ಬೆಂಗಳೂರು: ಐಪಿಎಲ್ನಲ್ಲಿ ಆರ್ಸಿಬಿಯ ಆಟ ನೋಡುವುದು ಎಷ್ಟು ಸಂಭ್ರಮವೋ, ಅಷ್ಟೇ ಕಾತರ ಕರ್ನಾಟಕದ ಆಟಗಾರರ ಆಟವನ್ನು ನೋಡುವುದಕ್ಕೂ ಇರುತ್ತದೆ. ಆರ್ಸಿಬಿ ತಂಡದಲ್ಲಿ ರಾಜ್ಯದ ಪ್ರಮುಖ ಆಟಗಾರರಿಲ್ಲ ಎಂಬ ಕೊರಗು ಈ ಸಲವೂ ಮುಂದುವರಿದಿದೆ. ಇದರ ನಡುವೆ 16ನೇ ಆವೃತ್ತಿಯಲ್ಲಿ 7 ತಂಡಗಳಲ್ಲಿ ಒಟ್ಟು 10 ಕನ್ನಡಿಗರು ಸ್ಥಾನ ಪಡೆದಿದ್ದಾರೆ. ರಾಬಿನ್ ಉತ್ತಪ್ಪ ನಿವೃತ್ತಿಯಿಂದಾಗಿ ಈ ಬಾರಿ ಸಿಎಸ್ಕೆ ತಂಡದಲ್ಲಿ ಕನ್ನಡಿಗರಿಲ್ಲದಂತಾಗಿದೆ. ಜತೆಗೆ ಮುಂಬೈ ಇಂಡಿಯನ್ಸ್, ಕೆಕೆಆರ್ ತಂಡದಲ್ಲೂ ಕನ್ನಡಿಗರಿಲ್ಲ. ಮಯಾಂಕ್ ಅಗರ್ವಾಲ್, ಮನೀಷ್ ಪಾಂಡೆ ಈ ಬಾರಿ ತಂಡ ಬದಲಾಯಿಸಿಕೊಂಡಿದ್ದಾರೆ. ರಾಜ್ಯದ ಎರಡು ಹೊಸಮುಖಗಳೂ ಐಪಿಎಲ್ಗೆ ಎಂಟ್ರಿ ಪಡೆದುಕೊಂಡಿವೆ.
ಲಖನೌ ಸೂಪರ್ಜೈಂಟ್ಸ್ (ಕೆಎಲ್ ರಾಹುಲ್, ಕೆ. ಗೌತಮ್)
ಸ್ಟಾರ್ ಬ್ಯಾಟರ್ ಕೆಎಲ್ ರಾಹುಲ್ ಸಾರಥ್ಯದ ಲಖನೌ ಸೂಪರ್ಜೈಂಟ್ಸ್ ತಂಡದಲ್ಲಿ ಈ ಬಾರಿ ಕನ್ನಡಿಗರ ಸಂಖ್ಯೆ ಎರಡಕ್ಕಿಳಿದಿದೆ. ಕಳೆದ ಆವೃತ್ತಿಯ ಬಳಿಕ ರಾಹುಲ್ ಜತೆ ಆಲ್ರೌಂಡರ್ ಕೆ.ಗೌತಮ್ ತಂಡದಲ್ಲಿ ಸ್ಥಾನ ಉಳಿಸಿಕೊಂಡಿದ್ದರೆ, ಮನೀಷ್ ಪಾಂಡೆ ಹರಾಜಿಗೆ ಮುನ್ನ ಹೊರಬಿದ್ದಿದ್ದರು. ಭಾರತ ಟೆಸ್ಟ್ ತಂಡದಿಂದ ಹೊರಬಿದ್ದಿರುವುದು, ಉಪನಾಯಕನ ಪಟ್ಟ ಕಳೆದುಕೊಂಡಿರುವುದು ಮತ್ತು ಬಿಸಿಸಿಐ ವಾರ್ಷಿಕ ಗುತ್ತಿಗೆಯಲ್ಲೂ ಹಿಂಬಡ್ತಿ ಪಡೆದಿರುವುದರ ಸಹಿತ ರಾಹುಲ್ ಇತ್ತೀಚೆಗೆ ಹಲವು ಹಿನ್ನಡೆ ಎದುರಿಸಿದ್ದಾರೆ. ಅದೆಲ್ಲದಕ್ಕೂ ಅವರು ಈ ಬಾರಿಯ ಐಪಿಎಲ್ನಲ್ಲಿ ದಿಟ್ಟ ಉತ್ತರ ನೀಡಬೇಕಾಗಿದೆ.
