾಲ್ಕು ವರ್ಷದ ಇನ್ನೊಂದು ಮಗು ಮಲಗಿತ್ತು. ಪ್ರಾಣಾಪಾಯದಿಂದ ಪಾರಾಗಿರುವ ಮಕ್ಕಳಿಬ್ಬರೂ ಈಗ ಅನಾಥರಾದಂತಾಗಿದೆ. ವಿದ್ಯಾ ಭಟ್ ತಂದೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿದ್ಯಾ ಕುಟುಂಬಸ್ಥರನ್ನು ಭಟ್ಕಳ ಗ್ರಾಮೀಣ ಠಾಣಾ ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಮುಖ್ಯ ಆರೋಪಿಗಾಗಿ ಪತ್ತೆ ಕಾರ್ಯಾಚರಣೆಯೂ ಮುಂದುವರಿದಿದೆ.
ಮಂಡ್ಯದಲ್ಲಿ ಭೀಕರ ಮರ್ಡರ್: ರುಂಡ ಕತ್ತರಿಸಿ, ಶವ ಪೀಸ್ ಪೀಸ್ ಮಾಡಿ ನಾಲೆಗೆಸೆದ ಹಂತಕರು