ಆನೇಕಲ್: ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರಿಸಿರುವ ಜಿಲ್ಲಾಡಳಿತ ಶನಿವಾರವೂ ಕೋಟ್ಯಂತರ ರೂ. ಬೆಲೆಬಾಳುವ ಸರ್ಕಾರಿ ಸ್ವತ್ವನ್ನು ವಶಕ್ಕೆ ಪಡೆದಿದೆ.
ಬೆಂಗಳೂರು ಹೊರವಲಯದ ಹುಲಿಮಂಗಲದ ಸರ್ವೇ ನಂಬರ್ 155 ಹಾಗೂ 156ರಲ್ಲಿ ಭೂಗಳ್ಳರು ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಸುಮಾರು 4 ಎಕರೆ ಜಮೀನನ್ನು ಒತ್ತುವರಿ ಮಾಡಿಕೊಂಡು ಬಡಾವಣೆ ನಿರ್ಮಿಸಿ ಮಾರಾಟ ಮಾಡಿದ್ದರು. ಮತ್ತಷ್ಟು ಜಾಗದಲ್ಲಿ ವಾಣಿಜ್ಯ ಮಳಿಗೆಗಳು, ಶೇಡ್ ನಿರ್ಮಿಸಿ ಬಾಡಿಗೆಗೆ ನೀಡಿದ್ದರು. ಅವರಿಗೆ ನೋಟಿಸ್ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಉಪವಿಭಾಗಾಧಿಕಾರಿ ಶಿವಣ್ಣ ಹಾಗೂ ಆನೇಕಲ್ ತಹಸೀಲ್ದಾರ್ ದಿನೇಶ್ ನೇತೃತ್ವದಲ್ಲಿ ಜೆಸಿಬಿ ಮೂಲಕ ತೆರವು ಮಾಡಲಾಯಿತು.
ಜಿಲ್ಲಾಡಳಿತದ ನಿರ್ಧಾರದಂತೆ ಪ್ರತಿ ಶನಿವಾರ, ಸರ್ಕಾರಿ ಜಾಗ ಹಾಗೂ ಕೆರೆಗಳ ಒತ್ತುವರಿ ತೆರವು ಕಾರ್ಯಾಚರಣೆ ನಡೆಯುತ್ತಿದ್ದು, ಕಳೆದ ವಾರವೂ ಹುಲಿಮಂಗಲದಲ್ಲಿ ಒತ್ತುವರಿಯಾಗಿದ್ದ ಜಾಗವನ್ನು ತೆರವುಗೊಳಿಸಿ ಸರ್ಕಾರದ ಸುಪರ್ದಿಗೆ ತೆಗೆದುಕೊಳ್ಳಲಾಯಿತು. ಅದರ ಮುಂದುವರಿದ ಭಾಗವಾಗಿ ಶನಿವಾರ ಹುಲಿಮಂಗಲದಲ್ಲಿ ಜಮೀನು ಖರೀದಿಸಿ ಮನೆ ಕಟ್ಟಿಕೊಂಡಿದ್ದವರ ವಿರೋಧದ ನಡುವೆಯೂ ತೆರವು ಕಾರ್ಯಾಚರಣೆ ನಡೆಯಿತು. ಶೆಡ್ನಂತಹ ದೊಡ್ಡ ಕಟ್ಟಡ ನಿರ್ಮಿಸಿ ಫ್ಯಾಕ್ಟರಿ ಮಾಡಿಕೊಂಡಿದ್ದ ಜಾಗವನ್ನು ಸರ್ಕಾರದ ವಶಕ್ಕೆ ಪಡೆದು ಸಾರ್ವಜನಿಕರ ಉಪಯೋಗಕ್ಕೆ ಬಳಸಿಕೊಳ್ಳಲು ನಿರ್ಧರಿಸಲಾಗಿದೆ ಎಂದು ತಹಸೀಲ್ದಾರ್ ದಿನೇಶ್ ತಿಳಿಸಿದರು.
ಸರ್ಕಾರಿ ಕೆರೆ-ಕುಂಟೆ ಹಾಗೂ ಭೂಮಿ ಒತ್ತುವರಿ ಮಾಡಿಕೊಳ್ಳುವ ಮುನ್ನ ಯೋಚಿಸಬೇಕು. ಇಂತಹ ಜಾಗಗಳನ್ನು ಖರೀದಿಸುವವರೂ ಕೂಡ ಎಚ್ಚರಿಕೆ ವಹಿಸಬೇಕು. ಇಲ್ಲದಿದ್ದಲ್ಲಿ ಇದೇ ರೀತಿ ಮುಂದೆ ಕೂಡ ಒತ್ತುವರಿ ಭೂಮಿಯನ್ನು ವಶಕ್ಕೆ ಪಡೆಯುತ್ತೇವೆ.
ಶಿವಣ್ಣ, ಬೆಂಗಳೂರು ನಗರ ಜಿಲ್ಲಾ ಉಪವಿಭಾಗಾಧಿಕಾರಿಕೆರೆಗಳ ಉಳಿವಿಗಾಗಿ ಮೂರ್ನಾಲ್ಕು ವರ್ಷಗಳಿಂದ ನಿರಂತರವಾಗಿ ಹೋರಾಟ ಮಾಡುತ್ತಿದ್ದೇನೆ. ಬೆಂಗಳೂರು ನಗರ ಜಿಲ್ಲಾಧಿಕಾರಿ ಮಂಜುನಾಥ್ ಅವರು ಕಠಿಣ ನಿರ್ಧಾರ ಕೈಗೊಂಡು ಕೆರೆಗಳ ಒತ್ತುವರಿ ತೆರವು, ರಾಜಕಾಲುವೆ ಒತ್ತುವರಿ ತೆರವು ಕಾರ್ಯಕ್ಕೆ ಸಹಕಾರ ನೀಡುತ್ತಿರುವುದು ಶ್ಲಾಘನೀಯ.
ಕ್ಯಾಪ್ಟನ್ ಸಂತೋಷ್ ಕುಮಾರ್
ಮಾಜಿ ಯೋಧ