ಬೆಳಗಾವಿ: ನಗರದ ಎಸ್.ಸಿ. ಮೋಟರ್ಸ್ ಮಾರುತಿ ನಗರದ ಬಳಿಯ ಬಾಗಲಕೋಟೆ& ಬೆಳಗಾವಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಕೊಳಚೆ ನೀರು ಸಂಗ್ರಹವಾಗುತ್ತಿದ್ದು, ನಾಗರಿಕರಿಗೆ ತೊಂದರೆಯಾಗುತ್ತಿದೆ.
ಅಮನ್ ನಗರ, ನ್ಯೂ ಗಾಂಧಿನಗರ, ಉಜ್ವಲ ನಗರ ಮಾರುತಿ ನಗರ ಸೇರಿ ಸುತ್ತಲಿನ ಪ್ರದೇಶದ ಚರಂಡಿ ನೀರು ರಾಷ್ಟ್ರೀಯ ಹೆದ್ದಾರಿಗೆ ಹರಿದು ಬರುತ್ತಿದ್ದು, ವಾಹನ ಸವಾರರು ಮೂಗು ಮುಚ್ಚಿಕೊಂಡು ಸಂಚರಿಸುವ ಪರಿಸ್ಥಿತಿ ಸೃಷ್ಟಿಯಾಗಿದೆ. ಬಾಗಲಕೋಟೆ&ಬೆಳಗಾವಿ ಹೆದ್ದಾರಿ ಪಕ್ಕದ ಪ್ರದೇಶಗಳಲ್ಲಿ ಒಳಚರಂಡಿ ವ್ಯವಸ್ಥೆ ಇಲ್ಲ. ಹೀಗಾಗಿ ಈ ಪ್ರದೇಶದಲ್ಲಿ ಖುಲ್ಲಾ ಜಾಗ ಹಾಗೂ ಹೊಲಗಳಲ್ಲಿ ಕೊಳಚೆ ನೀರು ಈಗ ರಾಷ್ಟ್ರೀಯ ಹೆದ್ದಾರಿಗೆ ಹರಿದು ಬರುತ್ತಿರುವುದರಿಂದ ಸಾರ್ವಜನಿಕರಿಗೆ ಕಿರಿಕಿರಿಯಾಗುತ್ತಿದೆ.
ವಿಮಾನ ನಿಲ್ದಾಣಕ್ಕೆ ಹೋಗುವ ರಸ್ತೆಯಾಗಿದ್ದರಿಂದ ಪ್ರತಿನಿತ್ಯ ಈ ರಸ್ತೆ ಮೂಲಕ ಗಣ್ಯ ವ್ಯಕ್ತಿ ಹಾದು ಹೋಗುತ್ತಾರೆ. ಜತೆಗೆ ವಿಮಾನ ನಿಲ್ದಾಣದ ಮೂಲಕ ಬೇರೆ ಬೇರೆ ನಗರಗಳಿಗೆ ತೆರುಳುವುದಕ್ಕೆ ಹೊರಗಿನಿಂದ ಬರುವ ಜನ ಇಲ್ಲಿಯ ಅವ್ಯವಸ್ಥೆ ಬಗ್ಗೆ ಆಡಿಕೊಳ್ಳುವಂತಾಗಿದೆ. ಈ ರಸ್ತೆಯ ಅಕ್ಕಪಕ್ಕ ಕೆಲವು ಅಕ್ರಮ ಬಡಾವಣೆಗಳು ಇವೆ.
ಅವು ಮಹಾನಗರ ಪಾಲಿಕೆಗೆ ಹಸ್ತಾಂತರವಾಗಿಲ್ಲ. ಹೀಗಾಗಿ ರಸ್ತೆ, ಒಳಚರಂಡಿ ಸೇರಿ ಮೂಲ ಸೌಕರ್ಯಗಳು ಇಲ್ಲ. 8&10 ಅಡಿ ರಸ್ತೆಗಳನ್ನು ಕಲ್ಪಿಸಲಾಗಿದ್ದು, ಇಲ್ಲಿಯ ಜನ ಕನಿಷ್ಠ ಸೌಲಭ್ಯದಲ್ಲೇ ಬದುಕುತ್ತಿದ್ದಾರೆ. ಅನಧಿಕೃತವಾಗಿ ಬಡಾವಣೆಗಳು ನಿರ್ಮಾಣವಾಗಿರುವುದರಿಂದ ಮಹಾನಗರ ಪಾಲಿಕೆಯಿಂದ ಯಾವುದೇ ಅಭಿವೃದ್ಧಿ ಕಾರ್ಯಗಳು ಆಗುವುದಿಲ್ಲ. ಹೀಗಾಗಿ ಈ ಪ್ರದೇಶದಲ್ಲಿ ಪ್ರಮುಖವಾಗಿ ಒಳಚರಂಡಿ ವ್ಯವಸ್ಥೆ ಇಲ್ಲದ್ದರಿಂದ ನಿವಾಸಿಗಳಿಗೆ ತೊಂದರೆಯಾಗುತ್ತಿದೆ.
