ಬೆಂಗಳೂರು : ಅಬಕಾರಿ ಸಬ್ಇನ್ಸ್ಪೆಕ್ಟರ್ ಹುದ್ದೆ ಕೊಡಿಸುವುದಾಗಿ ಆಮಿಷವೊಡ್ಡಿ ಹಲವು ಅಭ್ಯರ್ಥಿಗಳಿಂದ 1.67 ಕೋಟಿ ರೂ.ಗಳನ್ನು ಪಡೆದು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದ್ದು, ವಿಧಾನಸೌಧ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ದಾವಣಗೆರೆ ಜಿಲ್ಲೆ ಹೊಸಬಾವಿ ಸರ್ಕಲ್ನ ಎಚ್.ಬಿ.ಜಯದೇವ ಎಂಬುವರು ದೂರು ನೀಡಿದ್ದಾರೆ. ಇದರನ್ವಯ ಹೊನ್ನಾಳಿ ತಾಲ್ಲೂಕು ಕುಂದೂರು ಗ್ರಾಮದ ಕೆ.ಎಚ್.ಅರುಣ್ ಕುಮಾರ್ ಎಂಬುವರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಪ್ರಧಾನಿ ಮೋದಿ ನೂತನ ಸಚಿವ ಸಂಪುಟದಲ್ಲಿ 27 ಒಬಿಸಿ ಮಂತ್ರಿಗಳು
ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯನೆಂದು ನಂಬಿಸಿದ ಅರುಣ್ಕುಮಾರ್, ನನಗೆ ಆಯೋಗದಲ್ಲಿ ಎಲ್ಲ ಲಿಂಕ್ ಇದೆ. ಅಬಕಾರಿ ಸಬ್ಇನ್ಸ್ಪೆಕ್ಟರ್ ನೌಕರಿ ಕೊಡಿಸುತ್ತೆನೆ. ಅದಕ್ಕೆ ತುಂಬಾ ಹಣ ಕೊಡಬೇಕೆಂದು ಕೇಳಿದ್ದರು. ಅದಕ್ಕೆ ಒಪ್ಪಿದಾಗ ಇಬ್ಬರಿಂದ 70 ಲಕ್ಷ ರೂ. ಖರ್ಚು ಆಗುತ್ತೆ ಎಂದು ಹೇಳಿದ್ದರು. ನಾನು ಮತ್ತು ನನ್ನ ಸ್ನೇಹಿತ 15 ಲಕ್ಷ ರೂ.ಗಳನ್ನು ಅರುಣ್ಕುಮಾರ್ ಬ್ಯಾಂಕ್ ಖಾತೆಗೆ ಜಮಾ ಮಾಡಿದೆವು. ಇದಾದ ಮೇಲೆ 20 ಲಕ್ಷ ರೂ. ಆರ್ಟಿಜಿಎಸ್ನಲ್ಲಿ ವರ್ಗಾವಣೆ ಮಾಡಲಾಗಿತ್ತು.
ಇದೇ ರೀತಿ ಅಂದಾಜು 8 ರಿಂದ 10 ಮಂದಿ ಅಭ್ಯರ್ಥಿಗಳು, ಬೆಂಗಳೂರಿನ ಎಂಎಸ್ ಬಿಲ್ಡಿಂಗ್ ಪಾರ್ಕಿಂಗ್ ಬಳಿ ಭೇಟಿ ಮಾಡಿ, ಲಕ್ಷಾಂತರ ರೂ.ಗಳನ್ನು ನೀಡಿದ್ದಾರೆ. ಒಟ್ಟಾರೆ 1.67 ಕೋಟಿ ರೂ.ಗಳನ್ನು ಅರುಣ್ಕುಮಾರ್ಗೆ ತಲುಪಿಸಲಾಗಿದೆ. ಆದರೆ, ಇಲ್ಲಿಯವರೆಗೂ ನೌಕರಿ ಕೊಡಿಸಿಲ್ಲ. ಕೇಳಿದರೆ ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯನೆಂದು ರಾಜ್ಯಪಾಲರು ಕೊಟ್ಟಿರುವ ಪತ್ರವನ್ನು ಮೊಬೈಲ್ನಲ್ಲಿ ತೋರಿಸಿ ಸಬೂಬು ಹೇಳಿ ಕಾಲ ಮುಂದೂಡುತ್ತಿದ್ದಾನೆ. ಇದೇ ರೀತಿ ಹಲವರಿಗೆ ಮೋಸ ಮಾಡಿರುವ ಅನುಮಾನವಿದ್ದು, ಈ ಬಗ್ಗೆ ತನಿಖೆ ನಡೆಸಿ ನ್ಯಾಯ ಕೊಡಿಸುವಂತೆ ದೂರು ನೀಡಿರುವ ಜಯದೇವ ಮನವಿ ಮಾಡಿದ್ದಾರೆ ಎನ್ನಲಾಗಿದೆ.
ನಟ ಶಾಹಿದ್ ಕಪೂರ್ 6ನೇ ವಿವಾಹ ವಾರ್ಷಿಕೋತ್ಸವ
ಸಿಎಂ ಮಮತಾ ಬ್ಯಾನರ್ಜಿಗೆ 5 ಲಕ್ಷ ರೂ. ದಂಡ ವಿಧಿಸಿದ ಹೈಕೋರ್ಟ್