ದಾವಣಗೆರೆ: ಪಂಜಾಬ್-ಹರಿಯಾಣ ಸೆಕ್ರೆಟರಿಯೇಟ್ನಲ್ಲಿ ಕರ್ತವ್ಯನಿರತ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್)ಯ ಯೋಧರೊಬ್ಬರು ವೈಯಕ್ತಿಕ ಕಾರಣಕ್ಕೆ ಗನ್ನಿಂದ ಗುಂಡು ಹಾರಿಸಿಕೊಂಡು ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹದಡಿ ಗ್ರಾಮದ ಆರ್.ಎಂ. ನಾಗಾರ್ಜುನ್ (33) ಮೃತ ಯೋಧ. ಚಂಢೀಗಡದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು ಕಾರಣ ತಿಳಿದುಬಂದಿಲ್ಲ. ಮಂಗಳವಾರ ಅವರ ಸ್ವಗ್ರಾಮ ದಾವಣಗೆರೆ ತಾಲೂಕಿನ ಹದಡಿ ಗ್ರಾಮಕ್ಕೆ ಪಾರ್ಥಿವ ಶರೀರ ಬರಲಿದೆ.
ದಿ. ಆರ್.ಕೆ. ಮಾರುತಿ-ಹನುಮಮ್ಮ ದಂಪತಿಯ ಪುತ್ರನಾದ ನಾಗಾರ್ಜುನ್, 7 ವರ್ಷದಿಂದ ಸೇನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಕಾಶ್ಮೀರ, ಕಲ್ಕೊತ್ತ, ದೆಹಲಿ ಸೇರಿ ಚಂಢೀಗಡದಲ್ಲಿ ಸೇವೆ ಸಲ್ಲಿಸಿದ್ದರು.
ಪತ್ನಿ ಶಿಲ್ಪಾ ಹಾಗೂ ಇಬ್ಬರು ಪುತ್ರಿಯರಿದ್ದಾರೆ. ನಾಗಾರ್ಜುನ ಅವರ ಪಾರ್ಥಿವ ಶರೀರ ಮಂಗಳವಾರ ಬೆಳಗ್ಗೆ ಬೆಂಗಳೂರು ಮೂಲಕ ದಾವಣಗೆರೆಗೆ ತಲುಪಲಿದೆ. ಕೆಲ ಸಮಯ ಅಂತಿಮ ದರ್ಶನಕ್ಕೆ ಇರಿಸಿ, ನಂತರ ಮೆರವಣಿಗೆ ನಡೆಸಲಾಗುವುದು. ಮಧ್ಯಾಹ್ನ 12 ಗಂಟೆಗೆ ಗ್ರಾಮದ ಸರ್ಕಾರಿ ಶಾಲೆ ಆವರಣದಲ್ಲಿ ಅಂತ್ಯಕ್ರಿಯೆ ನಡೆಸಲಾಗುವುದು. ಮರಣೋತ್ತರ ಪರೀಕ್ಷೆ ವಿವರವನ್ನು ಗ್ರಾಮಕ್ಕೆ ಬಂದು ತಿಳಿಸುವುದಾಗಿ ಸೇನೆಯ ಅಧಿಕಾರಿಗಳು ಹೇಳಿದ್ದಾರೆ ಎಂದು ಯೋಧನ ಸಂಬಂಧಿ ರಾಜಪ್ಪ ಪತ್ರಿಕೆಗೆ ತಿಳಿಸಿದ್ದಾರೆ.
ನಾಗಾರ್ಜುನ ಅವರ ಆತ್ಮಹತ್ಯೆಯ ಕಾರಣ ಖಚಿತವಾಗಿಲ್ಲ. ಅಂತ್ಯಕ್ರಿಯೆಯಲ್ಲಿ ಸರ್ಕಾರಿ ಗೌರವ ನೀಡಬೇಕೆ ಎಂಬುದರ ಬಗ್ಗೆ ಮಾಹಿತಿ ಪಡೆಯಲಾಗುವುದು ಎಂದು ಎಸ್ಪಿ ಸಿ.ಬಿ.ರಿಷ್ಯಂತ್ ತಿಳಿಸಿದ್ದಾರೆ.
—