ಜನಪ್ರತಿನಿಧಿಗಳು ಮನಸ್ಸು ಮಾಡುತ್ತಿಲ್ಲ: ಬಾಗಲಕೋಟೆ&ಬೆಳಗಾವಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಕೆಲವು ಅಕ್ರಮ ಬಡಾವಣೆಗಳನ್ನು ಸಕ್ರಮಗೊಳಿಸಿ, ಮೂಲ ಸೌಲಭ್ಯಗಳನ್ನು ಕಲ್ಪಿಕೊಡುವುದಕ್ಕೆ ಇಲ್ಲಿಯ ಜನಪ್ರತಿನಿಧಿಗಳು ಮನಸ್ಸು ಮಾಡುತ್ತಿಲ್ಲ. ಹೀಗಾಗಿ ಈ ಪ್ರದೇಶದ ನಿವಾಸಿಗಳು ದಶಕದಿಂದ ಮೂಲ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಬೆಳಗಾವಿ ಸ್ಮಾರ್ಟ್ಸಿಟಿ ಎಂಬ ಹೆಸರು ಪಡೆಯುತ್ತಿದೆ. ವಿಮಾನ ನಿಲ್ದಾಣಕ್ಕೆ ಹೋಗುವ ರಸ್ತೆ ಪಕ್ಕದಲ್ಲೇ ಕೊಳಚೆ ನೀರು ಸಂಗ್ರಹವಾಗುವುದು ಸ್ಮಾರ್ಟ್ಸಿಟಿ ಶೋಭೆ ತರುವುದಿಲ್ಲ ಎಂದು ನಾಗರಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಕೊಳಚೆ ನೀರು ಸಂಗ್ರಹವಾಗಿದ್ದರಿಂದ ಇಲ್ಲಿ ಗಬ್ಬು ವಾಸನೆ ಬರುತ್ತಿದೆ. ವಾಹನ ಸವಾರರು ಮೂಗು ಮುಚ್ಚಿಕೊಂಡು ಸಂಚರಿ ಸುತ್ತಿದ್ದಾರೆ. ಈ ರಸ್ತೆ ಮೂಲಕ ನಿತ್ಯ ಸಾವಿರಾರು ಜನರು ಹಾದು ಹೋಗುತ್ತಾರೆ. ಹೀಗಾಗಿ ಕೊಳಚೆ ನೀರು ಸಂಗ್ರಹವಾಗದಂತೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ವಹಿಸಬೇಕು.
| ಸಿದ್ದಪ್ಪ ಕಮತಗಿ, ವಾಹನ ಸವಾರ, ಸಾಂಬ್ರಾ
ಅನಧಿಕೃತ ಬಡಾವಣೆಗಳಿಗೆ ಮಾನವೀಯ ದೃಷ್ಟಿಯಿಂದ ರಸ್ತೆ, ನೀರು, ವಿದ್ಯುತ್ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ. ಅದಕ್ಕೆ ಪ್ರತಿಯಾಗಿ ಹೆಚ್ಚುವರಿಯಾಗಿ ಆಸ್ತಿ ತೆರಿಗೆ ಕಟ್ಟಿಸಿಕೊಳ್ಳಲಾಗುತ್ತದೆ. ಆದರೆ, ಅಕ್ರಮ ಬಡಾವಣೆಗಳನ್ನು ಸಕ್ರಮಗೊಳಿಸುವುದಕ್ಕೆ ಪಾಲಿಕೆಗೆ ಸರ್ಕಾರದಿಂದ ಯಾವುದೇ ಪ್ರಸ್ತಾವನೆ ಇಲ್ಲ.
| ರುದ್ರೇಶ ಘಾಳಿ, ಆಯುಕ್ತ ಮಹಾನಗರ ಪಾಲಿಕೆ, ಬೆಳಗಾವಿ