ಮುಂಡಗೋಡ: ಮನಸ್ಸಿನಲ್ಲಿ ಭಾವನೆಗಳು ವ್ಯಕ್ತವಾಗಿ ಅಲ್ಲಿಯೇ ಅಡಕವಾಗಿ ಉಳಿಯುತ್ತವೆ. ಅದರಂತೆ ಹಿಂಜರಿತದಿಂದ ಬಡ ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಿಸುವ ಕುರಿತು ಹಳೇ ವಿದ್ಯಾರ್ಥಿಗಳ ಎದುರು ಪ್ರಸ್ತಾವನೆ ಇಟ್ಟಿದ್ದೇವು. ನಮ್ಮ ಪ್ರಸ್ತಾವನೆಗೆ ಓಗೊಟ್ಟ ಅವರು ಬಡ ವಿದ್ಯಾರ್ಥಿಗಳ ಜ್ಞಾನದ ಹಸಿವು ತಣಿಸಿದ್ದಾರೆ ಎಂದು ಪ್ರಾಂಶುಪಾಲ ವಿ.ಬಿ. ಲಮಾಣಿ ಹೇಳಿದರು.
ತಾಲೂಕಿನ ಮಳಗಿ ಪಂಚವಟಿ ನವೋದಯ ಶಾಲೆಯ ಹಳೆಯ ವಿದ್ಯಾರ್ಥಿ ಸಂಘವು ಶನಿವಾರ ಹಮ್ಮಿಕೊಂಡ ನವೋದಯ ವಿದ್ಯಾಲಯದ ಬಡ ವಿದ್ಯಾರ್ಥಿಗಳಿಗೆ ಟ್ಯಾಬ್ (ಮೊಬೈಲ್ ಸ್ಮಾರ್ಟ್ಫೋನ್) ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಟ್ಯಾಬ್ ವಿದ್ಯಾರ್ಥಿಗಳಿಗೆ ಬಹಳ ಉಪಯುಕ್ತವಾಗಿವೆ. ನೆಟ್ವರ್ಕ್ ಇಲ್ಲದ ಪ್ರದೇಶಗಳಲ್ಲಿ ಕೂಡ ಇವುಗಳನ್ನು ಉಪಯೋಗ ಮಾಡಬಹುದು. ಹಳೇ ವಿದ್ಯಾರ್ಥಿಗಳ ಸಹಾಯವನ್ನು ಎಂದೂ ಮರೆಯುವುದಿಲ್ಲ ಎಂದರು.
ಇದೇ ವೇಳೆ 30 ಬಡ ವಿದ್ಯಾರ್ಥಿಗಳಿಗೆ ಟ್ಯಾಬ್ (ಮೊಬೈಲ್ ಸ್ಮಾರ್ಟ್ಫೋನ್)ಗಳನ್ನು ವಿತರಿಸಲಾಯಿತು. ಹಳೆಯ ವಿದ್ಯಾರ್ಥಿಗಳ ಪರವಾಗಿ ಚಂದ್ರಶೇಖರ ಭಟ್ಟ ಮತ್ತು ಟ್ಯಾಬ್ ಸ್ವೀಕರಿಸಿದ ವಿದ್ಯಾರ್ಥಿಗಳ ಪರವಾಗಿ ಎಂ.ಎನ್. ರಾಧಿಕಾ ಮಾತನಾಡಿದರು.
ಉಪ ಪ್ರಾಂಶುಪಾಲೆ ಶೈನಿ ಮ್ಯಾಥ್ಯು, ಸಿಬ್ಬಂದಿ ಕೆ.ಸಿ. ಹುಬ್ಬಳ್ಳಿ, ಎ.ಜಿ. ಗೋವಿಂದಪ್ಪ, ಬಿ.ಎನ್. ಕಂಟಿಕರ, ಹಳೇ ವಿದ್ಯಾರ್ಥಿಗಳಾದ ಮೃತ್ಯುಂಜಯ ಬಿದಿರಿನಮಠ, ದಯಾನಂದ ಭಟ್ಟ, ಪ್ರತಿಮಾ ಕೋಟಿ, ರೂಪಾ ಅಂಗಡಿ, ರಾಜು ಮಡಿವಾಳ, ಶ್ರೀಧರ ನಾಯ್ಕ, ಶಿವನಗೌಡ ಪಾಟೀಲ ಇತರರಿದ್ದರು.