ಹೈದರಾಬಾದ್ : ಲಾಕಪ್ನಲ್ಲಿ ನೀಡಿದ ಕಿರುಕುಳದಿಂದಾಗಿ ದಲಿತ ಮಹಿಳೆಯೊಬ್ಬರು ಸಾವಪ್ಪಿದ್ದ ಪ್ರಕರಣದಲ್ಲಿ ಮೂವರು ಪೊಲೀಸರನ್ನು ಕೆಲಸದಿಂದ ವಜಾ ಮಾಡಲಾಗಿದೆ. ತೆಲಂಗಾಣದ ಅಡ್ಡಗುದೂರು ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಆಗಿದ್ದ ವಿ.ಮಹೇಶ್ವರ್, ಪೇದೆಗಳಾಗಿದ್ದ ಎಂ.ಎ.ರಶೀದ್ ಮತ್ತು ಪಿ.ಜನಯ್ಯ ವಜಾ ಆಗಿರುವವರು.
ಖಮ್ಮಂ ಜಿಲ್ಲೆಯ ಚಿಂತಕಣಿಯ ನಿವಾಸಿಯಾಗಿದ್ದ 45 ವರ್ಷ ವಯಸ್ಸಿನ ಮರಿಯಮ್ಮ ಎಂಬುವರನ್ನು ಅಡ್ಡಗುದೂರು ಪೊಲೀಸರು ಕಳವಿನ ಆರೋಪದ ಮೇಲೆ ವಿಚಾರಣೆಗಾಗಿ ಕರೆತಂದಿದ್ದರು. ಪೊಲೀಸ್ ಠಾಣೆಯಲ್ಲಿ ಪ್ರಜ್ನೆ ತಪ್ಪಿಬಿದ್ದಿದ್ದ ಆಕೆ ಜೂನ್ 18 ರಂದು ಸಾವಪ್ಪಿದ್ದರು. ಮೃತ ಮರಿಯಮ್ಮನೊಂದಿಗೆ ಠಾಣೆಗೆ ಕರೆತರಲಾಗಿದ್ದ ಆಕೆಯ ಮಗ, ಪೊಲೀಸರು ನೀಡಿದ ಕಿರುಕುಳದಿಂದಾಗಿ ಆಕೆ ಸಾವಪ್ಪಿದಳು ಎಂದು ಆರೋಪಿಸಿದ್ದರು.
ಇದನ್ನೂ ಓದಿ: ಗಡಿಯ ತುಂಬಾ ಸಿಹಿ ಸಿಹಿ: ಪಾಕಿಸ್ತಾನ- ಭಾರತದ ಯೋಧರು ಪುನಃ ಹಂಚಿಕೊಂಡರು ಸ್ವೀಟ್ಸ್
ಈ ಆರೋಪದ ಹಿನ್ನೆಲೆಯಲ್ಲಿ ಮೂವರು ಪೊಲೀಸರನ್ನು ಕೂಡಲೇ ಸಸ್ಪೆಂಡ್ ಮಾಡಲಾಗಿತ್ತು. ತೆಲಂಗಾಣ ಹೈಕೋರ್ಟ್ ಈ ಪ್ರಕರಣದಲ್ಲಿ ನ್ಯಾಯಾಂಗ ತನಿಖೆ ಆದೇಶಿಸಿದ್ದು, ನ್ಯಾಷನಲ್ ಕಮಿಷನ್ ಫಾರ್ ಶೆಡ್ಯೂಲ್ಡ್ ಕ್ಯಾಸ್ಟ್ಸ್, ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ನೋಟೀಸು ನೀಡಿತ್ತು. ತೆಲಂಗಾಣ ಸಿಎಂ ಕೆ.ಚಂದ್ರಶೇಖರ್ ರಾವ್ ಅವರು ಮೃತ ಮಹಿಳೆಯ ಕುಟುಂಬಕ್ಕೆ 35 ಲಕ್ಷ ರೂ.ಗಳ ಪರಿಹಾರ ಘೋಷಿಸಿದ್ದರು.
ಈ ಪ್ರಕರಣದಲ್ಲಿ ಆರೋಪ ಎದುರಿಸುತ್ತಿದ್ದ ಸಬ್ಇನ್ಸ್ಪೆಕ್ಟರ್ ಮಹೇಶ್ವರ್ ಮತ್ತು ಇಬ್ಬರು ಪೇದೆಗಳು ರಾಚಕೊಂಡ ಪೊಲೀಸ್ ಕಮಿಷನರ್ ಮಹೇಶ್ ಭಾಗವತ್ ಅವರು, ಸೇವೆಯಿಂದ ವಜಾಗೊಳಿಸಿ ಆದೇಶ ಹೊರಡಿಸಿದ್ದಾರೆ. (ಏಜೆನ್ಸೀಸ್)