ದಾವಣಗೆರೆ: ನಾಟಕ ಮಾಧ್ಯಮಕ್ಕೆ ಮನರಂಜನೆಯೊಂದೇ ಪ್ರಧಾನ ಉದ್ದೇಶವಲ್ಲ. ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸುತ್ತಿದೆ ಎಂದು ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಹೇಳಿದರು.
ನಗರದ ಚಿಂದೋಡಿ ಲೀಲಾ ಕಲಾಕ್ಷೇತ್ರದಲ್ಲಿ ಶನಿವಾರ ರಾತ್ರಿ ಶ್ರೀಗುರು ವಾದ್ಯವೃಂದ, ಬೆಳಗಾವಿಯ ಕನ್ನಡ ಕಲಾವಿದರ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ನಾಟಕ ಪ್ರದರ್ಶನ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಂದಿನ ಮೊಬೈಲ್, ಟಿವಿ ಹಾವಳಿ ನಡುವೆ ನಾಟಕ ಕಲೆಗೆ ಉತ್ತೇಜನ ನೀಡುವ ಅಗತ್ಯವಿದೆ. ಸಮಾಜಕ್ಕೆ ರಂಗಭೂಮಿ ನೀಡಿದ ಕೊಡುಗೆ ಅಪಾರ. ಈ ಕ್ಷೇತ್ರಕ್ಕೆ ಚಿಂದೋಡಿ ಲೀಲಾ ಕುಟುಂಬದ ಕಾಣಿಕೆ ದೊಡ್ಡದು. ಈ ಪರಂಪರೆ ಮುಂದುವರಿಸಿಕೊಂಡು ಹೋಗಬೇಕಿದೆ ಎಂದು ತಿಳಿಸಿದರು.
ಜಾನಪದ ತಜ್ಞ ಡಾ.ಎಂ.ಜಿ.ಈಶ್ವರಪ್ಪ ಮಾತನಾಡಿ ವೃತ್ತಿ ರಂಗಭೂಮಿಯ ತವರು ನೆಲವಾದ ದಾವಣಗೆರೆಯಲ್ಲಿ ಹಿಂದೆ ಐದು ನಾಟಕ ಕಂಪನಿಗಳಲ್ಲಿ ಏಕಕಾಲಕ್ಕೆ ಪ್ರದರ್ಶನಗಳಿದ್ದರೂ ಪ್ರೇಕ್ಷಕರು ಬರುತ್ತಿದ್ದರು. ಅಂತಹ ಗತವೈಭವ ಉಳಿದಿಲ್ಲ. ಸಂಘ-ಸಂಸ್ಥೆಗಳ ಜತೆಗೆ ಜನರಿಂದಲೂ ನಾಟಕಗಳಿಗೆ ಪ್ರೋತ್ಸಾಹ ಸಿಗಬೇಕಿದೆ ಎಂದು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ಮಾತನಾಡಿ ಕಲಾವಿದರ ಏಳಿಗೆಗೆ ಇಲಾಖೆ ಬದ್ಧವಾಗಿದೆ. ನಾಟಕ ಕಂಪನಿಗಳಿಗೆ ಕಾಯಕಲ್ಪ ನೀಡುವ ಉದ್ದೇಶದಿಂದ ಕಾಯಕಲ್ಪ ಯೋಜನೆಯಡಿ 1.18 ಕೋಟಿ ರೂ. ಅನುದಾನ ನೀಡಲಾಗಿದೆ. ಅನುದಾನ ಬಂದ ಕೂಡಲೇ ಕಲಾವಿದರಿಗೆ ಮಾಸಾಶನ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಹಿರಿಯ ರಂಗಕರ್ಮಿ ಚಿಂದೋಡಿ ಶಂಭುಲಿಂಗಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರಿಯ ಸಿವಿಲ್ ನ್ಯಾಯಾಧೀಶ ಮಹಾವೀರ ಎಂ. ಕರಣ್ಣೆನವರ್, ಹರಿಹರ ತಹಸೀಲ್ದಾರ್ ಪೃಥ್ವಿ ಸಾನಿಕಂ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್. ಅರುಣಕುಮಾರ್, ಕಾಂಗ್ರೆಸ್ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ ಇದ್ದರು.
ರಾಜೇಶ್ ಸಂಗಡಿಗರು ಸುಗಮ ಸಂಗೀತ ನಡೆಸಿಕೊಟ್ಟರು. ನಂತರ ‘ಸೋತು ಗೆದ್ದ ಸಾಧ್ವಿ’ ಸಾಮಾಜಿಕ ನಾಟಕ ಪ್ರದರ್ಶನಗೊಂಡಿತು.
—