ಮಹಾಲಿಂಗಪುರ: ಉಳುವ ಬಡ ರೈತನಿಗೆ ಭೂಮಿ ನೀಡಿದ ಇಂದಿರಾ ಗಾಂಧಿ, ರಾಜೀವ ಗಾಂಧಿ ಪಂಚಾಯತ್ ರಾಜ್ಯವನ್ನು ಸಂವಿಧಾನಬದ್ಧಗೊಳಿಸಿ 18 ವರ್ಷದ ಯುವಕರಿಗೆ ಮತದಾನದ ಹಕ್ಕು ನೀಡಿದ್ದು ರಾಜೀವ ಗಾಂಧಿ. ಇಂದು ತಂತ್ರಜ್ಞಾನ ಅಭಿವೃದ್ಧಿ ಆಗಲು ರಾಜೀವ ಗಾಂಧಿ ಕಾರಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಹೇಳಿದರು.
ಪಟ್ಟಣದ ಖಾಸಗಿ ಆಸ್ಪತ್ರೆ ಆವರಣದಲ್ಲಿ ಶುಕ್ರವಾರ ಸಂಜೆ ಚುನಾವಣೆ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಕೆಎಚ್ಡಿಸಿ ಪ್ರಾರಂಭಿಸಿದ್ದು ಆಗಿನ ಕಾಂಗ್ರೆಸ್ ಮುಖ್ಯಮಂತ್ರಿ ಡಿ. ದೇವರಾಜ ಅರಸು. ಆದರೆ, ಇಂದು ಕ್ಷೇತ್ರದ ಶಾಸಕರು ಅದರ ಅಧ್ಯಕ್ಷ ಪಟ್ಟವನ್ನು ನೇಕಾರರಿಗೆ ನೀಡದೆ ತಾವೇ ಅಲಂಕರಿಸಿ ಅನ್ಯಾಯ ಎಸಗಿದ್ದಾರೆ. ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ತಮ್ಮ ಜೀವನ ಗಂಡಾಂತರದಲ್ಲಿದ್ದರೂ ಇಡೀ ದೇಶದ ತುಂಬ ಸಂಚರಿಸಿ ಜನಸೇವೆ ಮಾಡುತ್ತಿದ್ದಾರೆ. ತಾವು ಪ್ರಧಾನಿ ಆಗದೆ ಆರ್ಥಿಕ ತಜ್ಞ ಮನಮೋಹನ ಸಿಂಗ್ ಅವರನ್ನು ಪ್ರಧಾನಿ ಮಾಡಿದ್ದು ಅವರ ಹೆಗ್ಗಳಿಕೆ ಮತ್ತು ತ್ಯಾಗದ ಪ್ರತೀಕ ಎಂದರು.
ಮಹಾ ಸುಳ್ಳುಗಾರ ಪ್ರಧಾನಿ ನರೇಂದ್ರ ಮೋದಿ ಏನು ಮಾಡಿದರು. ರೈತರ ಆದಾಯ ದುಪ್ಪಟ್ಟು ಮಾಡುವುದಾಗಿ ಹೇಳಿ ಗೊಬ್ಬರ ದರ, ಪೆಟ್ರೋಲ್, ಡೀಸೆಲ್ ಬೆಲೆ ಏರಿಸಿದರು. ರೈತರು ಸತ್ಯಾಗ್ರಹದಲ್ಲಿ ಅನೇಕರು ಪ್ರಾಣ ತೆತ್ತರು. ಆದರೆ ಮೋದಿ ಆಕಡೆ ನೋಡಲಿಲ್ಲ. ಬದಲಾಗಿ ಟ್ರಾಕ್ಟರ್ ಹವಾ ತೆಗೆದರು. ಆ ಕೂಡಲೇ ಮೋದಿ ಹವಾ ಕೂಡ ಹೋಯಿತು. ಕಳೆದ 20 ವರ್ಷ ಅಧಿಕಾರದಲ್ಲಿದ್ದರೂ ಕ್ಷೇತ್ರದ ಜನತೆ ಸೇವೆ ಮಾಡಲು ವಿಲರಾದ ಗದ್ದಿಗೌಡರನ್ನು ತ್ಯಜಿಸಿ, ಈಗಾಗಲೇ ಸೇವೆಗೆ ಹೆಸರಾಗಿರುವ ಸಂಯುಕ್ತ ಪಾಟೀಲ ಅವರನ್ನು ಗೆಲ್ಲಿಸಿರಿ ಎಂದರು.
ಮಾಜಿ ಸಚಿವೆ ಉಮಾಶ್ರೀ ಮಾತನಾಡಿ, ರೈತರ ಸಾಲ ಮನ್ನಾ, ಉಚಿತ ಕರೆಂಟ್, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಶಾಲಾ ಮಕ್ಕಳಿಗೆ ಶೂ ನೀಡಿದ್ದು ಸಿದ್ದರಾಮಯ್ಯ ಸರ್ಕಾರ ಎಂದರು.
ಮುಧೋಳ ತಾಲೂಕು ಕಾಂಗ್ರೆಸ್ ಅಧ್ಯಕ್ಷ ಧರೆಪ್ಪ ಸಾಂಗಲೀಕರ, ಮುಖಂಡರಾದ ಸಿದ್ದು ಕೊಣ್ಣೂರ, ಡಾ. ಎ.ಆರ್. ಬೆಳಗಲಿ, ಸಂಪ್ರದಾ ಪಾಟೀಲ, ರವೀಂದ್ರ ಕಲಬುರ್ಗಿ ಮಾತನಾಡಿದರು.
ಕಾಂಗ್ರೆಸ್ ಮುಖಂಡರಾದ ಮಲ್ಲಪ್ಪ ಸಿಂಗಾಡಿ, ಈಶ್ವರ ಚಮಕೇರಿ, ಬಲವಂತಗೌಡ ಪಾಟೀಲ, ಮಹಾದೇವ ಮಾರಾಪೂರ, ಅರ್ಜುನ ದೊಡಮನಿ, ಶ್ರೀಪಾದ ಗುಂಡಾ, ಮಲ್ಲಪ್ಪ ಭಾವಿಕಟ್ಟಿ, ಶಂಕರ ಸೊನ್ನದ, ಹೊಳೆಬಸು ಕರೆಹೊನ್ನ, ಪ್ರಭು ಬೆಳಗಲಿ, ವಿಠ್ಠಲ ಹೊಸಮನಿ, ಜೋತೆಪ್ಪ ಕಪರಟ್ಟಿ ಇತರರಿದ್ದರು.