ಬೆಂಗಳೂರು: ನಟ ರಾಘವೇಂದ್ರ ರಾಜಕುಮಾರ್ ಸೋಷಿಯಲ್ ಮೀಡಿಯಾಗಳಲ್ಲಿ ಆಗಾಗ ಯಾವುದಾದರೂ ಒಂದು ವಿಷಯವನ್ನು ನೆನಪಿಸಿಕೊಂಡು, ಅವುಗಳನ್ನು ಹಂಚಿಕೊಂಡು ಖುಷಿ ಪಡುತ್ತಿರುತ್ತಾರೆ. ಇದೀಗ 33 ವರ್ಷಗಳ ಹಿಂದಿನ ಆ ನೆನಪೊಂದನ್ನು ಹಂಚಿಕೊಂಡು ಖುಷಿಪಡುವ ಜತೆಗೆ ಸಿನಿಪ್ರಿಯರನ್ನೂ ಮೂರು ದಶಕಗಳ ಹಿಂದೆ ಹೋಗುವಂತೆ ಮಾಡಿದ್ದಾರೆ.
ಹೌದು.. ಇದು ಅವರ ‘ನಂಜುಂಡಿ ಕಲ್ಯಾಣ’ದ ಕುರಿತು. ಕನ್ನಡ ಚಿತ್ರರಂಗದಲ್ಲಿ ದೊಡ್ಡ ಸದ್ದು ಮಾಡಿದ್ದ ‘ನಂಜುಂಡಿ ಕಲ್ಯಾಣ’ ತೆರೆಕಂಡು ಇಂದಿಗೆ ಭರ್ತಿ 33 ವರ್ಷಗಳಾಗಿದ್ದು, ಅವರು ಆ ನೆನಪನ್ನು ಸಣ್ಣ ವಿಡಿಯೋ ತುಣುಕೊಂದರ ಮೂಲಕ ಹಂಚಿಕೊಂಡಿದ್ದಾರೆ.
ಪಾರ್ವತಮ್ಮ ರಾಜಕುಮಾರ್ ಅವರ ನಿರ್ಮಾಣ, ಎಂ.ಎಸ್. ರಾಜಶೇಖರ್ ಅವರ ನಿರ್ದೇಶನ, ಚಿ. ಉದಯಶಂಕರ್ ಅವರ ಸಂಭಾಷಣೆ, ಉಪೇಂದ್ರಕುಮಾರ್ ಅವರ ಸಂಗೀತ, ವಿ.ಕೆ. ಕಣ್ಣನ್ ಅವರ ಛಾಯಾಗ್ರಹಣದಲ್ಲಿ ಮೂಡಿಬಂದಿದ್ದ ಈ ಸಿನಿಮಾ 1989ರ ಫೆ. 15ರಂದು ತೆರೆಕಂಡಿತ್ತು.
ಇದಕ್ಕೂ ಮೊದಲು ರಾಘವೇಂದ್ರ ರಾಜಕುಮಾರ್ ‘ಚಿರಂಜೀವಿ ಸುಧಾಕರ್’ ಎಂಬ ಚಿತ್ರದಲ್ಲಿ ನಾಯಕರಾಗಿ ನಟಿಸಿದ್ದರೂ ‘ನಂಜುಂಡಿ ಕಲ್ಯಾಣ’ ಚಿತ್ರ ಅವರಿಗೆ ಭರ್ಜರಿ ಯಶಸ್ಸು ಹಾಗೂ ಜನಪ್ರಿಯತೆ ತಂದುಕೊಟ್ಟಿತ್ತು.
