ಧಾರವಾಡ: ಎಲ್ಲದಕ್ಕೂ ಮನಸ್ಸು ಮೂಲ ಕಾರಣ. ಮನಸ್ಸು ಸ್ವಸ್ಥವಾಗಿದ್ದರೆ ಎಂತಹ ಸಾಧನೆಯನ್ನಾದರೂ ಮಾಡಬಹುದು ಎಂದು ಮನೋವೈದ್ಯ ಡಾ. ಆನಂದ ಪಾಂಡುರಂಗಿ ಹೇಳಿದರು.
ವಿಶ್ವ ಮಾನಸಿಕ ದಿನದ ಅಂಗವಾಗಿ ನಗರದಲ್ಲಿ ಇಂಡಿಯನ್ ಸೈಕ್ಯಾಟ್ರಿಕ್ ಸೊಸೈಟಿಯ ಕರ್ನಾಟಕ ಚಾಪ್ಟರ್ ವತಿಯಿಂದ ಖಾಸಗಿ ಹೋಟೆಲ್ನಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ಮನೋವೈದ್ಯರನ್ನು ಸತ್ಕರಿಸಿ ಅವರು ಮಾತನಾಡಿದರು.
ಮಾನಸಿಕ ಆರೋಗ್ಯದ ಬಗ್ಗೆ ಜನರಲ್ಲಿ ಇಂದಿಗೂ ತಪ್ಪು ತಿಳಿವಳಿಕೆ ಇದೆ. ಮನಸ್ಸಿಗೆ ಕಾಯಿಲೆ ಎಂದರೆ ಅದು ಹುಚ್ಚು ಮಾತ್ರ ಎಂಬ ಕಲ್ಪನೆ ಇಂದಿಗೂ ಇದೆ. ದೈಹಿಕ ಕಾಯಿಲೆಯಲ್ಲಿ ವಿಧಗಳಿರುವಂತೆ ಮಾನಸಿಕ ಕಾಯಿಲೆಗಳಲ್ಲಿಯೂ ವಿಧಗಳಿವೆ. ಕಾಯಿಲೆಯ ಆದಿಯಲ್ಲೇ ಮನೋವೈದ್ಯರಿಂದ ಚಿಕಿತ್ಸೆ ಪಡೆದು, ಸಲಹೆಗಳನ್ನು ಪಾಲಿಸಿದರೆ ಶೇ. 80ರಷ್ಟು ಮಾನಸಿಕ ರೋಗಗಳು ಗುಣವಾಗುತ್ತವೆ ಎಂದರು.
ಇಂಡಿಯನ್ ಸೈಕ್ಯಾಟ್ರಿಕ್ ಸೊಸೈಟಿ ಗೌರವ ಕಾರ್ಯದರ್ಶಿ ಡಾ. ಸೋಮಶೇಖರ ಬಿಜ್ಜಳ ಮಾತನಾಡಿ, ಮನೋವಿಜ್ಞಾನ ಮತ್ತು ವೈದ್ಯಕೀಯ ಕ್ಷೇತ್ರ ಹಿಂದಿಗಿಂತಲೂ ಹೆಚ್ಚು ಪ್ರಸ್ತುತ. ಮನುಷ್ಯನ ಮಾನಸಿಕ ತುಮುಲಗಳ ಆಳವಾದ ಅಧ್ಯಯನ ಮಾಡುವ ಹಾಗೂ ಅರಿಯುವ ಸಾಮರ್ಥ್ಯ ಇರುವ ಮನೋವೈದ್ಯರು ಲಭ್ಯವಿದ್ದಾರೆ ಎಂದರು.
ಇದೇವೇಳೆ ಹಿರಿಯ ಮನೋವೈದ್ಯರಾದ ಡಾ. ಶಿವಶಂಕರ ಪೋಳ, ಡಾ. ಎಂ.ಎನ್. ಸಿದ್ಧಾಂತಿ, ಡಾ. ಜಡ್.ಆರ್. ತಹಸೀಲ್ದಾರ್ ಅವರನ್ನು ಸನ್ಮಾನಿಸಲಾಯಿತು.
ಡಾ. ಆದಿತ್ಯ ಪಾಂಡುರಂಗಿ, ಡಾ. ಮಹೇಶ ಮಹದೇವಯ್ಯ, ಡಾ. ಸೋಮಶೇಖರ ಬಿಜ್ಜಳ, ಇತರರಿದ್ದರು.