ನರಗುಂದ: ಮಲಪ್ರಭಾ ನದಿ ತುಂಬಿ ಹರಿಯುತ್ತಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ತಾಲೂಕಿನ ಲಖಮಾಪುರ ಗ್ರಾಮಕ್ಕೆ ತಹಸೀಲ್ದಾರ್ ಎ.ಎಚ್. ಮಹೇಂದ್ರ, ಡಿವೈಎಸ್ಪಿ ಶಿವಾನಂದ ಕಟಗಿ ಶನಿವಾರ ಭೇಟಿ ನೀಡಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.
ಡಿವೈಎಸ್ಪಿ ಶಿವಾನಂದ ಕಟಗಿ ಮಾತನಾಡಿ, ವಿಪರೀತ ಮಳೆಗೆ ಭರ್ತಿಗೊಂಡಿರುವ ನವಿಲುತೀರ್ಥ ಜಲಾಶಯದಿಂದ ಈಗಾಗಲೇ 5 ಸಾವಿರ ಕ್ಯೂಸೆಕ್ ನೀರು ಮಲಪ್ರಭಾ ನದಿಗೆ ಹರಿ ಬಿಡಲಾಗಿದೆ. ಜಿಲ್ಲಾಡಳಿತದ ಮಾಹಿತಿ ಪ್ರಕಾರ, 10 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಹರಿಬಿಟ್ಟರೆ ಗ್ರಾಮವು ಸಂಪೂರ್ಣ ನಡುಗಡ್ಡೆಯಂತಾಗಿ ಸಂಪರ್ಕ ಕಳೆದುಕೊಳ್ಳಲಿದೆ. ಸದ್ಯಕ್ಕೆ ಹೆಚ್ಚುವರಿ ನೀರು ಬಿಡುವ ಸಾಧ್ಯತೆ ಕಡಿಮೆ. ಒಂದು ವೇಳೆ ಹೆಚ್ಚಿನ ನೀರನ್ನು ಹರಿಬಿಟ್ಟರೆ ಗ್ರಾಮಸ್ಥರಿಗೆ ತಾಲೂಕಾಡಳಿತ, ಜಿಲ್ಲಾಡಳಿತ, ಗ್ರಾಪಂ ಅಥವಾ ಪೊಲೀಸ್ ಇಲಾಖೆ ವತಿಯಿಂದ ನೀಡಲಾಗುವ ಸೂಚನೆಗಳನ್ನು ಪಾಲಿಸಲು ಸಿದ್ಧರಾಗಿರಬೇಕು ಎಂದರು.
ತಾಲೂಕಾಡಳಿತದ ವತಿಯಿಂದ ಈಗಾಗಲೇ ಪಕ್ಕದ ಬೆಳ್ಳೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾಳಜಿ ಕೇಂದ್ರ ಆರಂಭಿಸಲಾಗಿದೆ. ಕೇಂದ್ರಕ್ಕೆ ಬರಲು ಗ್ರಾಮಸ್ಥರು ಒಪ್ಪಿದರೆ ಈಗಿನಿಂದಲೇ ಸಕಲ ವ್ಯವಸ್ಥೆ ಕಲ್ಪಿಸಿಕೊಡಲಾಗುವುದು ಎಂದು ತಿಳಿಸಿದರು.
ತಾಪಂ ಇಒ ಚಂದ್ರಶೇಖರ ಕುರ್ತಕೋಟಿ, ಪಿಡಿಒ ಮಲ್ಲಪ್ಪ ವಾಲಿ, ಎಂ.ಜಿ. ಹಿರೇಮಠ, ಶಂಕರಗೌಡ ನಡಮನಿ, ಶಿವನಗೌಡ ನಡಮನಿ, ಪೂರ್ಣಾನಂದ ಹಳೇಮನಿ, ತಿಪ್ಪಣ್ಣ ಹರ್ಲಾರ, ಬಸನಗೌಡ ನಡಮನಿ, ಇತರರಿದ್ದರು.