ಹುಬ್ಬಳ್ಳಿ: ಆರ್ಟಿಐ ಕಾರ್ಯಕರ್ತ ರಮೇಶ ಭಾಂಡಗೆ ಹತ್ಯೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಎಸ್ಎಸ್ಕೆ ಸಮಾಜ ದೊಡ್ಡ ಮಟ್ಟದ ಹೋರಾಟಕ್ಕೆ ಚಿಂತನೆ ನಡೆಸುತ್ತಿದೆ.
ಕೊಲೆಯ ಹಿಂದೆ ದೊಡ್ಡ ಸಂಚು ಇದೆ. ಈಗಾಗಲೇ ಬಂಧಿತನಾಗಿರುವ ಆರೋಪಿ ಇಜಾಜ ಅಹಮ್ಮದ ಬಂಕಾಪುರನ ಹಿಂದೆ ಬೇರೆ ಯಾರೋ ಇದ್ದಾರೆ. ಹಲವು ಕೋಟಿ ರೂ.ಗಳ ಆಸ್ತಿಯ ಒಡೆಯನಾಗಿದ್ದ ರಮೇಶ ಭಾಂಡಗೆ ಕೊಡುಗೈ ದಾನಿಯೂ ಆಗಿದ್ದರು. ಅಂಥವರು ತನಗೆ ಕೆಲವು ಲಕ್ಷ ರೂ. ವಂಚಿಸಿದ್ದಕ್ಕಾಗಿ ಕೊಲೆ ಮಾಡಿದ್ದೇನೆ ಎಂದು ಬಂಧಿತನು ಪೊಲೀಸರೆದುರು ನೀಡಿರುವ ಹೇಳಿಕೆ ಸಂಶಯ ಉಂಟುಮಾಡಿದೆ. ಕೊಲೆ ಹಿಂದೆ ಪ್ರಭಾವಿಗಳ ಕೈವಾಡವಿದ್ದು, ಕೂಲಂಕಷ ತನಿಖೆಯಾಗಬೇಕಿದೆ. ಅನಿವಾರ್ಯ ಎನಿಸಿದರೆ ಪ್ರಕರಣವನ್ನು ಸಿಬಿಐಗೆ ವಹಿಸಲು ಸರ್ಕಾರವನ್ನು ಕೋರಬೇಕು ಎಂದು ಸಮಾಜದ ಯುವಕರು ಒತ್ತಾಯಿಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ, ಹೋರಾಟದ ರೂಪರೇಷೆ ಸಿದ್ಧಗೊಳಿಸಲಾಗುತ್ತಿದೆ ಎಂದು ಎಸ್ಎಸ್ಕೆ ಚಿಂತನ ಮಂಥನ ವೇದಿಕೆ ಅಧ್ಯಕ್ಷ ಹನುಮಂತಸಾ ನಿರಂಜನ ಪತ್ರಿಕೆಗೆ ಪ್ರತಿಕ್ರಿಯಿಸಿದ್ದಾರೆ.
ಮಂಟೂರ ರಸ್ತೆಯ ಶೀಲಾ ಕಾಲನಿ ನಿವಾಸಿ ಸಾರಿಗೆ ಸಂಸ್ಥೆ ಚಾಲಕ ಇಜಾಜ ಅಹಮ್ಮದ ಬಂಕಾಪುರ (43) ತಾನೇ ಕೊಲೆ ಮಾಡಿರುವುದಾಗಿ ಶಹರ ಠಾಣೆಗೆ ಶರಣಾಗಿದ್ದಾನೆ. ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿರುವುದು ಆತನ ಚಿತ್ರವೇ. ಆತನ ಹಿಂದೆ ಯಾರಾದರೂ ಇದ್ದಾರೆಯೆ ಎಂಬುದು ತನಿಖೆಯಿಂದ ಗೊತ್ತಾಗಲಿದೆ ಎಂದು ಪೊಲೀಸರು ಹೇಳುತ್ತಾರೆ.
ರಮೇಶ ಭಾಂಡಗೆ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೋರಾಟದ ಕುರಿತು ಸಮಾಜದ ಪ್ರಮುಖರೊಂದಿಗೆ ರ್ಚಚಿಸಲಾಗುತ್ತಿದೆ. ಪೊಲೀಸ್ ತನಿಖೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಶೀಘ್ರದಲ್ಲೇ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು.
| ನೀಲಕಂಠಸಾ ಜಡಿ, ಮುಖ್ಯ ಧರ್ಮದರ್ಶಿ, ಎಸ್ಎಸ್ಕೆ ಪಂಚ ಕಮಿಟಿ