ಜಿಲ್ಲಾ ಲೀಡ್ ಬ್ಯಾಂಕ್ ಸಭೆಯಲ್ಲಿ ಜಿಲ್ಲಾಧಿಕಾರಿ ಅಕ್ರಂಪಾಷಾ ಸ್ಪಷ್ಟನೆ
ಕೋಲಾರ: ಭಾರತೀಯ ರಿಸರ್ವ್ ಬ್ಯಾಂಕ್ನಿಂದ ಮುದ್ರಿಸಲಾಗಿರುವ 10 ರೂ. ನಾಣ್ಯಗಳು ಚಲಾವಣೆಯಲ್ಲಿದ್ದು, ಎಲ್ಲರೂ ನಿತ್ಯದ ವಹಿವಾಟಿನಲ್ಲಿ ಯಾವುದೇ ಸಂಶಯವಿಲ್ಲದೆ ಬಳಸಬಹುದು ಎಂದು ಜಿಲ್ಲಾಧಿಕಾರಿ ಅಕ್ರಂಪಾಷಾ ಸ್ಪಷ್ಟಪಡಿಸಿದರು.
ನಗರದ ಹೊರವಲಯದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶನಿವಾರ ಜಿಲ್ಲಾ ಲೀಡ್ ಬ್ಯಾಂಕ್ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, 10 ರೂ. ನಾಣ್ಯಗಳನ್ನು ಆರ್ಬಿಐ ನಿಷೇಧಿಸಿದೆ ಎಂದು ಕೆಲವರು ವದಂತಿಗಳನ್ನು ಹಬ್ಬಿಸಿ ಸಾರ್ವಜನಿಕರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ. ಆದರೆ ಕೇಂದ್ರ ಸರ್ಕಾರ, ಆರ್ಬಿಐ 10ರೂ. ನಾಣ್ಯಗಳನ್ನು ನಿಷೇಧಿಸಿಲ್ಲ. ಅಷ್ಟೇ ಅಲ್ಲ, ಚಲಾವಣೆಯನ್ನು ಹಿಂಪಡೆದಿಲ್ಲ. ಸಾರ್ವಜನಿಕರು ವದಂತಿಗಳನ್ನು ನಂಬದೆ 10 ರೂ. ನಾಣ್ಯಗಳನ್ನು ಸ್ವೀಕರಿಸಬಹುದು. ನಿಸ್ಸಂಶಯವಾಗಿ ಬಳಸಬಹುದಾಗಿದೆ ಎಂದು ಹೇಳಿದರು.
ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಎಸ್.ಸುಧೀರ್ ಮಾತನಾಡಿ, ಸಾರ್ವಜನಿಕರು ಯಾವುದೇ ಗೊಂದಲಗಳಿಗೆ ಒಳಗಾಗದೆ 10 ರೂ. ನಾಣ್ಯಗಳನ್ನು ಬಳಸಬಹುದು. ಬ್ಯಾಂಕ್ಗಳಲ್ಲಿ ಠೇವಣೆ ಮಾಡಬಹುದು. ಯಾರೇ ಆದರೂ 10 ರೂ. ನಾಣ್ಯಗಳನ್ನು ಸ್ವೀಕರಿಸದೆ ಇರುವುದು, ನಾಣ್ಯ ಕಾಯ್ದೆ 2011ರ ಸೆಕ್ಷನ್ 6(1) ಸ್ಪಷ್ಟ ಉಲ್ಲಂಘನೆಯಾಗುತ್ತದೆ. ಆದ್ದರಿಂದ ಜಿಲ್ಲೆಯ ಎಲ್ಲ ಬ್ಯಾಂಕ್ಗಳು, ವ್ಯಾಪಾರಸ್ಥರು, ಸಾರ್ವಜನಿಕರು ರೂ.10 ನಾಣ್ಯಗಳನ್ನು ಭಯಮುಕ್ತವಾಗಿ ಸ್ವೀಕರಿಸಿ, ಅದನ್ನು ಬಳಸಬಹುದಾಗಿದೆ ಎಂದು ತಿಳಿಸಿದರು.
10ರೂ.ನಾಣ್ಯಗಳನ್ನು ಬಳಸುವುದರಿಂದ ಚಿಲ್ಲರೆ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಆರ್ಬಿಐ ಹಲವು ಬಾರಿ ಈ ನಾಣ್ಯಗಳನ್ನು ಚಲಾವಣೆಯಿಂದ ಹಿಂಪಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದರೂ, ಕೆಲವರು ಸಾಮಾಜಿಕ ಜಾಲತಾಣಗಳ ಮೂಲಕ ಜನರಲ್ಲಿ ತಪ್ಪು ಸಂದೇಶ ರವಾನಿಸುತ್ತಿದ್ದಾರೆ ಎಂದು ಹೇಳಿದರು.
ವಿವಿಧ ಬ್ಯಾಂಕ್ಗಳ ವ್ಯವಸ್ಥಾಪಕರು, ಕೈಗಾರಿಕಾ ಸಂಘಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ನಗರಾಭಿವೃದ್ಧಿ ಕೋಶದ ಜಿಲ್ಲಾ ಯೋಜನಾ ನಿರ್ದೇಶಕ ಖಲೀಲ್ ಸಾಬ್, ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ ಕೆ.ಶ್ರೀನಿವಾಸ್, ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಲೆಕ್ಕಾಧಿಕಾರಿ ಪಾಂಡುರಂಗನಾಯ್ಡು ಇತರರು ಭಾಗವಹಿಸಿದ್ದರು.