ನವದೆಹಲಿ: ನಾವು ಮೂರನೇ ಭಾರಿ ಅಧಿಕಾರಕ್ಕೇರಿದ ಆರಂಭದಲ್ಲೇ ಭ್ರಷ್ಟಾಚಾರದ ಮೇಲೆ ದೊಡ್ಡ ದಾಳಿ ನಡೆಯಲಿದೆ. ಇದನ್ನು ನಾನು ಖಾತರಿಪಡಿಸುತ್ತೇನೆ ಎಂದು ಪ್ರಧಾನಿ ಮೋದಿ ಎಚ್ಚೆರಿಕೆ ನೀಡಿದ್ದಾರೆ.
ಇದನ್ನೂ ಓದಿ: ಬಿಜಾಪುರನಲ್ಲಿ ಎನ್ಕೌಂಟರ್, ಒಂಬತ್ತು ನಕ್ಸಲರ ಕೊಂದ ಯೋಧರು
ಉತ್ತರಾಖಂಡದ ರುದ್ರಪುರದಲ್ಲಿ ಸಾರ್ವಜನಿಕ ರ್ಯಾಲಿಯಲ್ಲಿ ಮಾತನಾಡಿದ ಅವರು, ಬೆದರಿಕೆಗಳು ಮತ್ತು ನಿಂದನೆಗಳಿಗೆ ಹೆದರುವುದಿಲ್ಲ. ಪ್ರತಿಯೊಬ್ಬ ಭ್ರಷ್ಟರ ವಿರುದ್ಧ ಕ್ರಮ ಮುಂದುವರಿಯುತ್ತದೆ ಎಂದ ಪರೋಕ್ಷವಾಗಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟದ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಭ್ರಷ್ಟರು ಗುಂಪುಗೂಡಿದ್ದಾರೆ: ಬಿಜೆಪಿ ಪ್ರಾಮಾಣಿಕತೆ, ಪಾರದರ್ಶಕತೆಯನ್ನು ಜನರಿಗೆ ತಲುಪಿಸುತ್ತಿದ್ದೇವೆ. ಮತ್ತೊಂದೆಡೆ ಭ್ರಷ್ಟರು, ರಾಜವಂಶಸ್ಥರು ಗುಂಪುಗೂಡಿದ್ದಾರೆ. ಈ ಭ್ರಷ್ಟರು ಮೋದಿಯವರನ್ನು ನಿಂದಿಸಿ ಬೆದರಿಕೆ ಹಾಕುತ್ತಿದ್ದಾರೆ. ‘ಭ್ರಷ್ಟಾಚಾರ ತೊಲಗಿ’ ಎಂದು ಹೇಳುತ್ತಿದ್ದೇವೆ. ಅವರು ಭ್ರಷ್ಟರನ್ನು ಉಳಿಸಿ’ ಎಂದು ಇಂಡಿಯಾ ಮೈತ್ರಿಕೂಟ ಹೇಳುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ. ಈಗ ಭಾರತದಲ್ಲಿ ಅರಾಜಕತೆ ಮತ್ತು ಅಸ್ಥಿರತೆಯನ್ನು ಸೃಷ್ಠಿಸಲು ಬಯಸುತ್ತಿದೆ ಎಂದು ಹೆಸರು ಹೇಳದೆ ಕರ್ನಾಟಕದ ಸಂಸದ ಡಿಕೆ ಸುರೇಶ್ ವಿರುದ್ಧ ವಾಗ್ದಾಳಿ ನಡೆಸಿದರು.
ಡಿಕೆ ಸುರೇಶ್ ವಿರುದ್ಧ ಪರೋಕ್ಷ ವಾಗ್ದಾಳಿ: ಲೋಕಸಭೆ ಅಧಿವೇಶನ ವೇಳೆ ಉತ್ತರ-ದಕ್ಷಿಣ ಎಂದು ಹೇಳಿಕೆ ನೀಡಿ ಗದ್ದಲ ಎಬ್ಬಿಸಿದ ಕರ್ನಾಟಕದ ನಾಯಕ ಡಿ.ಕೆ.ಸುರೇಶ್ ಅವರ ಹೆಸರನ್ನು ಹೆಸರಿಸದೆ, ಟೀಕಿಸಿದ ಮೋದಿ “ಕಾಂಗ್ರೆಸ್ನ ಹಿರಿಯ ನಾಯಕರೊಬ್ಬರು ದೇಶವನ್ನು ಉತ್ತರ ಮತ್ತು ದಕ್ಷಿಣ ಎಂದು ವಿಭಜಿಸುವ ಮಾತನಾಡಿದ್ದಾರೆ, ಅಂತಹ ವ್ಯಕ್ತಿಯನ್ನು ಶಿಕ್ಷಿಸಬೇಕಲ್ಲವೇ? ಆದರೆ ಕಾಂಗ್ರೆಸ್ ಅವರಿಗೆ ಚುನಾವಣಾ ಟಿಕೆಟ್ ನೀಡಿದೆ.ಬಿಪಿನ್ ರಾವತ್ ಅವರನ್ನು ಕಾಂಗ್ರೆಸ್ ನಿಂದಿಸಿರುವುದನ್ನು ಉತ್ತರಾಖಂಡ ಎಂದಿಗೂ ಮರೆಯುವುದಿಲ್ಲ ಎಂದಿದ್ದಾರೆ.