ರಾಜಸ್ಥಾನ ರಾಯಲ್ಸ್ (ದೇವದತ್ ಪಡಿಕಲ್, ಕೆಸಿ ಕಾರ್ಯಪ್ಪ)
ಹಾಲಿ ರನ್ನರ್ಅಪ್ ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಕಳೆದ ವರ್ಷ ನಾಲ್ವರು ಕನ್ನಡಿಗರಿದ್ದರು. ಈ ಪೈಕಿ ವೇಗಿ ಪ್ರಸಿದ್ಧ ಕೃಷ್ಣ ಈ ಬಾರಿ ತಂಡದಲ್ಲಿದ್ದರೂ, ಗಾಯದಿಂದಾಗಿ ಆಡುತ್ತಿಲ್ಲ. ಕರುಣ್ ನಾಯರ್ ಹೊರಬಿದ್ದಿದ್ದಾರೆ. 2021ರ ನಂತರ ಆರ್ಸಿಬಿ ತಂಡದಿಂದ ಹೊರಬಿದ್ದಿದ್ದ ಎಡಗೈ ಆರಂಭಿಕ ಬ್ಯಾಟರ್ ದೇವದತ್ ಪಡಿಕಲ್ ಕಳೆದ ವರ್ಷ ರಾಜಸ್ಥಾನ ಪರವೂ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಈ ಸಲವೂ ಅವರು ರಾಯಲ್ಸ್ಗೆ ಪ್ರಮುಖ ಬ್ಯಾಟರ್. ಜತೆಗೆ ಸ್ಪಿನ್ನರ್ ಕೆಸಿ ಕಾರ್ಯಪ್ಪ ಮಿಂಚುವ ತವಕದಲ್ಲಿದ್ದಾರೆ.
ಸನ್ರೈಸರ್ಸ್ ಹೈದರಾಬಾದ್ (ಮಯಾಂಕ್ ಅಗರ್ವಾಲ್)
ಕಳೆದ ವರ್ಷ ಸನ್ರೈಸರ್ಸ್ ತಂಡದಲ್ಲಿದ್ದ ಮೂವರು ಕನ್ನಡಿಗರೂ (ಜೆ. ಸುಚಿತ್, ಶ್ರೇಯಸ್ ಗೋಪಾಲ್, ಆರ್. ಸಮರ್ಥ್) ಈ ಬಾರಿ ತಂಡದಲ್ಲಿಲ್ಲ. ಅವರ ಬದಲಿಗೆ ರಾಜ್ಯ ತಂಡದ ನಾಯಕ ಮಯಾಂಕ್ ಅಗರ್ವಾಲ್ ಹೊಸ ಎಂಟ್ರಿಯಾಗಿದ್ದಾರೆ. ಪಂಜಾಬ್ ಕಿಂಗ್ಸ್ ನಾಯಕತ್ವ ಕಳೆದುಕೊಳ್ಳುವ ಜತೆಗೆ ತಂಡದಿಂದಲೂ ಹೊರಬಿದ್ದಿರುವ ಮಯಾಂಕ್, ಸನ್ರೈಸರ್ಸ್ ಪರ ಮತ್ತೆ ಸಾಮರ್ಥ್ಯ ಸಾಬೀತುಪಡಿಸಬೇಕಾಗಿದೆ.
ಡೆಲ್ಲಿ ಕ್ಯಾಪಿಟಲ್ಸ್ (ಮನೀಷ್ ಪಾಂಡೆ, ಪ್ರವಿಣ್ ದುಬೆ)
ಸ್ಪಿನ್ನರ್ ಪ್ರವಿಣ್ ದುಬೆ ಈ ಬಾರಿಯೂ ಡೆಲ್ಲಿ ತಂಡದಲ್ಲಿ ಮುಂದುವರಿದ್ದಾರೆ. ಅವರೊಂದಿಗೆ ಅನುಭವಿ ಬ್ಯಾಟರ್ ಮನೀಷ್ ಪಾಂಡೆ ಈ ಸಲ ಡೆಲ್ಲಿ ತಂಡ ಸೇರಿಕೊಂಡಿದ್ದಾರೆ. ಮನೀಷ್ಗೆ ಇದು ಐಪಿಎಲ್ನಲ್ಲಿ 7ನೇ ತಂಡವಾಗಿದೆ. ಕಳೆದ ವರ್ಷ ಲಖನೌ ತಂಡದಲ್ಲಿದ್ದ ಮನೀಷ್ ನೀರಸ ನಿರ್ವಹಣೆ ತೋರಿದ್ದರು. ಇತ್ತೀಚೆಗೆ ದೇಶೀಯ ಕ್ರಿಕೆಟ್ನಲ್ಲೂ ಸ್ಥಿರ ನಿರ್ವಹಣೆ ತೋರಿದ್ದಾರೆ. ಈ ಸಲ ಅವರಿಂದ ಉತ್ತಮ ನಿರ್ವಹಣೆ ಬಾರದಿದ್ದರೆ, ಮುಂದಿನ ಬಾರಿ ಹರಾಜಿನಲ್ಲಿ ಮಾರಾಟವಾಗುವುದೂ ಕಷ್ಟವಾಗಬಹುದು.
