ಕಾಸರಗೋಡು: ಆಂಧ್ರಪ್ರದೇಶದಿಂದ ಕಾಸರಗೋಡಿಗೆ ಟೂರಿಸ್ಟ್ ಬಸ್ಸಿನಲ್ಲಿ ಸಾಗಿಸುತ್ತಿದ್ದ 240 ಕಿಲೋ ಗಾಂಜಾ ವಶಪಡಿಸಿಕೊಂಡಿರುವ ವಿದ್ಯಾನಗರ ಠಾಣೆ ಪೊಲೀಸರನ್ನು ಮೂವರನ್ನು ಬಂಧಿಸಿದ್ದಾರೆ.
ಬೇಕಲ ಪೊಲೀಸ್ ಠಾಣೆ ವ್ಯಾಪ್ತಿಯ ಮೊಯ್ದೀನ್ ಕುಞಿ, ವಿದ್ಯಾನಗರದ ಮಹಮ್ಮದ್ ಹನೀಫಾ, ಬಸ್ ಚಾಲಕ- ಚೆಂಗಳ ನಿವಾಸಿ ಮಹಮ್ಮದ್ ರಯೀಸ್ ಬಂಧಿತರು. ಖಚಿತ ಮಾಹಿತಿಯನ್ವಯ ಕಾಸರಗೋಡು ಡಿವೈಎಸ್ಪಿ ಪಿ.ಪಿ ಸದಾನಂದನ್ ನೇತೃತ್ವದ ತಂಡ ಚೆಟ್ಟುಂಗುಯಿ ಸಮೀಪ ಕಾರ್ಯಾಚರಣೆ ನಡೆಸಿದೆ.
ಆರೋಪಿಗಳು ಸಂಚರಿಸುತ್ತಿದ್ದ ಬಸ್ಸಿನ ಹಿಂಭಾಗದಲ್ಲಿ ಪ್ರತ್ಯೇಕವಾಗಿ ನಿರ್ಮಿಸಲಾದ ಚೇಂಬರ್ನಲ್ಲಿ ಗಾಂಜಾ ಇರಿಸಲಾಗಿತ್ತು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೋಟಿಗೂ ಮಿಕ್ಕಿ ಮೌಲ್ಯ ಅಂದಾಜಿಸಲಾಗಿದೆ.
ಆರೋಪಿಗಳಿಂದ ಬಂದೂಕು, ಕಠಾರಿ ಸಹಿತ ಮಾರಕಾಯುಧಗಳನ್ನು ವಶಪಡಿಸಿಕೊಳ್ಳಲಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ಆರ್ಟಿಒ ಕಚೇರಿಯಿಂದ ಪ್ರತ್ಯೇಕ ಪರವಾನಗಿ ಪಡೆದು ಆಂಧ್ರ ಪ್ರದೇಶಕ್ಕೆ ಬಸ್ ಸರ್ವೀಸ್ ನಡೆಸುವ ಮೂಲಕ ಗಾಂಜಾ ಸಾಗಾಟ ನಡೆಸಿರುವುದಾಗಿ ಎಂದು ಡಿವೈಎಸ್ಪಿ ಪಿ.ಪಿ ಸದಾನಂದನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.