ಚಿಕ್ಕಮಗಳೂರು: ಕನ್ನಡ ವೈದ್ಯ ಸಾಹಿತಿ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಾ. ಎಚ್.ಡಿ.ಚಂದ್ರಪ್ಪಗೌಡ ಅವರ ಸಂಸ್ಮರಣೆ ಮತ್ತು ಸಾಹಿತ್ಯ ಸಂಪುಟಗಳಾದ ಆರೋಗ್ಯಲೋಕ, ವಿಜ್ಞಾನಲೋಕ ಪುಸ್ತಕಗಳ ಬಿಡುಗಡೆ ಸಮಾರಂಭವನ್ನು ಮಾ.10ರಂದು ಬೆಳಗ್ಗೆ 10ಕ್ಕೆ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದೆ ಎಂದು ಕನ್ನಂಗಿಯ ಎಚ್.ಸಿ.ಆಶಾ ಶೇಷಾದ್ರಿ ತಿಳಿಸಿದರು.
ಕನ್ನಡ ವಿಶ್ವವಿದ್ಯಾಲಯ ಹಂಪಿ ಪ್ರಕಟಿಸಿರುವ ಡಾ. ಎಚ್.ಡಿ.ಚಂದ್ರಪ್ಪಗೌಡ ಅವರ ಸಾಹಿತ್ಯ ಕೃತಿಗಳ ಬಿಡುಗಡೆ ಸಮಾರಂಭದ ಅಧ್ಯಕ್ಷತೆಯನ್ನು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ. ಡಿ.ವಿ.ಪರಮಾನ್ ಶಿವಮೂರ್ತಿ ವಹಿಸಲಿದ್ದಾರೆ. ವೈದ್ಯ ಸಾಹಿತಿ ಡಾ. ಕೆ.ಆರ್.ಶ್ರೀಧರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಪದ್ಮಶ್ರೀಪುರಸ್ಕೃತ ಡಾ. ಸಿ.ಆರ್.ಚಂದ್ರಶೇಖರ್ ಅವರು ಸಾಹಿತ್ಯ ಸಂಪುಟ ಬಿಡುಗಡೆ ಮಾಡುವರು. ಮುಖ್ಯ ಅತಿಥಿಗಳಾಗಿ ಹಂಪಿ ಕನ್ನಡ ವಿವಿ ಕುಲಸಚಿವ ಡಾ. ವಿಜಯ್ ಪೂಣಚ್ಚ ತಂಬಂಡ, ನವಕರ್ನಾಟಕ ಪಬ್ಲಿಕೇಷನ್ ಕಾರ್ಯನಿರ್ವಾಹಕ ನಿರ್ದೇಶಕ ರಮೇಶ್ ಉಡುಪ, ಹಂಪಿ ಕನ್ನಡ ವಿವಿ ಪ್ರಸಾರಾಂಗ ನಿರ್ದೇಶಕ ಡಾ. ಮಾಧವ ಪೆರಾಜೆ ಭಾಗವಹಿಸುವರು. ಸಾಹಿತ್ಯ ಸಂಪುಟಗಳ ಪರಿಚಯವನ್ನು ಶಿವಮೊಗ್ಗದ ಅರವಳಿಕೆ ವೈದ್ಯಶಾಸ್ತ್ರ ಪ್ರಾಧ್ಯಾಪಕ ಡಾ. ಗುರುದತ್ ನಡೆಸಿಕೊಡಲಿದ್ದಾರೆ ಎಂದು ಹೇಳಿದರು. ಪ್ರಮುಖರಾದ ಶೇಷಾದ್ರಿ, ಎಂ.ಎ.ರಮೇಶ್ ಹೆಗ್ಡೆ ಇದ್ದರು