ಗುಜರಾತ್ ಟೈಟಾನ್ಸ್ (ಅಭಿನವ್ ಮನೋಹರ್)
ದೇಶೀಯ ಟಿ20 ಕ್ರಿಕೆಟ್ನಲ್ಲಿ ಮಿಂಚಿ ಕಳೆದ ವರ್ಷ ಗುಜರಾತ್ ಪರ ಅವಕಾಶ ಪಡೆದ ಮಧ್ಯಮ ಕ್ರಮಾಂಕದ ಸ್ಫೋಟಕ ಬ್ಯಾಟರ್ ಅಭಿನವ್ ಮನೋಹರ್, ಅದನ್ನು ಎರಡೂ ಕೈಗಳಿಂದ ಬಾಚಿಕೊಂಡಿದ್ದರು. ಕಳೆದ ಆವೃತ್ತಿಯಲ್ಲಿ 8 ಪಂದ್ಯವಾಡಿ 108 ರನ್ ಗಳಿಸಿದ್ದ ಅಭಿನವ್, ಈ ಬಾರಿಯೂ ಹಾಲಿ ಚಾಂಪಿಯನ್ ತಂಡದ ಯಶಸ್ಸಿಗೆ ನೆರವಾಗುವ ಹಂಬಲದಲ್ಲಿದ್ದಾರೆ.
ಪಂಜಾಬ್ ಕಿಂಗ್ಸ್ (ವಿದ್ವತ್ ಕಾವೇರಪ್ಪ)
ಹಿಂದೊಮ್ಮೆ ಪಂಜಾಬ್ ತಂಡದಲ್ಲಿ ಕನ್ನಡಿಗರೇ ತುಂಬಿದ್ದರು. ಈ ಬಾರಿ ವಿದ್ವತ್ ಕಾವೇರಪ್ಪ ತಂಡದಲ್ಲಿರುವ ಏಕೈಕ ಕನ್ನಡಿಗ. ಇದೇ ಮೊದಲ ಬಾರಿಗೆ ಐಪಿಎಲ್ ತಂಡ ಸೇರಿರುವ ಕೊಡಗಿನ ವೇಗಿ ವಿದ್ವತ್, ದೇಶೀಯ ಕ್ರಿಕೆಟ್ನಲ್ಲಿ ಮಿಂಚಿದ ಪರಿಣಾಮ ಕಳೆದ ಹರಾಜಿನಲ್ಲಿ 20 ಲಕ್ಷ ರೂ. ಮೂಲಬೆಲೆಗೆ ಪಂಜಾಬ್ ಪಾಳಯ ಸೇರಿದ್ದಾರೆ. ರಬಾಡ, ಅರ್ಷದೀಪ್, ಕರನ್ರಂಥ ವೇಗಿಗಳಿರುವ ತಂಡದಲ್ಲಿ ವಿದ್ವತ್ ಆಡುವ ಅವಕಾಶದ ನಿರೀೆಯಲ್ಲಿದ್ದಾರೆ.
ಆರ್ಸಿಬಿ (ಮನೋಜ್ ಭಾಂಡಗೆ)
ಇತ್ತೀಚೆಗಿನ ವರ್ಷಗಳಲ್ಲಿ ಆರ್ಸಿಬಿ ಲೆಕ್ಕ ಭರ್ತಿಗೆ ರಾಜ್ಯದ ಆಟಗಾರರಿಗೆ ಅವಕಾಶ ಕಲ್ಪಿಸುತ್ತಿದೆ. ಕಳೆದ ವರ್ಷ ಆರ್ಸಿಬಿಯಲ್ಲಿದ್ದ ರಾಜ್ಯದ ಅನೀಶ್ವರ್ ಗೌತಮ್, ಲವನೀತ್ ಸಿಸೋಡಿಯಾ ಆಡುವ ಅವಕಾಶ ಪಡೆಯದೆ ತಂಡದಿಂದ ಹೊರಬಿದ್ದಿದ್ದಾರೆ. ಮೊದಲ ಬಾರಿ ಐಪಿಎಲ್ನಲ್ಲಿ ಆಡುವ ಹಂಬಲದಲ್ಲಿರುವ ರಾಯಚೂರಿನ ಆಲ್ರೌಂಡರ್ ಮನೋಜ್ ಭಾಂಡಗೆ ಈ ಬಾರಿ ಆರ್ಸಿಬಿಯಲ್ಲಿರುವ ಏಕೈಕ ಕನ್ನಡಿಗ. ಇವರ ಪ್ರತಿಭೆಯನ್ನಾದರೂ ಆರ್ಸಿಬಿ ಬಳಸಿಕೊಳ್ಳಬೇಕಿದೆ.