ಮಾತ್ರವಲ್ಲ, ಈ ಚಿತ್ರದ ಮೂಲಕ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿದ್ದ ನಟಿ ಮಾಲಾಶ್ರೀ, ಇದರಲ್ಲಿನ ‘ಒಳಗೆ ಸೇರಿದರೆ ಗುಂಡು, ಹುಡುಗಿಯಾಗುವಳು ಗಂಡು..’ ಎಂಬ ಒಂದೇ ಒಂದು ಹಾಡಿನಿಂದ ಕನ್ನಡಿಗರ ಹಾಟ್ ಫೇವರಿಟ್ ಆದರು. ಅಲ್ಲದೆ ಈ ಚಿತ್ರದ ಮೂಲಕ ನಾಯಕಿಯಾಗಿ ಪರಿಚಿತರಾದ ಮಾಲಾಶ್ರೀ ಬಳಿಕ ಹಲವಾರು ಕನ್ನಡ ಚಿತ್ರಗಳಲ್ಲಿ ನಟಿಸಿ ‘ಕನಸಿನ ರಾಣಿ’ ಎಂದೇ ಚಿರಪರಿಚಿತರಾದರು.
"ಇನ್ನೂ ಗ್ಯಾರಂಟೀ… ನಂಜುಂಡಿ ಕಲ್ಯಾಣ…"
— Raghavendra Rajkumar (@RRK_Official_) February 15, 2022
'ನಂಜುಂಡಿ ಕಲ್ಯಾಣ' ಬಿಡುಗಡೆಯಾಗಿ ಇಂದಿಗೆ 33 ವರ್ಷಗಳು.
.
ನಿರ್ದೇಶನ: ಎಂ.ಎಸ್.ರಾಜಶೇಖರ್
ನಿರ್ಮಾಪಕರು: ಶ್ರೀಮತಿ ಪಾರ್ವತಮ್ಮ ರಾಜ್ಕುಮಾರ್
ಸಂಭಾಷಣೆ: ಚಿ.ಉದಯಶಂಕರ್
ಸಂಗೀತ: ಉಪೇಂದ್ರ ಕುಮಾರ್
ಛಾಯಾಗ್ರಹಣ: ವಿ.ಕೆ.ಕಣ್ಣನ್
ಬಿಡುಗಡೆ: 15-02-1989@RamuMalashree #NanjundiKalyana pic.twitter.com/hgYbtZoOMZ
ಇನ್ನು ‘ನಂಜುಂಡಿ ಕಲ್ಯಾಣ’ದ ಈ ಜೋಡಿ ಎಷ್ಟು ಜನಪ್ರಿಯವಾಯಿತೆಂದರೆ, ಆ ಬಳಿಕ ಇವರಿಬ್ಬರ ಜೋಡಿಯಲ್ಲಿ ಮೂಡಿ ಬಂದಿದ್ದ ‘ಗಜಪತಿಯ ಗರ್ವಭಂಗ’ ಕೂಡ ಭಾರಿ ಯಶಸ್ಸು ಗಳಿಸಿತು. ವಿಶೇಷವೆಂದರೆ ಈ ಚಿತ್ರವನ್ನೂ ಎಂ.ಎಸ್. ರಾಜಶೇಖರ್ ನಿರ್ದೇಶಿಸಿದ್ದರು. ಹೀಗೆ ತಮ್ಮ ವೃತ್ತಿಜೀವನದಲ್ಲಿ ಮರೆಯಲಾಗದ ಮೈಲುಗಲ್ಲಾಗಿ ಉಳಿದ ‘ನಂಜುಂಡಿ ಕಲ್ಯಾಣ’ ಸಿನಿಮಾ 33 ವರ್ಷಗಳ ಈ ನೆನಪನ್ನು ರಾಘವೇಂದ್ರ ರಾಜಕುಮಾರ್ ಹಂಚಿಕೊಂಡಿದ್ದಾರೆ.
ಎಂಥ ದುಸ್ಥಿತಿಯಲ್ಲಿದೆ ನೋಡಿ ನಿರ್ದೇಶಕ ಪುಟ್ಟಣ್ಣ ಕಣಗಾಲರ ಮನೆ!