ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕರೊನಾ ಸೋಂಕು ಮಂಗಳವಾರ 1 ಪಾಸಿಟಿವ್ ಹಾಗೂ 8 ನೆಗೆಟಿವ್ ವರದಿ ಬಂದಿದೆ.
ಸುಳ್ಯ ತಾಲೂಕು ಅಜ್ಜಾವರ ಗ್ರಾಮದ ನಿವಾಸಿಯಲ್ಲಿ ಕರೊನಾ ಸೋಂಕು ದೃಢಪಟ್ಟಿದೆ. ಈ ವ್ಯಕ್ತಿ ಮಾ.18ರಂದು ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನದಲ್ಲಿ ದುಬೈಯಿಂದ ಆಗಮಿಸಿದ್ದರು. ತಪಾಸಣೆ ಸಂದರ್ಭ ಯಾವುದೇ ಲಕ್ಷಣಗಳು ಕಂಡು ಬಾರದೆ ಇದ್ದುದರಿಂದ ಮನೆಯಲ್ಲೇ ಕ್ವಾರಂಟೈನ್ ಆಗಲು ಆರೋಗ್ಯ ಇಲಾಖೆ ಸೂಚನೆ ನೀಡಿತ್ತು.
ಈ ವ್ಯಕ್ತಿ ಸ್ನೇಹಿತನೊಂದಿಗೆ ಕಾರಿನಲ್ಲಿ ಸುಳ್ಯಕ್ಕೆ ಪ್ರಯಾಣಿಸಿ ತಮ್ಮ ಮನೆಯಲ್ಲೇ ಕ್ವಾರಂಟೈನ್ ಆಗಿದ್ದರು. ಬಳಿಕ ರೋಗ ಲಕ್ಷಣಗಳು ಕಾಣಿಸಿಕೊಂಡು ಮಾ.28ರಂದು ಸುಳ್ಯ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದರು. ಮಾ.30ರಂದು ಅವರ ಗಂಟಲಿನ ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಮಾ.31ರಂದು ಲಭ್ಯವಾದ ವರದಿಯಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ಅವರನ್ನು ಮಂಗಳವಾರ ಮಧ್ಯಾಹ್ನ ಸುಳ್ಯ ಆಸ್ಪತ್ರೆಯಿಂದ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕರೊನಾ ವೈರಸ್ ಶಂಕೆಯಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 5 ಮಂದಿಯನ್ನು ಆಸ್ಪತ್ರೆಯ ನಿಗಾ ವಿಭಾಗಕ್ಕೆ ದಾಖಲು ಮಾಡಲಾಗಿದೆ. ಜಿಲ್ಲೆಯಲ್ಲಿ 41 ಮಂದಿಯನ್ನು ತಪಾಸಣೆ ನಡೆಸಲಾಗಿದೆ. ಇದುವರೆಗೆ 38,220 ಮಂದಿಯನ್ನು ತಪಾಸಣೆ ಮಾಡಲಾಗಿದೆ. 5875ಮಂದಿ ಮನೆ ನಿಗಾದಲ್ಲಿದ್ದಾರೆ. 28 ಮಂದಿ ಇಎಸ್ಐ ಆಸ್ಪತ್ರೆಯಲ್ಲಿ ನಿಗಾದಲ್ಲಿದ್ದಾರೆ. 17 ಮಂದಿಯ ಗಂಟಲಿನ ದ್ರವವನ್ನು ತಪಾಸಣೆಗೆ ಕಳುಹಿಸಲಾಗಿದೆ.
ಜಿಲ್ಲಾಡಳಿತದ ಗಮನಕ್ಕೆ ಬಂದಿರುವ ಅಂತರ್ರಾಜ್ಯ ವಲಸೆ ಕಾರ್ಮಿಕರ ಮನವಿ, ಕರೆಗಳಿಗೆ ಸಂಬಂಧಿಸಿ ಕಾರ್ಮಿಕ ಇಲಾಖೆ ಮತ್ತು ಮಂಗಳೂರು ಮಹಾನಗರಪಾಲಿಕೆ ಇವರ ಮೂಲಕ ಆಹಾರ ಪೂರೈಕೆ ನಡೆಯುತ್ತಿದೆ ಎಂದು ಜಿಲ್ಲಾಡಳಿತದ ಪ್ರಕಟಣೆ ತಿಳಿಸಿದೆ.
ಉಡುಪಿಯಲ್ಲಿ 14 ನೆಗೆಟಿವ್: ಉಡುಪಿ: ಜಿಲ್ಲೆಯಲ್ಲಿ ಕರೊನಾ ವೈರಸ್ ಶಂಕಿತ ಪ್ರಕರಣಗಳಿಗೆ ಸಂಬಂಧಿಸಿ 14 ಮಂದಿಯ ವರದಿ ನೆಗೆಟಿವ್ ಬಂದಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ. ಮಂಗಳವಾರ ಶಂಕಿತ ರೋಗ ಲಕ್ಷಣಕ್ಕೆ ಸಂಬಂಧಿಸಿ 5 ಮಂದಿ ವಿವಿಧ ಆಸ್ಪತ್ರೆ ಐಸೊಲೇಷನ್ ವಾರ್ಡ್ಗೆ ದಾಖಲಾಗಿದ್ದಾರೆ. ಒಬ್ಬ ಮಹಿಳೆ, ನಾಲ್ವರು ಪುರುಷರು. ಇದರಲ್ಲಿ ಇಬ್ಬರು ವಿದೇಶ ಪ್ರಯಾಣ ಮಾಡಿದವರಾಗಿದ್ದಾರೆ. ಇನ್ನೂ 20 ವರದಿ ಬರಲು ಬಾಕಿ ಇದೆ. ಜಿಲ್ಲೆಯಲ್ಲಿ ಇಲ್ಲಿವರೆಗೆ ತಪಾಸಣೆಗೆ ಒಳಗಾದವರು 2546, ಮನೆ ಮತ್ತು ಆಸ್ಪತ್ರೆ ಕ್ವಾರಂಟೈನ್ನಲ್ಲಿರುವರು: 895 ಮಂದಿ, ನೆಗೆಟಿವ್ 137, ಪಾಸಿಟಿವ್ 3 ಪ್ರಕರಣಗಳಿವೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
ಕಾಸರಗೋಡಿನಲ್ಲಿ ಇಬರು ಸೋಂಕಿತರು: ಕಾಸರಗೋಡು: ಜಿಲ್ಲೆಯಲ್ಲಿ ಮಂಗಳವಾರ ಎರಡು ಕರೊನಾ ಪಾಸಿಟಿವ್ ಪ್ರಕರಣ ಕಂಡುಬಂದಿದೆ. ಈ ಮೂಲಕ ಕಾಸರಗೋಡು ಜಿಲ್ಲೆಯಲ್ಲಿ ಕರೊನಾ ವೈರಸ್ ಸೋಂಕಿತರ ಸಂಖ್ಯೆ 108ಕ್ಕೇರಿದೆ. ಜಿಲ್ಲೆಯಲ್ಲಿ ಒಟ್ಟು 7733 ಮಂದಿ ನಿಗಾದಲ್ಲಿದ್ದು, ಇದರಲ್ಲಿ 7570 ಮಂದಿ ಮನೆಗಳಲ್ಲಿ ಹಾಗೂ 163 ಮಂದಿ ಆಸ್ಪತ್ರೆಗಳಲ್ಲಿ ನಿಗಾದಲ್ಲಿದ್ದಾರೆ.