ಹುಣಸೂರು: ರಾಜ್ಯ ಸರ್ಕಾರ ಘೋಷಿಸಿರುವ ಪ್ರತಿ ಭಾನುವಾರದ ಸಂಪೂರ್ಣ ಲಾಕ್ಡೌನ್ಗೆ ಹುಣಸೂರಿನಲ್ಲೂ ಉತ್ತಮ ಸ್ಪಂದನೆ ವ್ಯಕ್ತವಾಯಿತು.
ಎರಡನೆಯ ಭಾನುವಾರದ ಲಾಕ್ಡೌನ್ಗೆ ಹುಣಸೂರು ಪಟ್ಟಣ ಸಂಪೂರ್ಣ ಸ್ತಬ್ಧವಾಯಿತು. ಪಟ್ಟಣದ ಗ್ರಾಮಾಂತರ ಬಸ್ನಿಲ್ದಾಣ ಬಿಕೋ ಎನ್ನುತ್ತಿತ್ತು. ಆಟೋ, ಟ್ಯಾಕ್ಸಿ, ಕ್ಯಾಬ್ಗಳು, ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ಗಳು ಸಂಚಾರವನ್ನು ನಿಲ್ಲಿಸಿದ್ದವು. ಪಟ್ಟಣದ ಬಸ್ನಿಲ್ದಾಣದ ರಸ್ತೆ, ಕಲ್ಪತರು ವೃತ್ತ, ಜೆಎಲ್ಬಿ ರಸ್ತೆ, ಎಸ್ಜೆ ರಸ್ತೆ, ರೋಟರಿ ವೃತ್ತ, ಸೇತುವೆ, ಎಚ್.ಡಿ.ಕೋಟೆ ವೃತ್ತ, ವಿಶ್ವೇಶ್ವರಯ್ಯ ವೃತ್ತ, ಬಜಾರ್ರಸ್ತೆ ಸೇರಿದಂತೆ ಎಲ್ಲ ಪ್ರಮುಖ ರಸ್ತೆಗಳು ಖಾಲಿಖಾಲಿಯಾಗಿದ್ದವು.
ಆಸ್ಪತ್ರೆಯಲ್ಲಿ ರೋಗಿಗಳಿಲ್ಲ: ಪಟ್ಟಣದ ಡಿ.ದೇವರಾಜ ಅರಸು ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಇಳಿಮುಖವಾಗಿತ್ತು. ವಾರದ ಹಿಂದೆ ಹೆರಿಗೆಗೆ ಬಂದಿದ್ದ ಮಹಿಳೆಗೆ ಸೋಂಕು ದೃಢಪಟ್ಟಿದ್ದ ಹಿನ್ನೆಲೆಯಲ್ಲಿ ಮೂರು ದಿನಗಳ ಕಾಲ ಆಸ್ಪತ್ರೆಯನ್ನು ಸೀಲ್ಡೌನ್ ಮಾಡಿ ಸ್ಯಾನಿಟೈಸ್ ಮಾಡಲಾಗಿತ್ತು. ನಿನ್ನೆಯಷ್ಟೆ (ಶನಿವಾರ ಜು.11) ಸೇವೆಗೆ ತೆರೆಯಲಾಗಿತ್ತು. ಆದರೆ ಭಾನುವಾರದ ಲಾಕ್ಡೌನ್ನಿಂದಾಗಿ ಗ್ರಾಮೀಣ ಭಾಗದ ಜನರ್ಯಾರೂ ಆಸ್ಪತ್ರೆ ಕಡೆಗೆ ಸುಳಿಯಲಿಲ್ಲ. ಇಂದಿರಾಕ್ಯಾಂಟೀನ್, ಹೊಟೇಲ್ ಉದ್ಯಮ ಎಲ್ಲವೂ ಬಂದ್ ಆಗಿತ್ತು.