ಬೆಂಗಳೂರು: ಕೇಂದ್ರ ಗೃಹ ಇಲಾಖೆ ಪ್ರತಿವರ್ಷ ನೀಡುವ ‘ಸ್ಪೆಷಲ್ ಆಪರೇಷನ್ ಅವಾರ್ಡ್’ಗೆ ರಾಜ್ಯದ ಇಬ್ಬರು ಐಪಿಎಸ್ ಅಧಿಕಾರಿಗಳು ಸೇರಿ 11 ಪೊಲೀಸರು ಭಾಜನರಾಗಿದ್ದಾರೆ. ದೇಶದಲ್ಲಿ ಭಯೋತ್ಪಾದಕ ಚಟುವಟಿಕೆಗಳ ಮೇಲೆ ನಿಗಾ ವಹಿಸಿ ವಿಶೇಷ ಕಾರ್ಯಾಚರಣೆ ನಡೆಸಿ ಶಂಕಿತ ಉಗ್ರರ ಬಂಧನ ನಡೆಸಿರುವ ಪ್ರಕರಣಗಳಲ್ಲಿ ಕಾರ್ಯನಿರ್ವಹಿಸಿದ ತನಿಖಾಧಿಕಾರಿ, ಇತರ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ನೀಡಲಿರುವ ವಿಶೇಷ ಪದಕ ಇದಾಗಿದೆ.
ದಕ್ಷಿಣ ಭಾರತದಲ್ಲಿ ಐಸಿಸ್ ಸಂಘಟನೆ ಬಲಗೊಳಿಸಲು ಯುವಕರ ನೇಮಕಾತಿ, ದೇಣಿಗೆ ಸಂಗ್ರಹದಲ್ಲಿ ಶಂಕಿತರು ತೊಡಗಿದ್ದರು. ಇವರ ಮೇಲೆ ನಿಗಾ ವಹಿಸಿ 2020ರ ಸೆಪ್ಟೆಂಬರ್ನಲ್ಲಿ ಎಂ.ಎಸ್.ರಾಮಯ್ಯ ಆಸ್ಪತ್ರೆಯ ನೇತ್ರ ವೈದ್ಯ ಡಾ. ಅಬ್ದುರ್ ರೆಹಮಾನ್, ಇರ್ಫಾನ್ ನಾಸೀರ್ ಬಂಧನ. ಆನಂತರ ತೌಕೀರ್ ಜಿಹಾದ್ ಸೇರಿದಂತೆ ಹಲವರ ಬಂಧನ ಪ್ರಕರಣದ ಮುಂದಾಳತ್ವ ವಹಿಸಿದ್ದ ರಾಷ್ಟ್ರೀಯ ತನಿಖಾ ದಳದ (ಎನ್ಐಎ) ಕರ್ನಾಟಕ ಕೇಡರ್ ಡಿಐಜಿ ಸೋನಿಯಾ ನಾರಂಗ್, ಸಂಜಯನಗರ ಇನ್ಸ್ಪೆಕ್ಟರ್ ಜಿ.ಬಾಲರಾಜು ಮತ್ತು ಐಎಸ್ಡಿ ಸಹಾಯಕ ಸಬ್ಇನ್ಸ್ಪೆಕ್ಟರ್ ಎಂ.ಸೌಕತ್ ಅಲಿ, ಮುಖ್ಯಪೇದೆ ಪಿ.ಸೋಮಶೇಖರ್ಗೆ ಪ್ರಶಸ್ತಿ ಲಭಿಸಿದೆ.
ಅದೇ ರೀತಿ ಬೆಂಗಳೂರು ನಗರ ಗುಪ್ತದಳ ವಿಭಾಗದ ಡಿಸಿಪಿ ಕೆ.ಸಂತೋಷ್ ಬಾಬು ಮತ್ತು ಮುಖ್ಯಪೇದೆ ಕ್ರುದ್ದೀನ್ ಕುಂದಿ ಅವರಿಗೆ ಪ್ರಶಸ್ತಿ ಲಭಿಸಿದೆ. ಅವರು ಉಗ್ರ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಖೋರಸನ್ ಪ್ರೋವೆನ್ಸ್ (ಐಎಸ್ಕೆಸಿ) ಸಂಘಟನೆಯ ಬೆಂಗಳೂರಿನ ಮಾದೇಶ ಅಲಿಯಾಸ್ ಅಲಿ ಮುಆವಿಯಾ ಎಂಬಾತನನ್ನು ಬಂಧಿಸಿದ್ದರು. ಆತನನ್ನು ವಶಕ್ಕೆ ಪಡೆದ ಎನ್ಐಎ ಅಧಿಕಾರಿಗಳು, ಮಾದೇಶ ಕೊಟ್ಟ ಮಾಹಿತಿ ಮೇರೆಗೆ ಐಸಿಸ್ ಜತೆ ಸಂಪರ್ಕ ಹೊಂದಿದ್ದ ಶಂಕಿತರನ್ನು ಮಂಗಳೂರು, ಕೇರಳದಲ್ಲಿ ಬಂಧಿಸಿದ್ದರು.
ಇದೇ ರೀತಿ ಇನ್ಸ್ಪೆಕ್ಟರ್ಗಳಾದ ಪಿ.ಶಿವಕುಮಾರ್, ಎಚ್.ವಿ.ಸುದರ್ಶನ್, ಮಹೇಶ್ ಪ್ರಸಾದ್, ಎಸ್.ಆರ್.ಶ್ರೀಧರ್, ಕಾನ್ಸ್ಟೇಬಲ್ ಅಕ್ಬರ್ ಯಡ್ರಾಮಿ ಮತ್ತು ಮುಖ್ಯಪೇದೆ ಶ್ರೀಕೃಷ್ಣ ದೇವಿಗೌಡ ಅವರಿಗೆ ‘ಸ್ಪೇಷಲ್ ಆಪರೇಷನ್ ಅವಾರ್ಡ್’ ಲಭಿಸಿದೆ.
ಜಿಮ್ ಮಾಡಬೇಕಾ ಬೇಡ್ವಾ? ಹೃದಯದ ಆರೋಗ್ಯದ ಬಗ್ಗೆ ತಜ್ಞರ ಮಾಹಿತಿ ಇಲ್ಲಿದೆ
ಜಿಮ್, ಫಿಟ್ನೆಸ್ ಸೆಂಟರ್ಗಳಿಗೆ ಮಾರ್ಗಸೂಚಿ ರಚನೆ: ಆರೋಗ್ಯ ಸಚಿವ ಸುಧಾಕರ್