ರಾಹುಲ್ ಗಾಂಧಿ ವಿರುದ್ಧ ಕಿಡಿ: ಬಿಜೆಪಿ ಮೂರನೇ ಬಾರಿಗೆ ಆಯ್ಕೆಯಾದರೆ ಭಾರತಕ್ಕೆ ಬೆಂಕಿ ಹತ್ತಿಕೊಳ್ಳಲಿದೆ ಎಂಬ ರಾಹುಲ್ ಗಾಂಧಿ ಅವರ ಇತ್ತೀಚಿನ ಹೇಳಿಕೆ ವಿರುದ್ಧ ವಾಗ್ದಾಳಿ ನಡೆಸಿದ್ದು, ಇದು ಪ್ರಜಾಪ್ರಭುತ್ವದ ಭಾಷೆಯೇ ಎಂದು ಪ್ರಶ್ನೆ ಮಾಡಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಅವರನ್ನು ಕ್ಷೇತ್ರದಲ್ಲಿ ಬಿಡಬೇಡಿ ಎಂದು ಮತದಾರರಿಗೆ ಕರೆ ನೀಡಿದರು.
ದೇಶಕ್ಕೆ ಬೆಂಕಿ ಹಚ್ಚಲು ಬಿಡುತ್ತೀರಾ?: ದೇಶವು ಮೂರನೇ ಬಾರಿಗೆ ಬಿಜೆಪಿಯನ್ನು ಆರಿಸಿದರೆ ದೇಶಕ್ಕೆ ಬೆಂಕಿ ಹಚ್ಚಲಾಗುವುದು ಎಂದು ಕಾಂಗ್ರೆಸ್ ಶಾಹಿ ಕುಟುಂಬದ ರಾಜಕುಮಾರ ಸ್ಪಷ್ಟ ಕರೆ ನೀಡಿದ್ದಾರೆ. ಅವರು 70 ವರ್ಷಗಳ ಕಾಲ ಆಡಳಿತ ನಡೆಸಿದ ನಂತರ 10 ವರ್ಷಗಳ ಕಾಲ ಅಧಿಕಾರದಿಂದ ಹೊರಗುಳಿದಿದ್ದಾರೆ. ದೇಶ ಮತ್ತು ದೇಶಕ್ಕೆ ಬೆಂಕಿ ಹಚ್ಚುವ ಮಾತನಾಡುತ್ತಿದ್ದಾರೆ ಇದನ್ನು ನೀವು ಒಪ್ಪುತ್ತೀರಾ? ದೇಶಕ್ಕೆ ಬೆಂಕಿ ಹಚ್ಚಲು ಬಿಡುತ್ತೀರಾ?ಈ ಭಾಷೆ ಸ್ವೀಕಾರಾರ್ಹವೇ?ಇದು ಪ್ರಜಾಪ್ರಭುತ್ವದ ಭಾಷೆಯೇ? ಇಂತಹ ಮಾತುಗಳನ್ನಾಡಿದವರನ್ನು ಶಿಕ್ಷಿಸುವುದಿಲ್ಲವೇ? ಎಂದು ಪ್ರಧಾನಿ ಮೋದಿ ಕೇಳಿದ್ದಾರೆ.
ಮಹಿಳಾ ಸಬಲೀಕರಣಕ್ಕೆ ಒತ್ತು: ನಾವು ಮಹಿಳೆಯರ ಸಬಲೀಕರಣಕ್ಕಾಗಿ `ನಮೋ ಡ್ರೋನ್ ದೀದಿ’ ಯೋಜನೆಯನ್ನು ಪ್ರಾರಂಭಿಸಿದ್ದೇವೆ. ಈ ಯೋಜನೆ ಅಡಿಯಲ್ಲಿ, ನಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳಿಗೆ ಡ್ರೋನ್ ಪೈಲಟ್ಗಳಾಗಲು ಸಹಾಯ ಮಾಡಲು ಲಕ್ಷಾಂತರ ರೂಪಾಯಿ ಮೌಲ್ಯದ ಡ್ರೋನ್ಗಳನ್ನು ನೀಡಲಾಗುತ್ತಿದೆ. ಇದು ಉತ್ತರಾಖಂಡದ ನಮ್ಮ ಹೆಣ್ಣುಮಕ್ಕಳು ಮತ್ತು ಸಹೋದರಿಯರಿಗೂ ಪ್ರಯೋಜನ ನೀಡುತ್ತದೆ. ಉತ್ತರಾಖಂಡ ಅಭಿವೃದ್ದಿಗೆ ಕೇಂದ್ರ ಬದ್ಧವಾಗಿದೆ. ನಮ್ಮ ಇಚ್ಛೆ ಸರಿಯಾಗಿದ್ದರೆ ಅದರ ಫಲಿತಾಂಶವೂ ಸರಿಯಾಗಿರುತ್ತದೆ. ಮತ್ತಷ್ಟು ಕೆಲಸ ಮಾಡಲು ಬಿಜೆಪಿಯನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಪ್ರಜಾಪ್ರಭುತ್ವದಲ್ಲಿ ಕಾಂಗ್ರೆಸ್ ಮತ್ತು ಅದರ ತುರ್ತು ಮನಸ್ಥಿತಿಯನ್ನು ಯಾರೂ ನಂಬುವುದಿಲ್ಲ. ಹಾಗಾಗಿ ಅವರು ಈಗ ಜನರನ್ನು ಪ್ರಚೋದಿಸುತ್ತಿದ್ದಾರೆ. ಕಾಂಗ್ರೆಸ್ ಭಾರತವನ್ನು ಅಸ್ಥಿರತೆಯತ್ತ ಕೊಂಡೊಯ್ಯಲು ಬಯಸಿದೆ ಎಂದು ಪ್ರಧಾನಿ ಮೋದಿ ಟೀಕಿಸಿದ್ದಾರೆ.